×
Ad

ಸಹಬಾಳ್ವೆ ಸಾಗರಸಮಾವೇಶದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ

Update: 2016-01-23 19:20 IST

 ಇದೇ ಜನವರಿ 30 ರಂದು ಮಂಗಳೂರಿನಲ್ಲಿ ಕರ್ನಾಟಕ ಕೋಮು ಸೌಹಾರ್ದ ಸಮಿತಿಯ ವತಿಯಿಂದ ನಡೆಯಲಿರುವ ಸಹಬಾಳ್ವೆ ಸಾಗರರಾಷ್ಟ್ರೀಯ ಸಮಾವೇಶದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ಅವರು ಆಯ್ಕೆಯಾಗಿದ್ದಾರೆ.

 ಸದಾನಂದ ಸುವರ್ಣರು ಸಮಕಾಲೀನ ರಂಗಭೂಮಿ ಹಾಗೂ ಚಲನಚಿತ್ರರಂಗದ ಬೆರಳೆಣಿಕೆಯ ಸೃಜನಶೀಲ ಪ್ರತಿಭೆಗಳಲ್ಲಿ ಒಬ್ಬರು. 1931 ರಲ್ಲಿ ಮುಲ್ಕಿಯಲ್ಲಿ ಜನಿಸಿದ ಸುವರ್ಣರು ಆರಂಭಿಕ ವಿದ್ಯಾಭ್ಯಾಸದ ಬಳಿಕ ಮುಂಬೈ ನಗರಿಯನ್ನು ಸೇರಿ ಅಲ್ಲಿ ಓದು ಮುಂದುವರಿಸಿದರು. ಮುಂದೆ ಹೊಟ್ಟೆಪಾಡಿಗಾಗಿ ನಾನಾ ಕಸುಬುಗಳನ್ನು ಮಾಡಿದರೂ, ಮುಂಬೈಯ ಯಾಂತ್ರಿಕ ಜೀವನದಲ್ಲಿ ಯಾವತ್ತೂ ಕಳೆದುಹೋಗದೆ, ರಂಗಭೂಮಿಯಂತಹ ಸೃಜನಶೀಲ ರಂಗವನ್ನು ಅಪ್ಪಿಕೊಂಡು ಅಲ್ಲಿ ಪ್ರಯೋಗಶೀಲರಾಗಿ ಸ್ಮರಣಾರ್ಹ ಕೆಲಸವನ್ನು ಮಾಡಿದವರು. ನಟ, ನಿರ್ದೇಶಕ, ರಂಗತಜ್ಞ, ಲೇಖಕ, ಪ್ರಕಾಶಕ, ಸಂಘಟಕ ಹೀಗೆ ಅವರ ಕೆಲಸದ ಹರಹಾದರೋ ವಿಶಾಲವಾದುದು. ಕಳೆದ ಕೆಲವು ವರ್ಷಗಳ ಹಿಂದೆ ಮುಂಬೈಯನ್ನು ತೊರೆದು ಮಂಗಳೂರಿಗೆ ಬಂದು ನೆಲೆನಿಂತ ಬಳಿಕವೂ ಅವರು ರಂಗಭೂಮಿಯೊಂದಿಗಿನ ತಮ್ಮ ನಂಟನ್ನು ತೊರೆದವರಲ್ಲ. ಇಲ್ಲಿಯೂ ಉರುಳು, ಕೋರ್ಟ್‌ಮಾರ್ಶಲ್, ಮಳೆನಿಂತ ಮೇಲೆ, ಕಲೆಂಕ್‌ದಿ ನೀರ್‌ಮೊದಲಾದ ಅನೇಕ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿ 85 ರ ಇಳಿಹರೆಯದಲ್ಲಿಯೂ ಯುವಜನರನ್ನು ನಾಚಿಸುವಂತೆ ಚಟುವಟಿಕೆಯಿಂದಿರುವವರು. ಕರ್ನಾಟಕದ ಪ್ರಮುಖ ರಂಗಕರ್ಮಿಯಾಗಿರುವುದಲ್ಲದೆ ಕಿರುತೆರೆ ಹಿರಿತೆರೆಗಳ ಪ್ರಶಸ್ತಿ ವಿಜೇತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ದೃಷ್ಟಿ ಫಿಲಂ ಸೊಸೈಟಿಯ ರೂವಾರಿಯಾಗಿ, ಸೃಜನಶೀಲ ಸಾಹಿತಿಯಾಗಿ, ಪ್ರಕಾಶಕನಾಗಿ, ಚಾರಿತ್ರಿಕ ಮಹತ್ತ್ವದ ಸಾಕ್ಷ್ಯಚಿತ್ರಗಳ ನಿರ್ಮಾಪಕನಾಗಿ, ಕಾರಂತೋತ್ಸವದ ಸಂಘಟಕರಾಗಿ, ರಂಗಕರ್ಮಿಯಾಗಿ ಸದಾನಂದ ಸುವರ್ಣರು ನಾಡಿಗೆ ನೀಡಿದ ಸಾಂಸ್ಕೃತಿಕ ಕೊಡುಗೆಯಾದರೋ ಅನನ್ಯ.

 ಸುವರ್ಣರು ಅಭಾಗಿನಿ, ವಿಷಮಘಳಿಗೆ, ಕುಲಗೌರವ, ಕದ್ದವನೆ ಕಳ್ಳ, ಕಣ್ಣು ತೆರೆಯಿತು, ಭಗ್ನಮಂದಿರ, ಹಳ್ಳದಿಂದ ಹಾದಿಗೆ, ರೂಪದರ್ಶನ, ಗುಡ್ಡೆದ ಭೂತ, ಕುರುಡನ ಸಂಗೀತ, ಧರ್ಮಚಕ್ರ, ರಜಪೂತ ಪವಾಡ, ಆಕಸ್ಮಿಕಮೊದಲಾದ ನಾಟಕ ರಚಿಸಿದ್ದಾರೆ. ಅವರ ರೂಪಾಂತರಿತ ನಾಟಕಗಳು- ಉರುಳು(ಹಿಂದಿ), ಚಕ್ರವ್ಯೆಹ(ಇಂಗ್ಲಿಷ್), ಅಣ್ಣನ ಮದುವೆ(ಬಂಗಾಳಿ), ಬಾಲೆ ಬಂಗಾರ್(ಬಂಗಾಲಿ). ಕಥಾಸಂಕಲನ- ಚಿನ್ನದ ಗೊಂಬೆ, ಕಾದಂಬರಿ ಮನೆಬೆಳಕು.

    

ಸುವರ್ಣರು ಕನ್ನಡ ಚಿತ್ರರಂಗಕ್ಕೆ ಅನೇಕ ಮೌಲಿಕ ಕಲಾತ್ಮಕ ಸಿನಿಮಾಗಳನ್ನು ಕೊಟ್ಟಿದ್ದು, ಅವರು ನಿರ್ಮಿಸಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ಧಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ಗಳಿಸಿದೆ. ತಬರನ ಕತೆ, ಮನೆ, ಕ್ರೌರ್ಯಮುಂತಾದ ಚಿತ್ರಗಳು ರಾಷ್ಟ್ರಪ್ರಶಸ್ತಿಗೆ ಭಾಜನವಾಗಿವೆ. ಕುಬಿ ಮತ್ತು ಇಯಾಲಅನೇಕ ರಾಜ್ಯಪ್ರಶಸ್ತಿ ಅಲ್ಲದೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನಗೊಳ್ಳುವ ಗೌರವ ಪಡೆದಿದೆ. ಇವರ ಸಾಕ್ಷ್ಯಚಿತ್ರ ಕಾರಂತ ದರ್ಶನ, ಶ್ರೀ ನಾರಾಯಣಗುರು, ತುಳುನಾಡು ಒಂದು ಇಣುಕು ನೋಟತುಂಬ ಪ್ರಸಿದ್ಧವಾಗಿದೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಕರ್ನಾಟಕ ಶ್ರೀಪ್ರಶಸ್ತಿ ಹೀಗೆ ಲೆಕ್ಕವಿಲ್ಲದಷ್ಟು ಮಾನ ಸಮ್ಮಾನಗಳು ಸುವರ್ಣರನ್ನು ಅರಸಿಬಂದಿವೆ. ಎಲ್ಲ ಸಾಧನೆಗಿಂತಲೂ ಮುಖ್ಯವಾಗಿ ಅವರೊಬ್ಬ ವಿನಯಶೀಲ ವ್ಯಕ್ತಿ, ಪ್ರಚಾರದಿಂದ ಬಹುದೂರ ನಿಂತವರು, ಮೃದುಭಾಷಿ, ಮಿತಭಾಷಿ, ಜಾತಿವಾದ, ಮೌಢ್ಯಗಳಿಂದ ದೂರ ನಿಂತ ಪ್ರಗತಿಪರ ಚಿಂತಕ, ಒಬ್ಬ ಮಹಾ ಮಾನವತಾವಾದಿ. ಇಂಥ ಮಹನೀಯರು ಸದರಿ ರಾಷ್ಟ್ರೀಯ ಸಮಾವೇಶದ ಗೌರವಾಧ್ಯಕ್ಷರಾಗಿರುವುದು ಅತ್ಯಂತ ಸೂಕ್ತವೂ ಆಗಿದೆ, ಸಮಾವೇಶದ ಘನತೆಯನ್ನೂ ಹೆಚ್ಚಿಸಿದೆ.

Writer - ಗುಲಾಬಿ ಬಿಳಿಮಲೆ

contributor

Editor - ಗುಲಾಬಿ ಬಿಳಿಮಲೆ

contributor