ಸಲ್ಮಾನ್ ಖಾನ್ ನಿವಾಸದ ಸಮೀಪ ಗುಂಡುಹಾರಾಟ ಪ್ರಕರಣದ ಆರೋಪಿ ಲಾಕಪ್ ನಲ್ಲಿ ಮೃತ್ಯು
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಭಾಗದಲ್ಲಿ ಇತ್ತೀಚೆಗೆ ನಡೆದ ಗುಂಡುಹಾರಾಟ ಪ್ರಕರಣದ ಆರೋಪಿ ಅನುಜ್ ಥಾಪನ್ ಗುರುವಾರ ಪೊಲೀಸ್ ಲಾಕಪ್ ನಲ್ಲಿ ಮೃತಪಟ್ಟಿದ್ದಾನೆ. ಈತನ ಕಸ್ಟಡಿ ಸಾವು ಮುಂಬೈ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅನುಜ್ ಸಾವಿಗೆ ಬಗ್ಗೆ ಅಪರಾಧ ತನಿಖಾ ದಳ (ಸಿಐಡಿ) ತನಿಖೆ ನಡೆಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿವೆ,.
ಪಂಜಾಬ್ನ ನಿವಾಸಿಯಾದ ಅನುಜ್ ಥಾಪನ್ ಎಪ್ರಿಲ್ 14ರಂದು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಭಾಗದಲ್ಲಿ ಗುಂಡು ಹಾರಾಟ ನಡೆಸಿದ್ದ ಶೂಟರ್ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದನೆನ್ನಲಾಗಿದೆ. ಒಂದು ವಾರದ ಆನಂತರ ಆತನನ್ನು ಬಂಧಿಸಲಾಗಿತ್ತು ಹಾಗೂ ತನನ್ನು ಮುಂಬೈ ಪೊಲೀಸ್ ಮುಖ್ಯಕಾರ್ಯಾಲಯದ ಸಮೀಪದ ಕ್ರೈಂಬ್ರಾಂಚ್ ಕಚೇರಿಯ ಲಾಕಪ್ ನಲ್ಲಿರಿಸಲಾಗಿತ್ತು.
ಥಾಪನ್ ಹಾಗೂ ಇತರ ಐವರನ್ನು ಬುಧವಾರ ಒಂದೇ ಲಾಕಪ್ ನಲ್ಲಿರಿಸಲಾಗಿತ್ತು. ಬೆಳಗ್ಗೆ ಸುಮಾರು 11.00 ಗಂಟೆಯ ಆತ ಶೌಚದ ಕೊಠಡಿಗೆ ತೆರಳಿದ್ದ. ಬಹಳ ಸಮಯದವರೆಗೂ ಆತ ಹೊರಬಾರದೆ ಇದ್ದಾಗ ಪೊಲೀಸರು, ಬಾಗಿಲನ್ನು ಒಡೆದಾಗ, ಆತ ಬೆಡ್ಶೀಟ್ನಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಸಾವನ್ನಪ್ಪಿದನೆಂದು ಪೊಲೀಸರು ತಿಳಿಸಿದ್ದಾರೆ.
ಇದೊಂದು ಆಕಸ್ಮಿಕ ಸಾವಿನ ಪ್ರಕರಣವೆಂದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಲಾಕ್ಅಪ್ ನ ಸಮೀಪ ನಿಯೋಜಿತರಾಗಿದ್ದ ಪೊಲೀಸ್ ಸಿಬ್ಬಂದಿಯಿಂದ ಕರ್ತವ್ಯ ಲೋಪವಾಗಿದೆಯೇ ಎಂಬ ಬಗ್ಗೆಯೂ ಸಿಐಡಿ ತನಿಖೆ ನಡೆಸಲಿದೆ. ಲಾಕಪ್ ಹಾಗೂ ಸಿಸಿಟಿ ಕ್ಯಾಮರಾಗಳ ಸಮೀಪ ಐವರು ಪೊಲೀಸರು ಕರ್ತವ್ಯ ನಿರತರಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ವೀಡಿಯೊ ಪರಿಶೀಲನೆಯ ಬಳಿಕ ನಿಖರವಾಗಿ ಏನು ನಡೆಯಿತೆಂಬುದರ ಬಗ್ಗೆ ನಾವು ತನಿಖೆ ನಡೆಸಲಿದ್ದೇವೆ ಎಂದವರು ಹೇಳಿದ್ದಾರೆ. ಥಾಪನ್ ನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಗುರವಾರ ಜೆ.ಜೆ. ಆಸ್ಪತ್ರೆಯಲ್ಲಿ ನಡೆಸಲಾಯಿತು.
ಪ್ರಕರಣದ ಬಗ್ಗ ಥಾಪನ್ ತುಂಬಾ ಆತಂಕಿತನಾಗಿದ್ದ ಹಾಗೂ ತನಗೆ ಜಾಮೀನು ದೊರೆಯಲಾರದೆಂದು ಆತ ಕಳವಳಗೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಥಾಪನ್ ಹಾಗೂ ಸೋನು ಕುಮಾರ್ ಬಿಷ್ಣೊಯಿಯನ್ನು ಏಪ್ರಿಲ್ 26ರಂದು ಪಂಜಾಬಿನ ಫಝಿಲ್ಕಾದಲ್ಲಿ ಮುಂಬೈ ಪೊಲೀಸರ ಅಪರಾಧ ದಳವು ಬಂಧಿಸಿತ್ತು. ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡು ಹಾರಾಟ ನಡೆಸಿದ್ದ ಸಾಗರ್ಪಾಲ್ ಹಾಗೂ ವಿಕಿ ಗುಪ್ತಾಗೆ ಆನುಜ್ ಥಾಪನ್ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದನೆನ್ನಲಾಗಿದೆ.
ಈ ಮಧ್ಯೆ ಅನುಜ್ನನ್ನು ಲಾಕಪ್ ನಲ್ಲಿ ಕೊಲೆ ಮಾಡಲಾಗಿದೆಯೆಂದು ಆತನ ಕುಟುಂಬಿಕರು ಆಪಾದಿಸಿದ್ದಾರೆ. ಅನುಜ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ಆತನನ್ನು ಕೊಲೆ ಮಾಡಲಾಗಿದೆ. ನಮಗೆ ನ್ಯಾಯಬೇಕಾಗಿದೆ’’ ಎಂದು ಆತನ ಸಹೋದರ ಅಭಿಷೇಕ್ ಹೇಳಿದ್ದಾರೆ.