ಬೆಂಗಳೂರು: ಗಣೇಶ ಮೂರ್ತಿಗಳ ವಿಸರ್ಜನೆಗೆ 22 ಕೆರೆಗಳಲ್ಲಿ ಅವಕಾಶ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ. 12: ಗಣೇಶ ಹಬ್ಬದ ಅಂಗವಾಗಿ ನಗರದ ಯಡಿಯೂರ, ಸ್ಯಾಂಕಿ ಕರೆ ಹಾಗೂ ಹಲಸೂರು ಕೆರೆ ಸೇರಿದಂತೆ ವಿವಿಧ 22 ಕೆರೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಲಾಗಿದೆ ಎಂದು ಮೇಯರ್ ಆರ್.ಸಂಪತ್ರಾಜ್ ತಿಳಿಸಿದ್ದಾರೆ.
ಬುಧವಾರ ನಗರದ ಹಲಸೂರು ಕೆರೆಯಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ನಿರ್ಮಿಸಿರುವ ವಿಶೇಷ ಕಲ್ಯಾಣಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 22 ಕೆರೆಗಳ ಬಳಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಲುವಾಗಿ ಪ್ರತ್ಯೇಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಎಲ್ಲ ಕಲ್ಯಾಣಿಗಳ ಬಳಿ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗಣೇಶ ವಿಗ್ರಹವನ್ನು ವಿಸರ್ಜನೆಗಾಗಿ ಬಂದವರು ಟೋಕನ್ ಪಡೆದು ಕ್ಯೂನಲ್ಲಿ ನಿಲ್ಲಬೇಕು. ನಂತರ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಮಣ್ಣಿನ ಗಣೇಶಗಳನ್ನು ನೀರಿನಲ್ಲಿ ಮುಳುಗಿಸಲು ಹೆಚ್ಚು ಆದ್ಯತೆ ನೀಡಲಾಗುತ್ತದೆ. ಪಿಒಪಿ ಗಣೇಶ ಮೂರ್ತಿಗಳನ್ನು ಮುಳುಗಿಸಿ, ಅನಂತರ ನೀರಿನಿಂದ ಪ್ರತ್ಯೇಕಿಸಲಾಗುತ್ತದೆ. ಅದಕ್ಕೆ ಯಾರೂ ಅನ್ಯಥಾ ಭಾವಿಸಬಾರದು ಎಂದು ಮನವಿ ಮಾಡಿದರು.
ಪ್ರತಿ ಕೆರೆಗಳಲ್ಲಿ ನಿರ್ಮಿಸಿರುವ ಕಲ್ಯಾಣಿಗಳಲ್ಲಿ ರಾತ್ರಿ 10.30ರವರೆಗೆ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗುವುದು. ಅವಧಿ ಮುಗಿದುಹೋದರೆ, ಕಲ್ಯಾಣಿಗಳ ಮುಂಭಾಗ ಇಡಲಾಗಿರುವ ಟೇಬಲ್ಗಳಲ್ಲಿ ಗಣೇಶ ವಿಗ್ರಹ ಇಟ್ಟು ವಾಪಾಸ್ ಆಗಬಹುದು ಎಂದರು.
ಪ್ರತಿ ಕೆರೆಗಳಲ್ಲಿ ಯಾವುದೇ ಅಹಿತಕರ ಘಟನೆ ಉಂಟಾಗದಂತೆ, ಅಗ್ನಿಶಾಮಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮುಳುಗು ತಜ್ಞರ ತಂಡವನ್ನೂ ನೇಮಿಸಲಾಗಿದೆ. ಆ್ಯಂಬುಲೆನ್ಸ್ ಜೊತೆಗೆ ವೈದ್ಯರ ತಂಡವೂ ಕಾರ್ಯನಿರ್ವಹಿಸಲಿದ್ದು, ಯಾವುದೇ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮೇಯರ್ ತಿಳಿಸಿದರು.
ಪಟಾಕಿ ಸಿಡಿಸುವುದು ನಿಷೇದ: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಸಿಡಿಮದ್ದು ಮತ್ತು ಪಟಾಕಿ ಸಿಡಿಸುವುದು, ಧ್ವನಿವರ್ಧಕಗಳನ್ನು ಬಳಕೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೆ, ನಿಗದಿ ಮಾಡಿದ ಸ್ಥಳದಲ್ಲಿ ಮಾತ್ರ ವಿಗ್ರಹಗಳನ್ನು ವಿಸರ್ಜನೆ ಮಾಡಬೇಕು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.
ಕೆರೆಗಳಿಗೆ ತೆರಳಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲು ಸಾಧ್ಯವಾಗದವರು ಆಯಾ ಬಡಾವಣೆಯ ಪ್ರಮುಖ ಜಂಕ್ಷನ್ಗಳಲ್ಲಿ ಪಾಲಿಕೆಯ 160, ವಾಯು ಮಾಲಿನ್ಯ ನಿಯಂತ್ರಣಾ ಮಂಡಳಿಯ 14 ಸ್ಥಳಗಳಲ್ಲಿ ಸಂಚಾರಿ ವಿಸರ್ಜನಾ ಘಟಕ ಟ್ಯಾಂಕ್ಗಳನ್ನು ರಚಿಸಿದ್ದು, ಅಲ್ಲಿ ವಿಸರ್ಜಿಸಬಹುದಾಗಿದೆ ಎಂದು ಅವರು ತಿಳಿಸಿದರು.
ವಿಸರ್ಜನಾ ವೇಳೆ ಸಂಗ್ರಹವಾಗುವ ಹೂವು, ಬಾಳೆಕಂದು, ತಳಿರು ತೋರಣಗಳನ್ನು ನಿಗದಿತ ಲಾರಿಗಳಲ್ಲಿ ತುಂಬಿಸಿ ಹೊರಸಾಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.