ಪ್ರಧಾನಿ ಮೋದಿ ಮೀಸಲಾತಿಯನ್ನು ಕಸಿದುಕೊಳ್ಳಲು ಬಯಸುತ್ತಿದ್ದಾರೆ : ರಾಹುಲ್ ಗಾಂಧಿ

Update: 2024-05-05 12:40 GMT

Photo : PTI

ಹೈದರಾಬಾದ್ : ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿಗೆ ವಿರುದ್ಧವಾಗಿದ್ದಾರೆ ಮತ್ತು ಜನರಿಂದ ಮೀಸಲಾತಿ ಕಸಿದುಕೊಳ್ಳಲು ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತೆಲಂಗಾಣದ ಆದಿಲಾಬಾದ್ (ಎಸ್‌ಟಿ) ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಿರ್ಮಲ್‌ನಲ್ಲಿ ರವಿವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಸಾರ್ವತ್ರಿಕ ಚುನಾವಣೆಗಳು ಎರಡು ಸಿದ್ಧಾಂತಗಳ ನಡುವೆ ನಡೆಯುತ್ತಿವೆ, ಇದರಲ್ಲಿ ಕಾಂಗ್ರೆಸ್ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ, ಬಿಜೆಪಿ-ಆರೆಸ್ಸೆಸ್ ಜನರ ಹಕ್ಕುಗಳ್ನು ಕಸಿದುಕೊಂಡು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿದೆ ಎಂದರು.

"ನರೇಂದ್ರ ಮೋದಿ ಮೀಸಲಾತಿಗೆ ವಿರುದ್ಧವಾಗಿದ್ದಾರೆ. ಅವರು ನಿಮ್ಮಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಬಯಸುತ್ತಾರೆ. ದೇಶದ ಮುಂದಿರುವ ದೊಡ್ಡ ಸಮಸ್ಯೆಯೆಂದರೆ ಮೀಸಲಾತಿಯನ್ನು ಶೇಕಡಾ 50 ರಿಂದ ಹೆಚ್ಚಿಸುವುದು" ಎಂದು ಅವರು ಹೇಳಿದರು.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಕ್ಷವು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ಮೀಸಲಾತಿಯ ಮಿತಿಯನ್ನು 50% ಕ್ಕಿಂತ ಹೆಚ್ಚಿಸುತ್ತದೆ ಎಂದು ಭರವಸೆ ನೀಡಿದೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕರೂ ಮೀಸಲಾತಿ ಕೊನೆಗೊಳ್ಳಬೇಕೆಂದು ಬಯಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ಮೋದಿಯವರು ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದ್ದಾರೆ ಎಂದು ಆರೋಪಿಸಿದ ಗಾಂಧಿ, ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಗುತ್ತಿಗೆ ವ್ಯವಸ್ಥೆಯು ಮೀಸಲಾತಿಯನ್ನು ತೆಗೆದುಹಾಕುವಂತಿದೆ ಎಂದು ಹೇಳಿದರು.

"ನಾವು ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯಗಳಲ್ಲಿನ ಗುತ್ತಿಗೆ ಆಧಾರಿತ ಉದ್ಯೋಗಗಳನ್ನು ತೆಗೆದುಹಾಕುತ್ತೇವೆ. ಆ ಬಳಿಕ ಶಾಶ್ವತ ಉದ್ಯೋಗಗಳು ಲಭ್ಯವಿರುತ್ತವೆ, ತಾತ್ಕಾಲಿಕ ಉದ್ಯೋಗಗಳಲ್ಲ" ಎಂದು ಅವರು ಹೇಳಿದರು.

ಶೇ 50ರಷ್ಟು ಮೀಸಲಾತಿಯ ಮಿತಿಯನ್ನು ತೆಗೆದುಹಾಕುವುದಾಗಿ ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಲ್ಲಿ ಇಂದಿನವರೆಗೂ ಹೇಳಿಲ್ಲ. ಚುನಾವಣೆಯಲ್ಲಿ ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಸಂವಿಧಾನ ಮುಗಿದರೆ ಮೀಸಲಾತಿ ಕೊನೆಗೊಳ್ಳುತ್ತದೆ ಎಂದು ಅವರು ಕಿಡಿಕಾರಿದರು.

ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಹಿಂದುಳಿದವರಾಗಿಯೇ ಇರಬೇಕು ಎಂದು ಬಿಜೆಪಿ ಬಯಸುತ್ತದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರು ಸುಮಾರು 22-25 ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದಾರೆ. 16 ಲಕ್ಷ ಕೋಟಿ ಎಂದರೆ 24 ವರ್ಷಗಳ ಉದ್ಯೋಗ ಖಾತರಿ ಯೋಜನೆಯ ಹಣ. ನರೇಂದ್ರ ಮೋದಿ ಅದನ್ನು 22 ಜನ ಶ್ರೀಮಂತರಿಗೆ ನೀಡಿದ್ದಾರೆ. 22 ಶ್ರೀಮಂತರ ಬಳಿ 70 ಕೋಟಿ ಭಾರತೀಯರ ಬಳಿ ಹಣವಿದೆ. ಇದನ್ನು ಬದಲಾಯಿಸಲು ಕಾಂಗ್ರೆಸ್ ಹೊರಟಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಂತಹ ಚುನಾವಣಾ ಭರವಸೆಗಳನ್ನು ಜಾರಿಗೆ ತಂದಿದೆ. ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಇದೇ ರೀತಿಯ 'ಖಾತರಿ'ಗಳನ್ನು ಜಾರಿಗೊಳಿಸುತ್ತದೆ ಎಂದು ಹೇಳಿದರು.

ದೇಶದಲ್ಲಿರುವ ಬಡ ಕುಟುಂಬಗಳ ಪಟ್ಟಿಯನ್ನು ತೆಗೆದುಕೊಂಡು ಪ್ರತಿ ಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ ವಾರ್ಷಿಕ ಒಂದು ಲಕ್ಷ ರೂ. ಜಮೆ ಮಾಡಲಾಗುವುದು.

ದೇಶದಲ್ಲಿ 90 ರಷ್ಟು ಜನಸಂಖ್ಯೆಯಿರುವ ಹಿಂದುಳಿದ ವರ್ಗಗಳು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದ ಬಡವರಿಗೆ ದೇಶದ ಯಾವುದೇ ಸಂಘಟನೆಯಲ್ಲಿ ಸ್ಥಾನವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪ್ರಸ್ತಾಪಿಸಿರುವ ಜಾತಿ ಗಣತಿಯು ದೇಶದ ರಾಜಕೀಯವನ್ನು ಬದಲಾಯಿಸುತ್ತದೆ. ಏಕೆಂದರೆ ಅಂತಹ ಬಡವರು ತಮ್ಮ ಜನಸಂಖ್ಯೆಯ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಅವರು ಹೇಳಿದರು.

ನಾವು ದೇಶದ ಪ್ರತಿಯೊಂದು ಜಾತಿಗಳ ಸಮೀಕ್ಷೆ ಮಾಡುತ್ತೇವೆ. ಆ ಮೂಲಕ ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಮತ್ತು ಬಡವರ ಬಳಿ ಎಷ್ಟು ಹಣವಿದೆ ಎಂಬುದನ್ನು ಪತ್ತೆ ಮಾಡುತ್ತೇವೆ. ಜಾತಿ ಗಣತಿ ನಂತರ ತೆಲಂಗಾಣ ಮತ್ತು ದೇಶದಲ್ಲಿ ಹೊಸ ರಾಜಕೀಯ ಶಖೆ ಪ್ರಾರಂಭವಾಗಲಿದೆ. ಸಂವಿಧಾನವನ್ನು ರಕ್ಷಿಸಬೇಕು ಮತ್ತು ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಗಾಂಧಿ ಹೇಳಿದರು.

ಅಧಿಕಾರದಲ್ಲಿರುವ ಶ್ರೀಮಂತರ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆದು ಬಡವರು, ರೈತರು, ದಲಿತರ ಪರ ಇರುವ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News