ಸಾಲದ ಕಂತು ಪಾವತಿಸಲು ಹಣ ಬೇಕಿತ್ತು, ಅದಕ್ಕೆ ಕೊಲೆ ಮಾಡಿದೆ
ಎಚ್ಡಿಎಫ್ಸಿ ಬ್ಯಾಂಕ್ ಅಧಿಕಾರಿಯ ಕೊಲೆ ಆರೋಪಿಯ ಹೇಳಿಕೆ
ಮುಂಬೈ, ಸೆ.11: ‘‘ಯಾವುದು ನಡೆದಿದೆಯೋ ಅದು ನಡೆದು ಹೋಯಿತು ಸಾರ್. ನಾನೇ ಕೊಲೆ ಮಾಡಿದೆ. ವಾಹನದ ಸಾಲದ ಕಂತು ಪಾವತಿಸಲು ಹಣದ ಅಗತ್ಯವಿತ್ತು. ಅವರನ್ನು (ಕೊಲೆಯಾದ ಅಧಿಕಾರಿ) ದರೋಡೆ ಮಾಡುವ ಉದ್ದೇಶವಿತ್ತು. ಆದರೆ ಅವರು ಬೊಬ್ಬೆ ಹೊಡೆದಾಗ ಕೊಲ್ಲಬೇಕಾಯಿತು’’. ಸೆ.5ರಂದು ನಡೆದ ಎಚ್ಡಿಎಫ್ಸಿ ಬ್ಯಾಂಕ್ನ ಅಧಿಕಾರಿ ಸಿದ್ಧಾರ್ಥ್ ಸಾಂಘ್ವಿಯವರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ 21ರ ಹರೆಯದ ಸರ್ಫ್ರಾಝ್ ಶೇಖ್ ನ್ಯಾಯಾಧೀಶರೆದುರು ನೀಡಿದ ಹೇಳಿಕೆ ಇದು. ಕಮಲಾ ಮಿಲ್ ಆವರಣದಲ್ಲಿರುವ ಬ್ಯಾಂಕ್ನ ಶಾಖೆಯಲ್ಲಿ ಸೆ.5ರಂದು ಸಂಜೆ ಬ್ಯಾಂಕ್ನ ಕಾರ್ಯ ಮುಗಿಸಿ ಮನೆಗೆ ತೆರಳಲು ವಾಹನ ಪಾರ್ಕಿಂಗ್ ಸ್ಥಳಕ್ಕೆ ತೆರಳಿದ್ದ ಸಾಂಘ್ವಿಯನ್ನು ಅಡ್ಡಗಟ್ಟಿದ್ದ ಆರೋಪಿ ಸರ್ಫ್ರಾಝ್ ಹಣ ನೀಡುವಂತೆ ಬೆದರಿಸಿದ್ದಾನೆ. ಆದರೆ ಸಾಂಘ್ವಿ ಜೋರಾಗಿ ಬೊಬ್ಬೆ ಹೊಡೆದಾಗ ಅವರನ್ನು ಇರಿದು ಕೊಲೆ ಮಾಡಿದ್ದು ಬಳಿಕ ಅವರ ಕಾರಿನಲ್ಲೇ ಮೃತದೇಹವನ್ನು ಹೊರಗೆ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ. ಸರ್ಫ್ರಾಝ್ ಬೈಕ್ ಒಂದನ್ನು ಖರೀದಿಸಿದ್ದು ಇದರ ಸಾಲದ ಕಂತು 35,000 ರೂ. ಪಾವತಿಸಲು ಬಾಕಿಯಿತ್ತು. ಈ ಹಿನ್ನೆಲೆಯಲ್ಲಿ ದರೋಡೆ ನಡೆಸುವ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಸೋಮವಾರ ಹಾಜರುಪಡಿಸಲಾಗಿದ್ದು ಸೆ.19ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಈ ಕೃತ್ಯವನ್ನು ಆರೋಪಿ ಒಬ್ಬನೇ ಮಾಡಿದ್ದಾನೆಯೇ ಅಥವಾ ಇತರರ ಕೈವಾಡವಿದೆಯೇ ಎಂದು ತನಿಖೆ ನಡೆಸಬೇಕಿದೆ. ಅಲ್ಲದೆ ಸಾಂಘ್ವಿಯವರ ಬ್ಯಾಗ್ನಿಂದ ನಾಪತ್ತೆಯಾಗಿರುವ ವಸ್ತುಗಳ ಪತ್ತೆಯಾಗಬೇಕಿದೆ. ಕೆಲವು ವರ್ಷಗಳ ಹಿಂದೆ ಕಮಲಾ ಮಿಲ್ಸ್ ಕಟ್ಟಡದ ಆವರಣದಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕಾರ್ಯ ನಿರ್ವಹಿಸಿದ್ದ ಸರ್ಫ್ರಾಝ್ ಶೇಖ್ ಪಾರ್ಕಿಂಗ್ ಪ್ರದೇಶದ ಸಂಪೂರ್ಣ ಮಾಹಿತಿ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.