ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಲು ದ.ಕ. ಜಿಲ್ಲಾಧಿಕಾರಿ ಆದೇಶ

Update: 2024-04-29 15:13 GMT

ಫೈಲ್‌ ಫೋಟೊ

ಮಂಗಳೂರು: ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ನೇತೃತ್ವದಲ್ಲಿ ನಡೆದ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಲೋಕಸಭಾ ಚುನಾವಣೆ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಬಳಕೆಯ ನಿರ್ಬಂಧ ಹೇರುವುದನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಕೃಷಿ ರಕ್ಷಣೆಗಾಗಿ ಆಯುಧ ಪರವಾನಿಗೆ ಹೊಂದಿರುವ (ಪೊಲೀಸ್ ಆಯುಕ್ತರ ಕಾರ್ಯವ್ಯಾಪ್ತಿಯನ್ನು ಹೊರತು ಪಡಿಸಿ) ಎಲ್ಲ ಆಯುಧ ಪರವಾನಿಗೆದಾರರು ತಮ್ಮ ಆಯುಧಗಳನ್ನು ಈಗಾಗಲೇ ಪೊಲೀಸ್ ಠಾಣೆ / ಅಧಿಕೃತ ಕೋವಿ ಹಾಗೂ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಠೇವಣೆ ಇರಿಸಿದ್ದು ಈ ಆಯುಧಗಳನ್ನು ಹಿಂದಕ್ಕೆ ನೀಡಲು ಆಯುಧ ಪರವಾನಿಗೆದಾರರಿಗೆ ಎ.೨೯ರ ಸೋಮವಾರದಿಂದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾ ಚುನಾವ ಣಾಧಿಕಾರಿಗಳೂ ಆಗಿರುವ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶಿಸಿದ್ದಾರೆ.

ಷರತ್ತುಗಳು: ಯಾವುದೇ ಮೆರವಣಿಗೆ, ಜಾತ್ರೆ ಇತ್ಯಾದಿಗಳಲ್ಲಿ ಶಸ್ತ್ರಾಸ್ತ್ರವನ್ನು ಒಯ್ಯಲು ಅವಕಾಶವಿರುವುದಿಲ್ಲ. ಬೆಳೆಗಳ ರಕ್ಷಣೆಗಾಗಿ ಈ ಆಯುಧಗಳನ್ನು ಮಾತ್ರ ಬಳಸತಕ್ಕದ್ದು. ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರವನ್ನು ಬಹಿರಂಗವಾಗಿ ಎಲ್ಲೂ ಪ್ರದರ್ಶಿಸುವಂತಿಲ್ಲ. ಸಾರ್ವಜನಿಕರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಸಲು ಶಸ್ತ್ರಾಸ್ತ್ರವನ್ನು ಬಳಸಬಾರದು. ಯಾವುದೇ ಸಂದರ್ಭದಲ್ಲಿ ಅವಶ್ಯವೆನಿಸಿದಲ್ಲಿ ಪೊಲೀಸ್ ಅಧಿಕಾರಿಗಳು/ ಸರಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ಹಾಜರುಪಡಿಸತಕ್ಕದ್ದು ಮತ್ತು ತಪಾಸಣೆಗೆ ಸಹಕರಿಸಿ ಪೂರಕ ದಾಖಲೆಗಳನ್ನು ಒದಗಿಸಬೇಕು ಪರವಾನಿಗೆದಾರರು ಮೇಲಿನ ಶರ್ತಗಳನ್ನು ಉಲ್ಲಂಘನೆ ಮಾಡಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬಂದಲ್ಲಿ, ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರವನ್ನು ಯಾವುದೇ ಮುನ್ಸೂಚನೆ ನೀಡದೆ ವಶಪಡಿಸಿಕೊಳ್ಳ ಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ನೀತಿ ಸಂಹಿತೆಯು ಜಾರಿಯಲ್ಲಿರುವ ಸಮಯದಲ್ಲಿ ಆಯುಧ ಪರವಾನಿಗೆದಾರರು ಯಾವುದೇ ಷರತ್ತುಗಳನ್ನು ಉಲ್ಲಂಘಿಸಿ ದಲ್ಲಿ ಐಪಿಸಿ ಸೆಕ್ಷನ್ 188 ರಂತೆ ಪ್ರಕರಣ ದಾಖಲಿಸಲು ಹಾಗೂ ಪರವಾನಿಗೆ ರದ್ದುಪಡಿಸಲು ಕ್ರಮವನ್ನು ಕೈಗೊಳ್ಳ ಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News