ದೇರಳಕಟ್ಟೆ ಫಾದರ್ ಮುಲ್ಲರ್ ವಿದ್ಯಾಲಯದಲ್ಲಿ ‘ವಿಶ್ವ ಹೋಮಿಯೋಪಥಿ ದಿನಾಚರಣೆ’
ಕೊಣಾಜೆ: ಹೋಮಿಯೋಪಥಿ ಜನಕ ಡಾಕ್ಟರ್ ಸ್ಯಾಮ್ಯುಯೆಲ್ ಹಾನ್ನಿಮನ್ನರ 269ನೇ ಜನ್ಮ ದಿನದ ನೆನಪಿಗಾಗಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿಶ್ವ ಹೋಮಿಯೋಪಥಿ ದಿನಾಚರಣೆ ಮಂಗಳವಾರದಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿಎಜಿ ಆಫ್ ಇಂಡಿಯಾದ ಸೀನಿಯರ್ ಡೆಪ್ಯುಟಿ ಅಕೌಟೆಂಡ್ ಜನರಲ್ ಆಗಿರುವ ಡಾ. ರಾಹುಲ್ ಪಿ. ಅವರು ನೆರವೇರಿಸಿ ಮಾತನಾಡಿ, ನಾವು ಕಠಿಣ ಪರಿಶ್ರಮದೊಂದಿಗೆ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಉದ್ದೇಶಿತ ಗುರಿಯೊಂದಿಗೆ ಮುನ್ನಡೆದು ಮಾನವೀಯ ಮೌಲ್ಯಗಳೊಂದಿಗೆ ಯಶಸ್ಸಿನ ಬದುಕು ಕಂಡುಕೊಳ್ಳಿ ಎಂದರು.
ಕೇರಳ ಸರಕಾರದ ಹೋಮಿಯೋಪಥಿ ವಿಭಾಗದ ವೈದ್ಯಕೀಯ ಅಧಿಕಾರಿ ಡಾ. ಜೆರಾಲ್ಡ್ ಜಯಕುಮಾರ್, ಎಮ್. ಡಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಫಾದರ್ ಮುಲ್ಲರ್ ಸೇವಾಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರ್ ಫಾದರ್ ಅಗಸ್ಟಸ್ ಮುಲ್ಲರ್ರವರ ಪ್ರತಿಮೆಗೆ ಮತ್ತು ಡಾ. ರಾಹುಲ್ ಪಿ. ಯವರು ಡಾ. ಸಾಮ್ಯುವೆಲ್ ಹಾನ್ನಿಮನ್ನರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಡಾ.ಬಾತ್ರಾರವರು ಪ್ರಾಯೋಜಿಸಿದ ಬಾತ್ರಾ ವಿದ್ಯಾರ್ಥಿವೇತನ’ ಪ್ರಶಸ್ತಿಗಳನ್ನು ಪ್ರತಿಭಾ ನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಅನಘಾ ಕೆ.ಜಿ. ಗೆ ಗೋಲ್ಡ್ ಸ್ಕಾಲರ್ಶಿಪ್, ಏಂಜಲಿನ್ ಜಾಯ್ಗೆ ಸಿಲ್ವರ್ ಸ್ಕಾಲರ್ಶಿಪ್ ಮತ್ತು ಪರ್ಲಿನ್ ಟೆಲ್ಲಿಸ್ಗೆ ಬ್ರೋನ್ಝ್ ಸ್ಕಾಲರ್ಶಿಪ್ ನೀಡಲಾಯಿತು.
ಈ ಸಂದರ್ಭ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಹಳೆಯ ವಿದ್ಯಾರ್ಥಿ ಡಾ. ಜೆರಾಲ್ಡ್ ಜಯಕುಮಾರ್ರವರು ಡಾ. ಬಿನುರಾಜ್ ಟಿ.ಕೆ ಯವರ ಜೊತೆಗೂಡಿ ಹೊರತಂದ ‘ಹೋಮಿಯೋ ಎವಿಡೆನ್ಸ್ ಡಾಟ್ಕಾಮ್ ಎಂಬ ‘ಡಿಜಿಟಲ್ ಡಾಟಾಬೇಸ್’ ವೆಬ್ಸೈಟ್ ಫಾದರ್ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಯಾದ ರೋಶನ್ ಕ್ರಾಸ್ತಾರವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಹೋಮಿಯೋಪಥಿಯ ಭವಿಷ್ಯವು ವಿದ್ಯಾರ್ಥಿಗಳ ಆಸಕ್ತಿಯ ಮೇಲೆ ಅವಲಂಭಿಸಿದೆ, ಇದಕ್ಕೋಸ್ಕರ ಹೋಮಿಯೋಪಥಿಯ ದಿಗ್ಗಜರಿಂದ ಸ್ಪೂರ್ತಿ ಪಡೆದು ತಮ್ಮ ಪರಿಧಿಯನ್ನು ವಿಸ್ತರಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ಆಡಳಿತಾಧಿಕಾರಿ ಅಶ್ವಿನ್ ಕ್ರಾಸ್ತ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ಸೆಬಾಸ್ಟಿಯನ್ ಪಿ.ಎ. ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ.ಸೆಬಾಸ್ಟಿಯನ್ ಪಿ. ಎ. ವಂದಿಸಿದರು. ಡಾ. ಕೃಷ್ಣಾ ಹಾಗೂ ಡಾ. ಅಮೋಘಾ ಡಿ. ಕಾರ್ಯಕ್ರಮವನ್ನು ನಿರೂಪಿಸಿದರು.