ಮಂಗಳೂರಿನಲ್ಲಿ ಬಂದ್ಗೆ ಉತ್ತಮ ಸ್ಪಂದನೆ, ಅಲ್ಲಲ್ಲಿ ಪ್ರತಿಭಟನೆ
ಮಂಗಳೂರು, ಸೆ.10: ಇಂಧನಗಳ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ನೀಡಿರುವ ಬಂದ್ ಕರೆಗೆ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬಹುತೇಕ ಅಂಗಡಿಮುಂಗಟ್ಟುಗಳು ಮುಚ್ಚಿವೆ. ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ.
ಈ ನಡುವೆ ಮಾಜಿ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜ್ಯೋತಿ ಸರ್ಕಲ್(ಡಾ.ಬಿ.ಆರ್.ಅಂಬೇಡ್ಕರ್ ವೃತ್ತ) ಬಳಿ ರಸ್ತೆ ತಡೆ ನಡೆಸಿ ಇಂಧನ ಬೆಲೆಯೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನ
ಗರದಲ್ಲಿ ವಾಹನ ಸಂಚಾರ ವಿರಳವಾಗಿದೆ. ಓಡಾಡುತ್ತಿರುವ ಒಂದೆರಡು ಖಾಸಗಿ ವಾಹನಗಳು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳುಳ್ಳ ಪೋಸ್ಟರ್ಗಳನ್ನು ಅಂಟಿಸಿಕೊಂಡು ಇಂಧನ ಬೆಲೆಯೇರಿಕೆಯನ್ನು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ಕಂಕನಾಡಿಯಲ್ಲಿ ಇಂದು ಬೆಳಗ್ಗೆ ಎತ್ತಿನಗಾಡಿಯೊಂದು ಕೇಂದ್ರ ಸರಕಾರದ ವಿರುದ್ಧದ ಘೋಷಣೆಗಳುಳ್ಳ ಫಲಕಗಳನ್ನು ತೂಗುಹಾಕಿಕೊಂಡು ಸಂಚರಿಸುವ ಮೂಲಕ ಗಮನಸೆಳೆಯಿತು.
ಇದಕ್ಕೂ ಮೊದಲು ನಗರದ ಜ್ಯೋತಿ ಸರ್ಕಲ್ ಬಳಿ ಖಾಸಗಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ನಡೆದಿದೆ. ಇಲ್ಲಿ ಬೆಳಗ್ಗೆ ಟಯರ್ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆಗೆ ಯತ್ನ ನಡೆದಿದೆ. ಪೊಲೀಸರು ಟಯರ್ಗಳನ್ನು ತೆರವುಗೊಳಿಸಿದರು. ಪಂಪ್ವೆಲ್ ಬಳಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ.
ಕದ್ರಿ ಶಿವಭಾಗ್ನಲ್ಲಿ ಇಂದು ಬೆಳಗ್ಗೆ ತೆರೆದಿದ್ದ ಹೊಟೇಲ್ವೊಂದಕ್ಕೆ ಬೈಕ್ನಲ್ಲಿ ಹೆಲ್ಮೆಟ್ಧಾರಿಯಾಗಿ ಬಂದ ಇಬ್ಬರು ಕಲ್ಲೆಸೆದು ಪರಾರಿಯಾದ ಘಟನೆ ವರದಿಯಾಗಿದೆ.
ಇಲ್ಲಿನ ಶಿವಭಾಗ್ ಎಂಬ ಹೊಟೇಲ್ನಲ್ಲಿ ಈ ಘಟನೆ ನಡೆದಿದೆ. ಕಲ್ಲೆಸೆತದಿಂದ ಹೊಟೇಲ್ನ ಗಾಜಿಗೆ ಹಾನಿಯಾಗಿದೆ.