ಜಾತಿಗಳ ಅಭಿವೃದ್ಧಿಗೆ ರಾಜ್ಯಸರಕಾರ ವಿಫಲ: ಕುಮಾರಸ್ವಾಮಿ
ತುಮಕೂರು: ಜೆಡಿಎಸ್ನಿಂದ ಚುನಾವಣಾ ಪ್ರಚಾರ
ತುಮಕೂರು, ಫೆ.7: ಜಾತಿಗಳ ಅಭಿವೃದ್ಧಿಗೆ ಆದ್ಯತೆ ನೀಡದ ರಾಜ್ಯ ಸರಕಾರ ಜಾತಿವಾರು ಮತಯಾಚನೆಗೆ ಆಯಾ ಸಚಿವರನ್ನು ನಿಯೋಜಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳಗುಂಬ ಮತ್ತು ಊರ್ಡಿಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಅನ್ನ ನೀಡುವ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಅಲ್ಪಸಂಖ್ಯಾತರ ಮೇಲೆ ನೆರವಿಗೆ ಧಾವಿಸದ ಮಂತ್ರಿಗಳು ಇಂದು ಉಪಚುನಾವಣಾ ಕ್ಷೇತ್ರಗಳಲ್ಲಿ ಜಾತಿವಾರು ಮತಯಾಚನೆ ಮಾಡಲು ಸಚಿವರಿಗೆ ತಾಕೀತು ಮಾಡಿದ್ದಾರೆ. ಕೇವಲ ಹಣವನ್ನು ಮುಂದಿಟ್ಟುಕೊಂಡು ಆಯಾ ಜಾತಿಗಳಿಗೆ ಸೇರಿದ ಸಚಿವರು ಮತಯಾಚಿಸುತ್ತಿದ್ದು, ನೈತಿಕತೆ ಇದ್ದರೆ ಜಾತಿವಾರು ನೀಡಿರುವ ಪ್ರಾತಿನಿಧ್ಯ ಅಭಿವೃದ್ಧಿಯ ಬಗ್ಗೆ ಚರ್ಚಿಸಲಿ ಎಂದು ಗುಡುಗಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದುರಾಡಳಿತ ಹೆಚ್ಚಿದ್ದು, ಸಿದ್ದರಾಮಯ್ಯ ಸಂಪುಟದ ಕಾರ್ಯವೈಖರಿ ಸರಿಯಿಲ್ಲ ಎಂಬುದಕ್ಕೆ ಕಾಂಗ್ರೆಸ್ ಮುಖಂಡ ಜನಾರ್ದನ್ ಪೂಜಾರಿ ಯವರು ಶನಿವಾರ ಮೈಸೂರಿನಲ್ಲಿ ನೀಡಿರುವ ಹೇಳಿಕೆಯೇ ಸಾಕ್ಷಿ. ಸಿದ್ದರಾಮಯ್ಯ ಸುತ್ತಮುತ್ತ ಭೂಗಳ್ಳರೇ ಆವರಿಸಿದ್ದು, ರಿಯಲ್ ಎಸ್ಟೇಟ್ ಮಾಫಿಯಾಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಸರಕಾರದ ಯಾವೊಬ್ಬ ಸಚಿವರೂ ಜವಾಬ್ದಾರಿಯುತವಾಗಿ ಕಾರ್ಯನಿ ರ್ವಹಿಸುತ್ತಿಲ್ಲ. ಪರಿಣಾಮ ನಾಡಿನ ಜನತೆ ಮೂಲಭೂತ ಸೌಲಭ್ಯಗಳಿಗೆ ಪರದಾಡುವಂತಾಗಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನತೆ 2018ರ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸದಿದ್ದರೆ ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿರುವ ನನ್ನ ಬಗ್ಗೆ ಲಘುವಾಗಿ ಮಾತನಾಡಿರುವ ಡಿ.ಕೆ.ಶಿವಕುಮಾರ್, ತಮ್ಮ ಪಾಪದ ಹಣದಲ್ಲಿ ರಾಜಕೀಯ ಮಾಡಿದಂತೆ ನಾನು ರಾಜಕೀಯ ಮಾಡಲು ಸಾಧ್ಯವಿಲ್ಲ. ಜನರ ಹಣವನ್ನು ಲೂಟಿ ಮಾಡಿ ರಾಜಕೀಯ ಮಾಡುವುದರ ಬದಲು ರಾಜಕೀಯದಿಂದಲೇ ದೂರವಾಗುವುದು ಲೇಸು ಎನ್ನುವ ಭಾವನೆ ನನ್ನದು ಎಂದು ತಿರುಗೇಟು ನೀಡಿದರು. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ಮತ್ತು ಬಿಜೆಪಿ ಶಾಸಕ ಸುರೇಶ್ಗೌಡರ ದೌರ್ಜನ್ಯ ದಬ್ಬಾಳಿಕೆ ಜೆಡಿಎಸ್ಗೆ ವರದಾನವಾಗಲಿದೆ. ಗ್ರಾಮಾಂತರ ಕ್ಷೇತ್ರದ 7 ಜಿಲ್ಲಾ ಪಂಚಾಯತ್ಗಳಲ್ಲಿ 5 ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ. ತಾಲೂಕು ಪಂಚಾಯತ್ನಲ್ಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮೇಲುಗೈ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು, ಬೆಳಗುಂಬ ಜೆಡಿಎಸ್ ಅಭ್ಯರ್ಥಿ ಕೆಂಪರಾಜು ಊರ್ಡಿಗೆರೆ ವೆಂಕಟೇಶ್ಬಾಬು ತಾಲೂಕು ಪಂಚಾಯತ್ ಅಭ್ಯರ್ಥಿ ಪ್ರಕಾಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು