×
Ad

ಎಸ್ಮಾ ಜಾರಿ: ಖಾದರ್ ಎಚ್ಚರಿಕೆ

Update: 2016-01-29 23:42 IST

108 ನೌಕರರ ಪ್ರತಿಭಟನೆ

ಮಂಗಳೂರು, ಜ.29: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆರೋಗ್ಯ ಕವಚ ‘108’ ಆ್ಯಂಬುಲೆನ್ಸ್ ನೌಕರರು ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆಯನ್ನು ತಕ್ಷಣ ಕೈಬಿಡದಿದ್ದರೆ ಎಸ್ಮಾ ಜಾರಿಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡುತ್ತಿದ್ದ ಅವರು, ಆರೋಗ್ಯ ಕವಚ ಯೋಜನೆಯ ಸಿಬ್ಬಂದಿಯ ಬೇಡಿಕೆ ಈಡೇರಿಸುವ ಬಗ್ಗೆ ಸರಕಾರ ಭರವಸೆ ನೀಡಿದ ಬಳಿಕವೂ ಕೆಲವು ಸಂಘಟನೆಗಳು ಸಿಬ್ಬಂದಿಯ ದಾರಿ ತಪ್ಪಿಸುತ್ತಿವೆ. ಆದರೆ ಸರಕಾರ ಈ ರೀತಿಯ ಒತ್ತಡಕ್ಕೆ ಮಣಿಯುವುದಿಲ್ಲ. ಇನ್ನೂ ಒಂದು ತಿಂಗಳು ಇದೇ ರೀತಿಯ ವರ್ತನೆ ಕಂಡು ಬಂದರೆ ಸರಕಾರ ಆರೋಗ್ಯ ಕವಚ ಯೋಜನೆಗೆ ಸಿಬ್ಬಂದಿ ಯೋಜನೆಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸಲಿದೆ. ಆರೋಗ್ಯ ಕವಚ ಯೋಜನೆಯ ಸಿಬ್ಬಂದಿಯ ಬೇಡಿಕೆಯಾದ ಓವರ್ ಟೈಮ್ ಕೆಲಸಕ್ಕೆ ಹೆಚ್ಚುವರಿ ವೇತನ ಪಾವತಿಗೆ ಸರಕಾರ ಈಗಾಗಲೇ ಸಮ್ಮತಿಸಿದ್ದು, 6.6 ಕೋ.ರೂ. ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
 

ಭಾರತದಲ್ಲಿ ಜಿಕಾ ಭೀತಿ ಇಲ್ಲ

ಅಮೆರಿಕದಲ್ಲಿ ಭೀತಿ ಹುಟ್ಟಿಸಿ ನೂರಾರು ಜನರ ಸಾವಿಗೆ ಕಾರಣವಾಗಿರುವ( ಜಿಕಾ) ವೈರಸ್ ಒಂದು ಜಾತಿಯ ಸೊಳ್ಳೆ ಕಡಿತದಿಂದ ಮಾನವ ದೇಹವನ್ನು ಪ್ರವೇಶಿಸುತ್ತದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತಕ್ಕೆ ಯಾವುದೇ ಎಚ್ಚರಿಕೆಯ ಸಂದೇಶ ಬಂದಿಲ್ಲ. ಆದರೂ ಈ ವೈರಸ್‌ನಿಂದ ಆಗಬಹುದಾದ ಹಾನಿಯನ್ನು ತಪ್ಪಿಸಲು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಮುಂದಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಅಂಗದಾನಕ್ಕೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕುಗಳನ್ನು ಸರಳಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಪ್ರಸಕ್ತ ಇರುವ ಕಾನೂನಿನಿಂದ ತುರ್ತಾಗಿ ಅಂಗಾಂಗ ಜೋಡಣೆ ಸಕಾಲದಲ್ಲಿ ಆಗದೆ ರೋಗಿ ಮರಣವನ್ನುಪ್ಪುವ ಸಾಧ್ಯತೆಗಳು ಹೆಚ್ಚಿರುವುದರಿಂದ ಸೂಕ್ತ ಕಾನೂನು ತಿದ್ದುಪಡಿ ಅಗತ್ಯವಿದೆ ಎಂದು ಸಚಿವ ಖಾದರ್ ತಿಳಿಸಿದರು.

ಮೆಡಿಕಲ್ ಕಾಲೇಜುಗಳಿಂದ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳ ದತ್ತು ಸ್ವೀಕಾರ: ಮೆಡಿಕಲ್ ಕಾಲೇಜುಗಳು ಕಡ್ಡಾಯವಾಗಿ 3 ಪಿಎಚ್‌ಸಿಗಳ ದತ್ತು ಸ್ವೀಕಾರ ಮಾಡಿ ವೈದ್ಯಕೀಯ ಸೇವೆ ನೀಡುವುದು ಕಡ್ಡಾಯ ಗೊಳಿಸಬೇಕೆಂಬ ನಿಯಮವಿದೆ. ಅದೇ ರೀತಿ ಪ್ರಸಕ್ತ ನಗರ ಪ್ರದೇಶದ ಎರಡು ಕೇಂದ್ರಗಳನ್ನು ಸೇರಿಸಿ ಒಟ್ಟು 5 ಕೇಂದ್ರಗಳಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ಕಡ್ಡಾಯಗೊಳಸಬೇಕೆಂಬ ನಿಯಮವಿದೆ ಎಂದು ಖಾದರ್ ತಿಳಿಸಿದರು. ಆರೋಗ್ಯ ಬಂಧು ಯೋಜನೆಯ ಮೂಲಕ ವೈದ್ಯರ ಕೊರತೆ ಇರುವ ಕಡೆ ಎನ್‌ಜಿಒಗಳ ನೆರವಿನಿಂದ ವೈದ್ಯರನ್ನು ನಿಯೋಜನೆ ಗೊಳಿಸಿದ ಕೇಂದ್ರಗಳಿಗೆ ಸರಕಾರ ನೆರವು ನೀಡಿ ಜನರಿಗೆ ವೈದ್ಯಕೀಯ ಸೇವೆ ನೀಡಲು ತೊಡಗಿಸಲಾಯಿತು.

ಆದರೆ ಈ ಯೋಜನೆ ಸಮರ್ಪಕವಾಗಿ ಜನರಿಗೆ ತಲುಪದೇ ಇದ್ದ ಕಾರಣ ಸರಕಾರ ಈ ಯೋಜನೆಗೆ ನೆರವು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಜಿಪಂ-ತಾಪಂ ಚುನಾವಣೆ: ಕಾಂಗ್ರೆಸ್‌ಗೆ ಪೂರಕ ವಾತಾವರಣ

ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಈ ಬಾರಿ ಕಾಂಗ್ರೆಸಿಗೆ ಪೂರಕವಾದ ವಾತಾವರಣವಿದೆ. ತಳಮಟ್ಟದಲ್ಲಿ ಗ್ರಾಪಂಗಳನ್ನು ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ಈ ಬಾರಿ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಜನ ಬೆಂಬಲಿಸಲಿದ್ದಾರೆ ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News