ಅನಿಲ ಭಾಗ್ಯ ಯೋಜನೆ: ಹೆಚ್ಚುವರಿ ಸಂಪರ್ಕ ಬಿಡುಗಡೆಗೆ ಸಿಎಂ ಕುಮಾರಸ್ವಾಮಿ ಮನವಿ
ಹೊಸದಿಲ್ಲಿ/ಬೆಂಗಳೂರು, ಸೆ. 10: ‘ಉಜ್ವಲಾ ಯೋಜನೆ’ಗೆ ಪೂರಕವಾಗಿರುವ ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ ಜಾರಿಗೊಳಿಸಲು ಬೆಂಬಲ ನೀಡುವಂತೆ ಹಾಗೂ ಹೆಚ್ಚುವರಿ ಸಂಪರ್ಕಗಳನ್ನು ಬಿಡುಗಡೆ ಮಾಡಲು ತೈಲ ಕಂಪೆನಿಗಳಿಗೆ ಸೂಚನೆ ನೀಡಬೇಕು ಎಂದು ಸಿಎಂ ಕುಮಾರಸ್ವಾಮಿ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪ್ರಧಾನಿ ಉಜ್ವಲಾ ಯೋಜನೆಯಡಿ ಉಚಿತ ಎಲ್ಪಿಜಿ ಪಡೆಯಲು ಆಯ್ಕೆಯಾಗದ ಬಡವರಿಗೆ ಉಚಿತ ಎಲ್ಪಿಜಿ ಸಂಪರ್ಕ, ಎರಡು ಉಚಿತ ರಿಫಿಲ್ ಗಳನ್ನು ನೀಡುವ ಸಿಎಂ ಅನಿಲ ಭಾಗ್ಯ ಯೋಜನೆ ರೂಪಿಸಲಾಗಿದೆ.
ಮುಂದಿನ 18ರಿಂದ 24ತಿಂಗಳುಗಳಲ್ಲಿ 30 ಲಕ್ಷ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಸ್ತರಿಸಲು ಉದ್ದೇಶಿಸಲಾಗಿದೆ. ಫೆಬ್ರವರಿ 2018ರಲ್ಲಿಯೇ ಈ ಯೋಜನೆಗೆ ಚಾಲನೆ ನೀಡಿದ್ದರೂ, ಚುನಾವಣೆಯ ಕಾರಣ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಈ ಯೋಜನೆಯ ಭಾಗೀದಾರರ ಸಭೆ ನಡೆಸಿದಾಗ ತೈಲ ಮಾರಾಟ ಕಂಪೆನಿಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ 1ಲಕ್ಷ ಸಂಪರ್ಕಗಳನ್ನು ಬಿಡುಗಡೆ ಮಾಡಲು ಸಮ್ಮತಿಸಿದ್ದರು. ಹಾಗೂ ಠೇವಣಿ ಪಾವತಿ ಹಾಗೂ ಎರಡು ರಿಫಿಲ್ ಗಳ ಶುಲ್ಕ ಪಾವತಿ ಸರಕಾರ ಮಾಡುತ್ತದೆ ಎನ್ನುವುದನ್ನು ಹೊರತು ಪಡಿಸಿ ಈ ಫಲಾನುಭವಿಗಳನ್ನು ಇತರ ಅರ್ಜಿದಾರರಂತೆಯೇ ಪರಿಗಣಿಸಲು ಒಪ್ಪಿದ್ದವು.
ಈ ವೇಳೆ ಪ್ರತಿ ತಿಂಗಳು 50 ಸಾವಿರಕ್ಕೂ ಹೆಚ್ಚು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಸಂಪರ್ಕಗಳನ್ನು ಒದಗಿಸಬೇಕಾದರೆ ತಮ್ಮ ಸಂಪನ್ಮೂಲಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ತೈಲ ಕಂಪೆನಿಗಳು ತಿಳಿಸಿದ್ದವು. ಕರ್ನಾಟವನ್ನು ಸೀಮೆಎಣ್ಣೆ ಮುಕ್ತ ಮಾಡುವ ಗುರಿ ಸಾಧಿಸಲು ಅನಿಲ ಭಾಗ್ಯ ಯೋಜನೆಯಡಿ ತಿಂಗಳಿಗೆ ಕನಿಷ್ಠ 1.5ಲಕ್ಷದಿಂದ 2ಲಕ್ಷ ಸಂಪರ್ಕಗಳನ್ನು ಒದಗಿಸುವ ಅಗತ್ಯವಿದೆ. ಸರಕಾರದಿಂದ ಭದ್ರತಾ ಠೇವಣಿಯನ್ನು ವಿತರಕರಿಗೆ ಪಾವತಿಸಲು ಅವಕಾಶ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ತೈಲ ಕಂಪೆನಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದರು.
ಇದಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ವೇಳೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಜರಿದ್ದರು.