ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

Update: 2024-05-05 15:34 GMT

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ನಾವೂರ ಗ್ರಾಮದ ನೀರಕಟ್ಟೆ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.

ಉಳ್ಳಾಲ ನಿವಾಸಿ ಅನ್ಸಾರ್ ಎಂಬವರ ಪುತ್ರಿ ಅಶ್ರಾ (11) ಹಾಗೂ ಇಲ್ಯಾಸ್ ಅವರ ಪುತ್ರಿ ಮರಿಯಮ್ ನಾಶಿಯಾ (14) ಮೃತ ಬಾಲಕಿಯರು.

ಮೂಲತಃ ನಾವೂರ ನಿವಾಸಿಯಾದ ಇಲ್ಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿದ್ದರು. ರವಿವಾರ ನಾವೂರ ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಸಂಜೆ ವೇಳೆ ಮನೆಯವರ ಜೊತೆಗೆ ನಾವೂರದ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದು, ಮನೆಯವರ ಮುಂದೆ ಮಕ್ಕಳು ನೀರಿನಲ್ಲಿ ಆಟ ಆಡುತ್ತಾ ಇದ್ದರು. ಮನೆಯವರ ಮುಂದೆಯೇ ಈ ಎರಡು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಕಾರಣ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೂಗು ಕೇಳಿ ಬಂದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News