ಪಹಲ್ಗಾಮ್ ಉದ್ವಿಗ್ನತೆ ನಡುವೆ ಅಕ್ಸೆಂಚರ್ ಉದ್ಯೋಗಿಯ ಗಡಿಪಾರನ್ನು ತಡೆಹಿಡಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ರಾಜತಾಂತ್ರಿಕ ನಿರ್ಬಂಧಗಳ ಭಾಗವಾಗಿ ವೀಸಾಗಳನ್ನು ರದ್ದುಗೊಳಿಸುತ್ತಿರುವ ಮತ್ತು ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರಹಾಕುತ್ತಿರುವ ಸರಕಾರದ ಆದೇಶದ ಮೇರೆಗೆ ವೀಸಾ ಅವಧಿ ಮೀರಿ ಉಳಿದುಕೊಂಡಿದ್ದಾರೆ ಎನ್ನಲಾಗಿರುವ ಬೆಂಗಳೂರಿನ ಅಕ್ಸೆಂಚರ್ ಕಂಪನಿಯ ಉದ್ಯೋಗಿ ಮತ್ತು ಅವರ ಕುಟುಂಬದ ಗಡಿಪಾರಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಡೆಯಾಜ್ಞೆ ನೀಡಿದೆ.
ಅಕ್ಸೆಂಚರ್ ಉದ್ಯೋಗಿ ಅಹ್ಮದ್ ತಾರಿಕ್ ಭಟ್ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದು,ತಾವು ಭಾರತೀಯ ಪಾಸ್ಪೋರ್ಟ್ ಮತ್ತು ಆಧಾರ್ ಕಾರ್ಡ್ಗಳನ್ನು ಹೊಂದಿದ್ದರೂ ತನಗೆ ಮತ್ತು ತನ್ನ ಕುಟುಂಬಕ್ಕೆ ದೇಶವನ್ನು ತೊರೆಯುವಂತೆ ಆದೇಶಿಸಲಾಗಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಪಾಸ್ಪೋರ್ಟ್,ಆಧಾರ್,ಪಾನ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಪರಿಶೀಲಿಸುವಂತೆ ಮತ್ತು ಅಲ್ಲಿಯವರೆಗೆ ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು ನಿರ್ದೇಶನ ನೀಡಿದೆ. ಭಟ್ ಕೇರಳದ ಕೋಝಿಕೋಡ್ನ ಐಐಎಮ್ನಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ.
ಭಟ್ ಕುಟುಂಬ ಸದಸ್ಯರು ಕಾಶ್ಮೀರದಲ್ಲಿ ವಾಸವಾಗಿದ್ದಾರೆ, ಕುಟುಂಬದ ಗಂಡು ಮಕ್ಕಳು ಬೆಂಗಳೂರಿನಲ್ಲಿದ್ದಾರೆ.
ಹೆಚ್ಚಿನ ಪರಿಹಾರಕ್ಕಾಗಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸಹ ನ್ಯಾಯಾಲಯವು ಭಟ್ ಅವರಿಗೆ ಸೂಚಿಸಿದ್ದು,ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯದ ಆದೇಶವನ್ನು ವಿರೋಧಿಸಿದರು. ಆದರೆ ಈ ವಿಷಯವು ಮಾನವೀಯ ಕೋನವನ್ನು ಹೊಂದಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ದಾಖಲೆ ಪರಿಶೀಲನೆ ವರದಿಯು ವ್ಯತಿರಿಕ್ತವಾಗಿದ್ದರೆ ಜಮ್ಮುಕಾಶ್ಮೀರ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಭಟ್ ಕುಟುಂಬಕ್ಕೆ ಸ್ವಾತಂತ್ರ್ಯವನ್ನು ನೀಡಿತು.
ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ತನ್ನ ಆದೇಶವನ್ನು ಇತರ ಪ್ರಕರಣಗಳಲ್ಲಿ ಪೂರ್ವ ನಿದರ್ಶನವನ್ನಾಗಿ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿತು.
ಶ್ರೀನಗರದಲ್ಲಿ ಭಟ್ ಕುಟುಂಬ ಸದಸ್ಯರನ್ನು ಜೀಪಿನಲ್ಲಿ ತುಂಬಿಸಿ ವಾಘಾ ಗಡಿಗೆ ಸಾಗಿಸಲಾಗಿದೆ, ಅವರು ಯಾವುದೇ ಕ್ಷಣದಲ್ಲಿಯೂ ದೇಶದಿಂದ ಹೊರದಬ್ಬಲ್ಪಡುವ ಸ್ಥಿತಿಯಲ್ಲಿದ್ದಾರೆ ಎಂದು ಭಟ್ ಪರ ವಕೀಲ ನಂದಕಿಶೋರ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ಸೂರ್ಯಕಾಂತ್ ಅವರು,‘ನೀವು ಜನಿಸಿದ್ದು ಪಾಕಿಸ್ತಾನದ ಮೀರ್ಪುರದಲ್ಲಿ. ನೀವು ಭಾರತಕ್ಕೆ ಬಂದಿದ್ದು ಹೇಗೆ ಮತ್ತು ಏಕೆ?’ಎಂದು ಭಟ್ ಅವರನ್ನು ಪ್ರಶ್ನಿಸಿದರು.
ತಾನು 1997ರಲ್ಲಿ ಪಾಕಿಸ್ತಾನಿ ಪಾಸ್ಪೋರ್ಟ್ ಹೊಂದಿದ್ದ ತನ್ನ ತಂದೆಯೊಂದಿಗೆ ಭಾರತಕ್ಕೆ ಬಂದಿದ್ದಾಗಿ ಭಟ್ ಉತ್ತರಿಸಿದರು.
ವರ್ಚುವಲ್ ಆಗಿ ವಿಚಾರಣೆಗೆ ಹಾಜರಾಗಿದ್ದ ಭಟ್ ಸೋದರ ತನ್ನ ತಂದೆ ಪಾಕ್ ಆಕ್ರಮಿತ ಕಾಶ್ಮೀರದ ಮುಝಫ್ಪರಾಬಾದ್ನಿಂದ ಭಾರತಕ್ಕೆ ಆಗಮಿಸಿದ್ದರು ಎಂದು ತಿಳಿಸಿದರು.
ಶ್ರೀನಗರಕ್ಕೆ ಆಗಮಿಸಿದ ಬಳಿಕ ತನ್ನ ಪಾಸ್ಪೋರ್ಟ್ನ್ನು ಜಮ್ಮುಕಾಶ್ಮೀರ ಉಚ್ಚ ನ್ಯಾಯಾಲಯಕ್ಕೆ ಒಪ್ಪಿಸಿದ್ದೆ ಮತ್ತು ಬಳಿಕ ಅರ್ಜಿ ಸಲ್ಲಿಸಿ ಭಾರತೀಯ ಪಾಸ್ಪೋರ್ಟ್ ಪಡೆದುಕೊಂಡಿದ್ದೆ ಎಂದು ಭಟ್ ತಿಳಿಸಿದರು. ತನ್ನ ಕುಟುಂಬದ ಇತರ ಸದಸ್ಯರು ಮೂರು ವರ್ಷಗಳ ಬಳಿಕ 2000ರಲ್ಲಿ ಶ್ರೀನಗರಕ್ಕೆ ಆಗಮಿಸಿದ್ದರು ಮತ್ತು ಅವರೂ ಭಾರತೀಯ ಪೌರತ್ವ ಮತ್ತು ಪಾಸ್ಪೋರ್ಟ್ ಪಡೆದುಕೊಂಡಿದ್ದರು ಎಂದರು.
ತಾನು ಮತ್ತು ತನ್ನ ಒಡಹುಟ್ಟಿದವರು ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆದಿದ್ದೆವು ಎಂದು ತಿಳಿಸಿದ ಭಟ್, ಈ ದಾಖಲೀಕರಣದ ಹಾಗೂ ತಾನು ಮತ್ತು ತನ್ನ ಕುಟುಂಬ ಸದಸ್ಯರು ಆಧಾರ ಕಾರ್ಡ್ಗಳನ್ನು ಹೊಂದಿರುವುದರ ಹೊರತಾಗಿಯೂ ದೇಶವನ್ನು ತೊರೆಯುವಂತೆ ಗೃಹ ಸಚಿವಾಲಯವು ಕಳೆದ ವಾರ ತನಗೆ ನೋಟಿಸ್ ಹೊರಡಿಸಿದೆ. ‘ಭಾರತದ ವೀಸಾಗಳ ಮೇಲೆ ದೇಶವನ್ನು ಪ್ರವೇಶಿಸಿದ್ದು, ಅವಧಿ ಮುಗಿದರೂ ಇಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ನೋಟಿಸ್ನಲ್ಲಿ ತಪ್ಪಾಗಿ ತಿಳಿಸಲಾಗಿದೆ ’’ಎಂದು ಪ್ರತಿಪಾದಿಸಿದರು.







