ನೇಣಿಗೆ ಶರಣಾದ ಎಂಜಿನಿಯರ್ ಸೋದರಿಯರು
ಬೆಂಗಳೂರು, ಜ.19: ಎಂಜಿನಿಯರಿಂಗ್ ಓದುತ್ತಿದ್ದ ಸೋದರಿಯರಿಬ್ಬರು ಒಂದೇ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿಯ ಹೊಂಗಸಂದ್ರದ ಲಕ್ಷ್ಮೀ ಲೇಔಟ್ ನಿವಾಸಿ ಮಲ್ಲೇಶ್ ಎಂಬ ವರ ಮಕ್ಕಳಾದ ತೇಜಸ್ವಿನಿ (21) ಮತ್ತು ರಂಜಿತಾ(19) ಆತ್ಮಹತ್ಯೆ ಮಾಡಿಕೊಂಡ ಸೋದರಿಯರು. ತೇಜಸ್ವಿನಿ 4ನೆ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ರಂಜಿತ 2ನೆ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಕೆಲವು ದಿನಗಳ ಹಿಂದೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಆದರೆ ಓದು ಮುಗಿ ಯುವವರೆಗೂ ವಿವಾಹ ಬೇಡ ಎಂದು ಹಿರಿಯ ಮಗಳು ಹೇಳಿದ್ದಳು. ಎರಡನೆಯ ಮಗಳು ಕೂಡ ಹೀಗೆಯೇ ಹೇಳಿದ್ದಳು. ಇದು ಕುಟುಂಬದಲ್ಲಿ ಸಣ್ಣ ಮನಸ್ತಾಪಕ್ಕೆ ಕಾರಣವಾಗಿತ್ತು. ಆತ್ಮಹತ್ಯೆಗೂ ಮುನ್ನ ಅಪ್ಪ-ಅಮ್ಮನ ತಪ್ಪಿಲ್ಲ ಎಂದು ಪತ್ರ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.