ಮಂಗಳೂರಿಗೆ ರೈಲು: ರೈಲ್ವೆ ಸುರಕ್ಷತಾ ಆಯುಕ್ತರನ್ನು ಪ್ರತಿವಾದಿಯಾಗಿಸಲು ಸೂಚನೆ
ಬೆಂಗಳೂರು: ಸಚಿವರು ಬಜೆಟ್ನಲ್ಲಿ ಮಂಗಳೂರಿಗೆ ಹೆಚ್ಚುವರಿಯಾಗಿ ರೈಲು ಓಡಿಸುವ ಘೋಷಣೆ ಮಾಡಿದ್ದರೂ ಇಲ್ಲಿಯವರೆಗೆ ಅನುಷ್ಠಾನಕ್ಕೆ ಬಾರದ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿದಾರರಿಗೆ ರೈಲ್ವೆ ಸುರಕ್ಷತಾ ಆಯುಕ್ತರನ್ನು ಪ್ರತಿವಾದಿಯನ್ನಾಗಿಸಲು ಸೂಚಿಸಿದೆ.
ಈ ಸಂಬಂಧ ರೈಲ್ವೆ ಯಾತ್ರಿ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಕೇಂದ್ರ ರೈಲ್ವೆ ಸಚಿವರ ಘೋಷಣೆಯಂತೆ ಈಗಾಗಲೇ ಮಂಗಳೂರಿಗೆ ಹೆಚ್ಚುವರಿ ರೈಲುಗಳನ್ನು ಬಿಡಬೇಕಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯವರೆಗೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಹೇಳಿದರು.
ರೈಲ್ವೆ ಅಧಿಕಾರಿಗಳ ಬಳಿ ಇದರ ಬಗ್ಗೆ ವಿಚಾರಿಸಿದರೆ ರೈಲ್ವೆ ಮಾರ್ಗಗಳಲ್ಲಿ ಹಲವು ಸಮಸ್ಯೆಗಳಿದ್ದು, ಈ ಸಮಸ್ಯೆಗಳು ಬಗೆಹರಿದ ಬಳಿಕ ಹೆಚ್ಚುವರಿ ರೈಲನ್ನು ಓಡಿಸಲಾಗುವುದೆಂಬ ಭರವಸೆಯನ್ನು ನೀಡುತ್ತಾರೆ ಎಂದು ನ್ಯಾಯಾಮೂರ್ತಿಗಳ ಗಮನಕ್ಕೆ ತಂದರು.
ರೈಲ್ವೆ ಸಚಿವರು ಮಂಗಳೂರಿಗೆ ಹೆಚ್ಚುವರಿ ರೈಲನ್ನು ಓಡಿಸಲಾಗುವುದೆಂದು ಘೋಷಣೆ ಮಾಡಿದ್ದರೂ ಅಧಿಕಾರಿಗಳು ಸಚಿವರಿಗೆ ಬೆಲೆ ಕೊಟ್ಟಿಲ್ಲವೆಂದಾದರೆ ರೈಲ್ವೆ ಸುರಕ್ಷತಾ ಆಯುಕ್ತರನ್ನೇ ಪ್ರತಿವಾದಿಯನ್ನಾಗಿಸಿಯೆಂದು ಅರ್ಜಿದಾರರಿಗೆ ನ್ಯಾಯಮೂರ್ತಿಗಳು ಸೂಚಿಸಿದರು.