ಹಿಟ್ ಆ್ಯಂಡ್ ರನ್ ಹೊಸ ನಿಯಮ ಹಿಂಪಡೆಯದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರ: ಟ್ರಕ್ ಚಾಲಕರ ಎಚ್ಚರಿಕೆ
Photo: PTI
ಹೊಸದಿಲ್ಲಿ: ನೂತನ ಹಿಟ್ ಆ್ಯಂಡ್ ರನ್ ಪ್ರಕರಣಗಳ ಕುರಿತ ಕಾನೂನನ್ನು ಕೇಂದ್ರ ಸರ್ಕಾರವು ಹಿಂಪಡೆಯದಿದ್ದರೆ ನಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಬುಧವಾರ ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟ ಎಚ್ಚರಿಕೆ ನೀಡಿದೆ ಎಂದು The Hindu ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಒಕ್ಕೂಟದಲ್ಲಿ ಚಾಲಕರು ಹಾಗೂ ಸಾರಿಗೆ ಕಾರ್ಮಿಕರು ಸದಸ್ಯರಾಗಿದ್ದಾರೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾರನ್ನು ಮಂಗಳವಾರ ಭೇಟಿಯಾದ ನಂತರ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ಪ್ರತಿಭಟನೆಯನ್ನು ಹಿಂಪಡೆದಿದ್ದರೂ ತಾವು ಮಾತ್ರ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ದಿಲ್ಲಿಯ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸುತ್ತಿರುವ ಹಲವಾರು ಚಾಲಕರ ಸಂಘಟನೆಗಳು ಘೋಷಿಸಿವೆ.
ಅಪಘಾತದ ಸಂದರ್ಭದಲ್ಲಿ, ಆ ಸಂಗತಿಯನ್ನು ಪ್ರಾಮಾಣಿಕವಾಗಿ ಪೊಲೀಸರು ಅಥವಾ ಮ್ಯಾಜಿಸ್ಟ್ರೇಟರ ಗಮನಕ್ಕೆ ತಾರದೆ ಘಟನಾ ಸ್ಥಳದಿಂದ ಪರಾರಿಯಾಗುವ ಚಾಲಕರಿಗೆ 10 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ. 7 ಲಕ್ಷದವರೆಗೆ ದಂಡ ವಿಧಿಸುವ ಅವಕಾಶ ಹೊಂದಿರುವ ನೂತನ ಭಾರತೀಯ ನ್ಯಾಯ ಸಂಹಿತೆಯ ಪರಿಚ್ಛೇದವನ್ನು ವಿರೋಧಿಸಿ ಟ್ರಕ್, ಬಸ್ ಹಾಗೂ ಟ್ಯಾಂಕರ್ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದರೂ, ಆ ಕಾಯ್ದೆ ಯಾವಾಗ ಜಾರಿಯಾಗಲಿದೆ ಎಂಬುದನ್ನು ಸರ್ಕಾರವಿನ್ನೂ ಪ್ರಕಟಿಸಬೇಕಿದೆ.