ವಿಶ್ವವಿನೋದ ಬನಾರಿಯವರಿಗೆ ʼಬಣ್ಣದ ಮಹಾಲಿಂಗ ಯಕ್ಷಸ್ಮೃತಿʼ ಪುರಸ್ಕಾರ

ಸುಳ್ಯ : ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ಬಣ್ಣದ ಮಹಾಲಿಂಗರ ನೆನಪಿನಲ್ಲಿ ನಡೆಯುವ ಯಕ್ಷ ಪಯಣ 'ಬಣ್ಣದಜ್ಜನ ಸ್ಮೃತಿಯಾನ' ಕಾರ್ಯಕ್ರಮ ದೇಲಂಪಾಡಿ ಮಯ್ಯಾಳದ ಶ್ರೀಹರಿ ನಿವಾಸದಲ್ಲಿ ಭಾನುವಾರ ನಡೆಯಿತು.
ಇದರ ಅಂಗವಾಗಿ ಬಣ್ಣದ ಮಹಾಲಿಂಗ ಸಂಸ್ಮರಣೆ, ಬಣ್ಣದ ಮಹಾಲಿಂಗ ಯಕ್ಷ ಸ್ಮೃತಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳು, ಹಿರಿಯ ಭಾಗವತರು ಮತ್ತು ಯಕ್ಷಗಾನ ಸಾಹಿತಿಗಳಾದ ವಿಶ್ವವಿನೋದ ಬನಾರಿ ಅವರಿಗೆ ಬಣ್ಣದ ಮಹಾಲಿಂಗ ಯಕ್ಷಸ್ಮೃತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದರಾದ ಎಂ. ರಮಾನಂದ ರೈ ದೇಲಂಪಾಡಿ ಬಣ್ಣದ ಮಹಾಲಿಂಗ ಸಂಸ್ಮರಣೆ ಮಾಡಿದರು. ಯಕ್ಷಗಾನ ಭಾಗವತರು ಹಾಗೂ ಲೇಖಕರಾದ ನಾರಾಯಣ ತೋರಣಗುಂಡಿ ಅಭಿನಂದನಾ ಭಾಷಣ ಮಾಡಿದರು. ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಣ್ಣದ ಮಹಾಲಿಂಗ ಸ್ಮೃತಿಯಾನ ಕಾರ್ಯಕ್ರಮದ ಸಂಚಾಲಕರಾದ ಸುಬ್ಬಪ್ಪ ಪಟ್ಟೆ ವಂದಿಸಿದರು. ರಮೇಶ್ ದೇಲಂಪಾಡಿ, ಸುಖೇಶ್ ದೇಲಂಪಾಡಿ, ಸಚಿನ್ ದೇಲಂಪಾಡಿ, ಶೋಭಿತಾ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಗಾನ ತಾಳಮದ್ದಳೆ :
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕಲಾವಿದರಿಂದ 'ಶ್ರೀಹರಿ ದರ್ಶನ' ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತಿಕೆಯಲ್ಲಿ ನಾರಾಯಣ ತೋರಣಗುಂಡಿ, ನಿತೀಶ್ ಕುಮಾರ್ ಎಂಕಣ್ಣಮೂಲೆ, ದಯಾನಂದ ಪಾಟಾಳಿ ಮಯ್ಯಾಳ, ಚಂಡೆ ಮದ್ಧಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ನಾರಾಯಣ ಪಾಟಾಳಿ ಮೈಯಾಳ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ, ರಮಾನಂದ ರೈ ದೇಲಂಪಾಡಿ, ನಾರಾಯಣ ದೇಲಂಪಾಡಿ, ರಾಮನಾಯ್ಕ ದೇಲಂಪಾಡಿ ಭಾಗವಹಿಸಿದ್ದರು.







