ಶತಮಾನದ ಹಿಂದೆಯೇ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಿದ ಕಾರ್ಪೋರೇಷನ್ ಬ್ಯಾಂಕ್ ಸಂಸ್ಥಾಪಕ ಹಾಜಿ ಅಬ್ದುಲ್ಲಾ

Update: 2016-01-28 14:57 GMT

ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ದಕ್ಷಿಣಕನ್ನಡ ಜಿಲ್ಲೆಯ ಕೊಡುಗೆ ಬಹುದೊಡ್ಡದು. ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹುಟ್ಟಿದ್ದು ಈ ಜಿಲ್ಲೆಯಲ್ಲಿ.

ಭಾರತದ ಬ್ಯಾಂಕುಗಳಲ್ಲಿ ಅತ್ಯಂತ ಹಳೆಯದು ಎಂಬ ಖ್ಯಾತಿಗೊಳಗಾದ ಕಾರ್ಪೋರೇಷನ್ ಬ್ಯಾಂಕ್ ‘ಕೆನರಾ ಬ್ಯಾಂಕಿಂಗ್ ಕಾರ್ಪೋರೇಷನ್’ ಹೆಸರಿನಲ್ಲಿ ಶುರುವಾದದ್ದು 1906 ರಲ್ಲಿ. ಅದನ್ನು ಆರಂಭಿಸಿದವರು ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲ ಹಾಜಿ ಕಾಸಿಂ ಸಾಹೇಬ್ ಬಹದ್ದೂರ್. ಅದಕ್ಕೆ ಮೊದಲು ಜಿಲ್ಲೆಯಲ್ಲಿದ್ದುದು 1868ರಲ್ಲಿ ಸ್ಥಾಪನೆಯಾದ ‘ಬ್ಯಾಂಕ್ ಆಫ್ ಮದ್ರಾಸ್’ ನ ಮಂಗಳೂರು ಶಾಖೆ ಮಾತ್ರ. ಆ ಬ್ಯಾಂಕ್ ಕೇವಲ ಬಿಳಿಯರಿಗೆ ಮತ್ತು ಸ್ಥಳೀಯ ಪ್ರತಿಷ್ಠಿತರಿಗಾಗಿ ಮಾತ್ರ ಕೆಲಸ ಮಾಡುತ್ತಿತ್ತು. 15 ದಿನಗಳಿಗೊಮ್ಮೆ ಮಂಗಳೂರಿನ ಶಾಖೆಯ ಬ್ರಿಟಿಷ್ ಏಜಂಟ್ ಉಡುಪಿಗೆ ಬಂದಾಗ ಮಾತ್ರ ಆ ಬ್ಯಾಂಕಿನ ಸೇವೆ ಉಡುಪಿಗೆ ದೊರೆಯುತ್ತಿತ್ತು. ಬ್ಯಾಂಕಿನ ಸೇವೆ ಎಲ್ಲರಿಗೂ ದೊರೆಯಬೇಕು ಎಂಬ ಉದ್ದೇಶದಿಂದ ಹಾಜಿಯವರು ಕಾರ್ಪೋರೇಷನ್ ಬ್ಯಾಂಕನ್ನು ತೆರೆದರು.

ಇವರು ಟರ್ಕಿ ಮೂಲದವರಾಗಿದ್ದು ಡೆಕ್ಕನ್ ಪ್ರದೇಶದಿಂದ ವಲಸೆ ಬಂದು ದಕ್ಷಿಣಕನ್ನಡದಲ್ಲಿ ನೆಲೆಸಿದರು ಎಂದು ಹೇಳಲಾಗುತ್ತಿದೆ. ಅವರು ದೊಡ್ಡ ಜಮೀನ್ದಾರರಾಗಿದ್ದರು. ಉಡುಪಿಯಲ್ಲಿ ಕಾರು ಹೊಂದಿದ್ದ ಮೊದಲಿಗ ಇವರು. ಇವರ ತಂದೆ ಹಾಜಿ ಕಾಸಿಂ  ಹಾಜಿ ಬುಡ್ಡನ್ ಸಾಹೇಬರು ಕೂಡಾ ಶ್ರೀಮಂತರಾಗಿದ್ದರು.

19 ನೇ ಶತಮಾನದ ಪ್ರಾರಂಭದಲ್ಲಿ ಉಡುಪಿಯಲ್ಲಿ ಸರಿಯಾದ ಬ್ಯಾಂಕಿಂಗ್ ಸೌಕರ್ಯವಿರಲಿಲ್ಲ. ಹಾಗಾಗಿ ಸ್ಥಳೀಯ ನಾಗರಿಕರ ಸಹಕಾರದಿಂದ 5000 ರುಪಾಯಿ ಮೂಲ ಬಂಡವಾಳದೊಂದಿಗೆ  ಅವರು ಕೆನರಾ ಬ್ಯಾಂಕಿಂಗ್ ಕಾರ್ಪೋರೇಷನ್ ಸ್ಥಾಪಿಸಿದರು.

ಅಬ್ದುಲ್ಲರು ಓದಿದ್ದು ಕೇವಲ ಎಸ್ ಎಸ್ ಎಲ್ ಸಿ. ಆದರೆ ಜಿಲ್ಲೆಯ ಸರ್ವತೋಮುಖ ಬೆಳೆವಣಿಗೆಯ ಬಗ್ಗೆ ಅವರು ಅತೀವ ಆಸಕ್ತರಾಗಿದ್ದರು. ಅವರು ಅಂದಿನ ಮದ್ರಾಸ್ ಶಾಸನ ಸಭೆಯ ಸದಸ್ಯರೂ ಆಗಿದ್ದರು. 1920 ರಲ್ಲಿ ಗಾಂಧೀಜಿಯವರು ಮಂಗಳೂರಿಗೆ ಬಂದಿದ್ದಾಗ ನಡೆದ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.

ದೊಡ್ಡ ಉದ್ಯಮಿಯಾಗಿದ್ದ ಹಾಜಿ ಅಬ್ದುಲ್ಲರು ಅಂದು ಪ್ರಸಿದ್ಧವಾಗಿದ್ದ ವಿಮ್ಕೋ ಕಂಪೆನಿಯ ಮದ್ರಾಸ್ ಪ್ರಾಂತದ ದಾಸ್ತಾನುಗಾರರಾಗಿದ್ದರು. ಒಣಮೀನಿನ ರಫ್ತು ವ್ಯಾಪಾರವನ್ನೂ ಮಾಡುತ್ತಿದ್ದರು. ಅರೇಬಿಯಾದಿಂದ ಒಣ ಹಣ್ಣುಗಳ ಆಮದು ಮತ್ತು ವ್ಯಾಪಾರ ಕೂಡಾ ಮಾಡುತ್ತಿದ್ದರು.

ಬೆಳಗಿನ ಪಾನೀಯವಾಗಿ ಕಾಫಿಯನ್ನು ಪರಿಚಯಿಸಿದ್ದೇ ಅವರು ಎಂದು ಹೇಳಲಾಗುತ್ತಿದೆ. ಅವರಿಗೆ ಹಿಂದೂಸ್ತಾನಿ ಸಂಗೀತದ ಗೀಳು ಇತ್ತು. ಟೆನಿಸ್ ಆಟ ಆಡುತ್ತಿದ್ದರು ಅವರಿಗೆ ಅಂದಿನ ಕಾಶ್ಮೀರದ ಮುಖಂಡ ಶೌಕತ್ ಅಲಿಯವರೊಡನೆ ನಿಕಟ ನಂಟು ಇತ್ತು.

1927 ರಲ್ಲಿ ಅವರು ಕುಂದಾಪುರ ತಾಲೂಕು ಬೋರ್ಡಿನ ಅಧ್ಯಕ್ಷರಾಗಿದ್ದರು. ಮುಂದಿನ ಅವಧಿಗೆ ಉಡುಪಿ ತಾಲೂಕು ಬೋರ್ಡಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಪಶ್ಚಿಮ ಕರಾವಳಿ ಮತ್ತು ನೀಲಗಿರಿಯ ಭೂಮಾಲೀಕರ ಪ್ರತಿನಿಧಿಯಾಗಿ 1919 ರಲ್ಲಿ ಮದರಾಸು ಶಾಸನ ಸಭೆಗೆ ಆಯ್ಕೆಯಾದರು. 1909 ರಲ್ಲಿ ಅವರ ಸಮಾಜಸೇವೆಯನ್ನು ಗುರುತಿಸಿ ಅಂದಿನ ಸರಕಾರ ಅವರಿಗೆ ಖಾನ್ ಸಾಹೇಬ್ ಎಂಬ ವಿರುದನ್ನೂ 1920 ರಲ್ಲಿ ಖಾನ್ ಬಹದ್ದೂರ್ ಎಂಬ ಬಿರುದನ್ನೂ ನೀಡಿ ಗೌರವಿಸಿತು.

ಮಹಾ ಉದಾರಿಯಾಗಿದ್ದ ಹಾಜಿಯವರು ಮುಂದೆ ಇದೇ ಕಾರಣದಿಂದ ಅಪಾರ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡರು ಎನ್ನಲಾಗುತ್ತಿದೆ. 1929 ರಲ್ಲಿ ಬ್ಯಾಂಕ್ ನ ಅಧ್ಯಕ್ಷತೆಯನ್ನು ತೊರೆದ ಬಳಿಕ ಅವರನ್ನು ಕಷ್ಟಗಳು ಬೆಂಬತ್ತಿದವು. ಮುಂದೆ  1935 ರ ಆಗಸ್ಟ್ ನಲ್ಲಿ ತೀರಿಕೊಳ್ಳುವಾಗ ಅವರಿಗೆ  ಕೇವಲ 53 ರ ಹರೆಯ.

ಹಾಜಿ ಅಬ್ದುಲ್ಲರ ಪ್ರಥಮ ಪಾಲು ಬಂಡವಾಳದಿಂದ 1906 ಮಾರ್ಚ್ 12 ರಂದು ಆರಂಭವಾದ ಕೆನರಾ ಬ್ಯಾಂಕಿಂಗ್ ಕಾರ್ಪೋರೇಶನ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ 1929 ರ ವರೆಗೆ ಬ್ಯಾಂಕನ್ನು ಮುನ್ನಡೆಸಿದರು. ಅದೀಗ ಕಾರ್ಪೋರೇಷನ್ ಬ್ಯಾಂಕಾಗಿ ದೇಶದುದ್ದಗಲ ತನ್ನ 835 ಕ್ಕೂ ಅಧಿಕ ಶಾಖೆಗಳನ್ನು ಹರಡಿಕೊಂಡು ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ತನ್ನದೇ ಆದ ಮಹತ್ತರ ಪಾತ್ರ ವಹಿಸುತ್ತಿದೆ.

ಪ್ರದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಜಾತಮತ ಭೇದವಿಲ್ಲದೆ ಅನೇಕ ಮಹನೀಯರು ದುಡಿದಿದ್ದಾರೆ. ಈ ಇತಿಹಾಸ ಗೊತ್ತಿಲ್ಲದವರು ಮಾತ್ರ ಜಾತಿಧರ್ಮದ ನೆಲೆಯಲ್ಲಿ ಗಲಭೆ ಸೃಷ್ಟಿಸಬಲ್ಲರು. ‘ಸಹಬಾಳ್ವೆ ಸಾಗರ’ ಸಮಾವೇಶದ ಸಂದರ್ಭ ಆ ಮಹಾನ್ ಚೇತನಗಳನ್ನು ನೆನಪಿಸಿಕೊಳ್ಳೋಣ.

------

Writer - ಶ್ರೀನಿವಾಸ ಕಾರ್ಕಳ

contributor

Editor - ಶ್ರೀನಿವಾಸ ಕಾರ್ಕಳ

contributor