ರೋಹಿತ್‌ ವೇಮುಲಾ ಪ್ರಕರಣದ ಮರುತನಿಖೆ ನಡೆಸಲಿರುವ ತೆಲಂಗಾಣ ಪೊಲೀಸರು

Update: 2024-05-04 10:30 GMT

ರೋಹಿತ ವೇಮುಲ | PC : NDTV 

ಹೈದರಾಬಾದ್:‌ ಹೈದರಾಬಾದ್‌ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲಾ ಸಾವು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ತೆಲಂಗಾಣ ಪೊಲೀಸರು ಮರುಆರಂಭಿಸಲಿದ್ದಾರೆಂದು ವರದಿಯಾಗಿದೆ. ವೇಮುಲಾ ಅವರು ಜನವರಿ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ರೋಹಿತ್‌ ವೇಮುಲಾ ಅವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಆದ್ದರಿಂದ ಅವರ ಜಾತಿ ಕುರಿತು ಸತ್ಯ ಹೊರಬರಲಿದೆ ಎಂಬ ಭಯದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತೆಲಂಗಾಣ ಪೊಲೀಸರು ಈ ಪ್ರಕರಣದ ತನಿಖೆ ಮುಚ್ಚುಗಡೆ ವರದಿಯಲ್ಲಿ ತಿಳಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ವೇಮುಲಾ ಕುಟುಂಬ ತಮ್ಮ ಜಾತಿ ಪ್ರಮಾಣಪತ್ರಗಳನ್ನು ಫೋರ್ಜರಿ ಮಾಡಿದೆ ಎಂದು ವರದಿ ಆರೋಪಿಸಿತ್ತು ಆದರೆ ರೋಹಿತ್‌ ವೇಮುಲಾ ಅವರ ತಾಯಿ ಹುಟ್ಟಿನಿಂದ ದಲಿತರಾಗಿದ್ದಾರೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯೊಬ್ಬರು ಅವರನ್ನು ದತ್ತು ಪಡೆದುಕೊಂಡಿದ್ದರು ಎಂದು ವೇಮುಲಾ ಕುಟುಂಬ ಹೇಳಿದೆ.

ಈ ಪ್ರಕರಣದಲ್ಲಿ ಇನ್ನಷ್ಟು ವಿಚಾರಣೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಡಿಜಿಪಿ ರವಿ ಗುಪ್ತಾ ಹೇಳಿದ್ದಾರೆ.

ಈ ಪ್ರಕರಣದ ಮುಚ್ಚುಗಡೆ ವರದಿಯನ್ನು ರಾಜ್ಯದಲ್ಲಿ ಕಳೆದ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಮುಂಚೆಯೇ ಸಿದ್ಧಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಇಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರು ರೋಹಿತ್‌ ವೇಮುಲಾ ಅವರ ತಾಯಿ ರಾಧಿಕಾ ವೇಮುಲಾ, ಸಹೋದರ ರಾಜಾ ವೇಮುಲಾ ಮತ್ತು ಇತರ ವಿದ್ಯಾರ್ಥಿ ನಾಯಕರು ಮತ್ತು ಶಿಕ್ಷಕರ ಜೊತೆ ಸಭೆ ನಡೆಸಲಿದ್ದಾರೆ.

ತೆಲಂಗಾಣ ಪೊಲೀಸರ ವರದಿಯಲ್ಲಿ ಪ್ರಕರಣದ ಆರೋಪಿಗಳಿಗೆ ಕ್ಲೀನ್‌ ಚಿಟ್‌ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News