ಎಲ್ಲ ಮಕ್ಕಳನ್ನು ಶಾಲೆಗಳಿಗೆ ದಾಖಲಿಸಬೇಕು, ಔಪಚಾರಿಕ ಶಿಕ್ಷಣ ನೀಡಬೇಕು: ರಾಜ್ಯಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶನ

Update: 2024-05-05 10:57 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್)ವು ಆರರಿಂದ ಹದಿನಾಲ್ಕು ವರ್ಷಗಳ ವಯೋಮಾನದ ಮಕ್ಕಳು ಸಮೀಪದ ಶಾಲೆಗಳಿಗೆ ದಾಖಲಾಗುವಂತೆ ಮತ್ತು ಔಪಚಾರಿಕ ಶಿಕ್ಷಣವನ್ನು ಪಡೆಯುವಂತೆ ನೋಡಿಕೊಳ್ಳಲು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಮಕ್ಕಳ ಹೆಸರಿನಲ್ಲಿ ಹಣ ಸಂಗ್ರಹ ಮತ್ತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅವರ ಅಕ್ರಮ ಸಾಗಾಣಿಕೆ ಪ್ರಕರಣಗಳಲ್ಲಿ ಅಧಿಕಾರಿಗಳು ಬಾಲನ್ಯಾಯ ಕಾಯ್ದೆ, 2015 ಮತ್ತು ಐಪಿಸಿಯ ಕಲಂ ೩೭೦ರಡಿ ಕ್ರಮ ಕೈಗೊಳ್ಳುವುದನ್ನು ಖಚಿತ ಪಡಿಸಿಕೊಳ್ಳುವಂತೆ ಎನ್‌ಸಿಪಿಸಿಆರ್ ಮುಖ್ಯಸ್ಥ ಪ್ರಿಯಾಂಕ್ ಕಾನುಂಗೋ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಅಧಿಕಾರಿಗಳು ಇತ್ತೀಚಿಗಷ್ಟೇ ರಾಜ್ಯದ ಗಡಿಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಹಲವಾರು ಮಕ್ಕಳನ್ನು ರಕ್ಷಿಸಿದ್ದರು.

ಎ.26ರ ಘಟನೆಯೊಂದನ್ನು ಉಲ್ಲೇಖಿಸಿರುವ ಕಾನುಂಗೋ, ಬಿಹಾರದಿಂದ ಉತ್ತರಪ್ರದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 95 ಮಕ್ಕಳನ್ನು ರಕ್ಷಿಸಲಾಗಿದೆ. ಇಟ್ಟಿಗೆಗಳನ್ನು ಹೊತ್ತೊಯ್ಯಲು,ಶೌಚಾಲಯಗಳನ್ನು ಸ್ವಚ್ಛಗೊಳಿಸಲು ತಮಗೆ ಬಲವಂತಗೊಳಿಸಲಾಗುತ್ತಿತ್ತು ಹಾಗೂ ದೈಹಿಕ ಮತ್ತು ಮಾನಸಿಕವಾಗಿ ತಮ್ಮನ್ನು ಶೋಷಿಸಲಾಗುತ್ತಿತ್ತು ಎಂದು ಈ ಮಕ್ಕಳು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಮಕ್ಕಳ ಅಕ್ರಮ ಸಾಗಾಣಿಕೆಯನ್ನು ತಡೆಯಲು ತಮ್ಮ ಆಯಾ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ಹೆಚ್ಚಿಸಲು ಜಿಲ್ಲಾಧಿಕಾರಿಗಳು/ದಂಡಾಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ಹೊರಡಿಸುವಂತೆ ರಾಜ್ಯಗಳಗೆ ಸೂಚಿಸಿದ್ದಾರೆ.

ಇಂತಹ ಘಟನೆಗಳನ್ನು ತಡೆಯಲು ನಿಯಮಿತ ತಪಾಸಣೆಗಳನ್ನು ನಡೆಸುವಂತೆ ಮತ್ತು ನಿಗಾ ವಹಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಮಾನವ ಕಳ್ಳ ಸಾಗಾಣಿಕೆ ನಿಗ್ರಹ ಘಟಕ ಮತ್ತು ವಿಶೇಷ ಬಾಲಾಪರಾಧಿ ಪೋಲಿಸ್ ಘಟಕಗಳಿಗೆ ಸೂಚನೆಗಳನ್ನು ನೀಡುವಂತೆಯೂ ತಿಳಿಸಿರುವ ಕಾನುಂಗೋ,ಈ ಶಿಫಾರಸುಗಳ ಪಾಲನಾ ವರದಿಯನ್ನು 15 ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News