ಸೊರಬದಲ್ಲಿ ದೊಣ್ಣೆಯಿಂದ ಹೊಡೆದು ಯುವಕನ ಹತ್ಯೆ
Update: 2016-01-31 03:48 GMT
ಶಿವಮೊಗ್ಗ, ಜ.31: ಕಳೆದ ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರ ಪುತ್ರನನ್ನು ದುಷ್ಕರ್ಮಿಗಳು ಕೊಲೆಗೈದ ಘಟನೆ ಸೊರಬ ತಾಲೂಕಿನ ಕೆರೆಹಳ್ಳಿ ಎಂಬಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಕೆರೆಹಳ್ಳಿಯ ನಾಗಪ್ಪ ಎಂಬವರ ಪುತ್ರ ಅನಾಮಿಕ(32) ಮೃತಪಟ್ಟ ಯುವಕನಾಗಿದ್ದಾರೆ. ಇವರನ್ನು ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದಾರೆ. ಅನಾಮಿಕ ಅವರ ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ ರಾಜಕೀಯ ವೈಷಮ್ಯದಿಂದಲೇ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಅನಾಮಿಕ ಅವರ ತಂದೆ ನಾಗಪ್ಪ ಕಳೆದ ಬಾರಿಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನಸೆಳೆದಿದ್ದರು. ಈ ಭಾರಿ ಮತ್ತೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಸಂದರ್ಭ ಕೊಲೆ ನಡೆದಿರುವುದು ಸಂಶಯಕ್ಕೆ ಕಾರಣವಾಗಿದೆ.
ಈ ಬಗ್ಗೆ ಅನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.