ಹೆಲ್ಮೆಟ್ ಕಡ್ಡಾಯ ಸರಕಾರದ ನಿರ್ಧಾರವಲ್ಲ: ಮುಖ್ಯಮಂತ್ರಿ ಸ್ಪಷ್ಟನೆ
ಬೆಂಗಳೂರು, ಜ.20: ದ್ವಿಚಕ್ರ ವಾಹನ ಸವಾರರ ಜೊತೆಗೆ ಹಿಂಬದಿ ಸವಾರರೂ ಕಡ್ಡಾಯವಾಗಿ ಶಿರಸ್ತ್ರಾಣ ಧರಿಸಬೇಕೆಂಬುದು ಸರಕಾರದ ನಿರ್ಧಾರವಲ್ಲ. ಸುಪ್ರೀಂ ಕೋರ್ಟ್ ಸೂಚನೆಯನ್ನು ಸರಕಾರ ಪಾಲನೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬುಧವಾದ ವಿಧಾನಸೌಧದಲ್ಲಿನ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರ ಜೊತೆಯಲ್ಲಿ ಪ್ರಯಾಣಿಸುವ ಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು, ಆರೋಪಗಳು ಹಾಗೂ ಟೀಕೆಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟಣೆ ನೀಡಿದರು.
ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಮೇಲುಸ್ತರದ ಬುದ್ಧಿವಂತ ವರ್ಗ ಎಂದು ಭಾವಿಸಿದ್ದೆ. ಆದರೆ, ಜಾಲತಾಣದಲ್ಲಿ ಶಿರಸ್ತ್ರಾಣ ತಯಾರಕರು, ವಿತರಕರು, ಮಾರಾಟಗಾರರಿಗೆ ಲಾಭ ಮಾಡಿಕೊಡಲು ಈ ನಿಯಮ ಜಾರಿಗೆ ತರಲಾಗಿದೆ ಎಂಬ ಆರೋಪವು ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಯುದ್ಧಗಳಲ್ಲಿ ಬಲಿಯಾಗುವವರ ಸಂಖ್ಯೆ ಗಿಂತಲೂ ರಸ್ತೆ ಅಪಘಾತಗಳಲ್ಲಿ ಜೀವ ಕಳೆದು ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳುತ್ತಾರೆ. ರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರಾಣ ತೆತ್ತವರಲ್ಲಿ ಶೇ.30ರಷ್ಟು ಮಂದಿ ದ್ವಿಚಕ್ರ ವಾಹನಗಳ ಸವಾರರು ಹಾಗೂ ಹಿಂಬದಿ ಸವಾರರೇ ಆಗಿದ್ದಾರೆ ಎಂಬುದು ಕಟು ಸತ್ಯ. ಮಾತ್ರವಲ್ಲ, ಕಠೋರ ಸತ್ಯವೂ ಹೌದು.
ಈ ಎಲ್ಲ್ಲ ಅಂಕಿ-ಅಂಶಗಳನ್ನು ವೈಜ್ಞಾನಿಕವಾಗಿ ಅಧ್ಯಯಿನಿಸಿರುವ ಹಲವು ವರದಿಗಳನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಜನತೆಯ ಹಿತದೃಷ್ಟಿಯಿಂದ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಶಿರಸ್ತ್ರಾಣವನ್ನು ಕಡ್ಡಾಯಗೊಳಿಸಿದೆ. ಅಲ್ಲದೆ, ನ್ಯಾಯಾಲಯದ ಸೂಚನೆಯ ಅನುಷ್ಠಾನಕ್ಕೆ ತನ್ನ ಉಸ್ತುವಾರಿಯಲ್ಲೇ 2014ರ ಮೇ 30ರಂದು ರಸ್ತೆ ಸುರಕ್ಷತಾ ಸಮಿತಿಯನ್ನು ರಚಿಸಿತ್ತು.
ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳ ಸವಾರರು ಹಾಗೂ ಹಿಂಬದಿ ಸವಾರರು ಶಿರಸ್ತ್ರಾಣ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಇದರ ಸಂಪೂರ್ಣ ಅನುಷ್ಠಾನ ರಾಜ್ಯ ಸರಕಾರದ್ದಾಗಿದೆ. ಈ ನಿಯಮವನ್ನು ಪಾಲಿಸದಿದ್ದಲ್ಲಿ ನ್ಯಾಯಾಲಯದ ನಿಂದನೆಯಾಗುತ್ತದೆ. ಆದಕಾರಣ, ಸಾರ್ವಜನಿಕ ಹಿತದೃಷ್ಟಿಯಿಂದ ದ್ವಿಚಕ್ರ ವಾಹನಗಳ ಹಿಂಬದಿ ಸವಾರರು ಶಿರಸ್ತ್ರಾಣ ಧರಿಸುವುದು ಸೂಕ್ತ ಎಂಬುದು ಕೋರ್ಟ್ ಸದುದ್ದೇಶವಾಗಿದೆ.
ಈ ವಿಷಯವನ್ನು ಮನಗಂಡು ರಾಜ್ಯಾದ್ಯಂತ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಶಿರಸ್ತ್ರಾಣವನ್ನು ಧರಿಸಬೇಕೆಂಬುದು ರಾಜ್ಯ ಸರಕಾರದ ಹಾಗೂ ನನ್ನ ವೈಯಕ್ತಿಕ ಮನವಿಯಾಗಿದೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.