ಚುಟುಕು ಸುದ್ದಿ;ಬದಿಯಡ್ಕ: ಮೊಬೈಲ್ ಅಂಗಡಿಯಲ್ಲಿ ಕಳ್ಳತನ
ಕಾಸರಗೋಡು, ಜ.2: ಮೊಬೈಲ್ ಫೋನ್ ಮಳಿಗೆಯ ಶಟರ್ ಮುರಿದು ಒಳನುಗ್ಗಿದ ಕಳ್ಳರು 2.50 ಲಕ್ಷ ರೂ.ಗಳ ಸಾಮಗ್ರಿಗಳನ್ನು ಕಳವುಗೈದ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಬದಿಯಡ್ಕ ಸರ್ಕಲ್ ಬಳಿಯ ‘ಅಂಬಾರ್ ಕಮ್ಯೂನಿಕೇಶನ್ಸ್’ ಎಂಬ ಮಳಿಗೆಗೆ ನುಗ್ಗಿ ಕಳವು ನಡೆಸಲಾಗಿದೆ. ವಳಮಲೆಯ ರತೀಶ್ ಎಂಬವರ ಮಾಲಕತ್ವದ ಮಳಿಗೆಯಿಂದ ಒಂದು ಲ್ಯಾಪ್ಟಾಪ್, ಒಂದು ಹಾರ್ಡ್ ಡಿಸ್ಕ್, 15 ಸ್ಯಾಮ್ಸಂಗ್ ಮೊಬೈಲ್ ಫೋನ್ಗಳು, ದುರಸ್ತಿಗೆ ಬಂದಿದ್ದ 15 ಮೊಬೈಲ್ ಫೋನ್ಗಳು, ರಿಚಾರ್ಜ್ ಕೂಪನ್ಗಳನ್ನು ಕಳವು ಮಾಡಲಾಗಿದೆ.
ಶನಿವಾರ ಬೆಳಗ್ಗೆ ಅಂಗಡಿಗೆ ಬಂದಾಗ ಶಟರ್ ತೆರೆದ ಸ್ಥಿತಿಯಲ್ಲಿ ಕಂಡುಬಂದಿದ್ದು, ಪರಿಶೀಲಿಸಿದಾಗ ಬೀಗ ಮುರಿದು ಕಳವು ನಡೆಸಿರುವುದು ಬೆಳಕಿಗೆ ಬಂದಿದೆ. ಬದಿಯಡ್ಕ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
--------------------------------------
ಕಾರು ಢಿಕ್ಕಿ: ವ್ಯಕ್ತಿ ಮೃತ್ಯು
ಕಾಸರಗೋಡು, ಜ.2: ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಚೌಕಿ ಸಮೀಪದ ಕಲ್ಲಂಗೈಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಬೆಳ್ಳೂರಿನ ಸೋಮಪ್ಪ ಗಟ್ಟಿ ( 55) ಎಂದು ಗುರುತಿಸಲಾಗಿದೆ. ವಯನಾಡಿನಿಂದ ಉಪ್ಪಳ ಪೈವಳಿಕೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದ್ದು, ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮ್ರತಪಟ್ಟರು ಎಂದು ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
--------------------------------------
ಬೈಕ್ ಢಿಕ್ಕಿ: ಮಹಿಳೆ ಗಂಭೀರ
ಸುಳ್ಯ, ಜ.2: ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಆಲೆಟ್ಟಿ ಗ್ರಾಮದ ದೋಣಿಮೂಲೆ ವಿದ್ಯಾರಶ್ಮಿ ಗಂಭೀರ ಗಾಯಗೊಂಡ ಮಹಿಳೆ. ಇವರು ಖಾಸಗಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದಾಗ ಮಡಿಕೇರಿಯಿಂದ ಕಾಸರಗೋಡಿಗೆ ಹೋಗುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತು. ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
--------------------------------------
ದ್ವಿಚಕ್ರ ವಾಹನ ಕಳವು
ಉಡುಪಿ, ಜ.2: ಉಡುಪಿ ನಗರದ ಕೆಎಂ ಮಾರ್ಗದಲ್ಲಿರುವ ಶ್ರೀಸಾಯಿ ಪ್ಯಾಲೇಸ್ ಲಾಡ್ಜ್ ಎದುರು ಡಿ.28ರಂದು ನಿಲ್ಲಿಸಿದ್ದ ತೀರ್ಥಹಳ್ಳಿ ಮಂಡ ಗದ್ದೆಯ ಅವಿನಾಶ್ ಎಂಬವರ ಸುಮಾರು 40 ಸಾವಿರ ರೂ. ವೌಲ್ಯದ ಕೆಎ 20 ಇಬಿ 8094 ನಂಬ್ರದ ಕಪ್ಪುಬಣ್ಣದ ಯಮಹಾ ರೇ ಝೆಡ್ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.