×
Ad

82 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ

Update: 2016-02-28 23:45 IST

ಅಝೀಝ್ ಕಿರುಗುಂದ

ಚಿಕ್ಕಮಗಳೂರು, ಫೆ.28: ಶ್ರೀಸಾಮಾನ್ಯ ಜನರು ರೂ. 100 ಬಿಲ್ ಕಟ್ಟದಿದ್ದರೆ ಮನೆಗೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೆಸ್ಕಾಂ ಅಧಿಕಾರಿಗಳು, ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಕೋಟಿಗಟ್ಟಲೆ ರೂ. ಬಿಲ್ ಪಾವತಿಸದಿದ್ದರೂ ಮೌನ ಮುರಿಯುವುದಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯದ ಪರಿಣಾಮ ಜಿಲ್ಲೆಯಲ್ಲಿ ಬರೋಬ್ಬರಿ 82 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್ ಬಿಲ್ ಸರಕಾರಿ ಕಚೇರಿಗಳಿಂದಲೇ ಮೆಸ್ಕಾಂಗೆ ಬರುವುದು ಬಾಕಿ ಉಳಿದುಕೊಂಡಿದೆ. ಜಿಲ್ಲೆಯ ವಿವಿಧ ಸರಕಾರಿ ಕಚೆೇರಿಗಳ ಅಧಿಕಾರಿಗಳು ವಿದ್ಯುತ್ ಬಾಕಿ ಹಣ ಪಾವತಿಸದೆ ಮೆಸ್ಕಾಂಗೆ ಶಾಕ್ ನೀಡುತ್ತಿದ್ದಾರೆ. ಅನೇಕ ಗ್ರಾಪಂ, ನಗರಸಭೆ, ಪುರಸಭೆಗಳಲ್ಲಿ ಬೀದಿ ದೀಪ, ನೀರು ಸರಬರಾಜು ಸಂಬಂಧ ಬಳಕೆಯಾಗಿರುವ ವಿದ್ಯುತ್ ಬಿಲ್ ಲಕ್ಷಾಂತರ ದಾಟಿ ಕೋಟಿಗಟ್ಟಲೆ ರೂಪ ಪಡೆಯುತ್ತಿದೆ. ಆದರೂ ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ದ್ದಾರೆ. ಆದರೆ ಸಾಮಾನ್ಯ ಜನರು 100 ರೂ.ಗಿಂತ ಹೆಚ್ಚು ಬಾಕಿ ಉಳಿಸಿಕೊಂಡರೆ ಮುಲಾಜಿಲ್ಲದೆ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತದೆ.

ಸಾಮಾನ್ಯ ವಿದ್ಯುತ್ ಗ್ರಾಹಕರ ಮೇಲೆ ಗಧಾ ಪ್ರಹಾರ ನಡೆಸುವ ಅಧಿಕಾರಿಗಳು ಸರಕಾರಿ ಇಲಾಖೆಗಳೊಂದಿಗೆ ವರ್ತಿಸುವ ರೀತಿ ಬೇರೆ ನಮೂನೆಯಲ್ಲಿದೆ. ಇದಕ್ಕೆ ಸ್ಪಷ್ಟವಾಗಿ ಚಿಕ್ಕಮಗಳೂರಿನ ಮೆಸ್ಕಾಂ ಅಧಿಕಾರಿಗಳ ನಿಯಮ ಪಾಲನೆ ನಿದರ್ಶನವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ 82 ಕೋಟಿ ರೂ.ವಿದ್ಯುತ್ ಬಿಲ್‌ನ್ನು ವಿವಿಧ ಸರಕಾರಿ ಕಚೇರಿಗಳು ಪಾವತಿಸದಿರುವ ಹಿನ್ನೆಯಲ್ಲಿ ಬಾಕಿ ಉಳಿದುಕೊಂಡಿದೆ.
ಜಿಲ್ಲೆಯ 224 ಗ್ರಾಪಂಗಳಲ್ಲಿ ಸುಮಾರು 64 ಕೋಟಿ ರೂ.ವಿದ್ಯುತ್ ಬಿಲ್ ವಸೂಲಿಯಾಗಬೇಕಿದೆ. ನಗರಸಭೆ ಮತ್ತು ಪುರಸಭೆಗಳಿಂದ 15 ಕೋಟಿ ರೂ.ಬಿಲ್ ಬಾಕಿ ಇದೆ. ಉಳಿದಂತೆ ಇತರ ಇಲಾಖೆಗಳಿಂದಲೂ 4 ಕೋಟಿ ರೂ. ಬಾಕಿ ಇದೆ. ಈ ಮಟ್ಟದ ಬಾಕಿ ಉಳಿದಿರುವುದರಿಂದ ಮೆಸ್ಕಾಂ ಅಧಿಕಾರಿಗಳಿಗೆ ತಲೆನೋವು ತಂದಿದ್ದರೂ, ಚಕಾರ ಎತ್ತದೆ ವಸೂಲಾತಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಈ ಪ್ರಮಾಣದಲ್ಲಿ ಉಳಿಸಿಕೊಂಡಿರುವ ಬಾಕಿ ಹಣ ವಸೂಲಾತಿಗೆ ಕ್ರಮ ಜರಗಿಸದಿರುವುದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗುಳಿದಿದೆ.
ಈ ಬಗ್ಗೆ ಅನೇಕ ಸಲ ಮೆಸ್ಕಾಂ ಅಧಿಕಾರಿಗಳು ಬಾಕಿ ಪಾವತಿಗೆ ಪತ್ರ ಬರೆದಿದ್ದರೂ ಬಾಕಿ ಉಳಿಸಿಕೊಂಡಿರುವ ಕಚೆೇರಿಗಳ ಅಧಿಕಾರಿಗಳು ಪತ್ರಕ್ಕೆ ಸೌಜನ್ಯಕ್ಕಾದರೂ ಉತ್ತರಿಸುವ ಗೋಜಿಗೆ ಹೋಗಿಲ್ಲ. ಕೆಲವು ಅಧಿಕಾರಿಗಳಲ್ಲಿ ಈ ಕುರಿತು ವಿಚಾರಿಸಿದರೆ ಸರಕಾರದ ಅನುದಾನದ ಕೊರತೆ ಇರುವುದಾಗಿ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇಲಾಖೆಗಳಲ್ಲಿ ಶೇ. 60ರಷ್ಟು ಹಣ ವಿದ್ಯುತ್ ಬಿಲ್ ಪಾವತಿಗಾಗಿ ಮೀಸಲಿದ್ದರೂ ಪ್ರತಿ ತಿಂಗಳು ಬಾಕಿ ಉಳಿಸಿಕೊಂಡು ಬೃಹತ್ ಮೊತ್ತವಾಗಿ ಇದೀಗ ಕೋಟಿಗಟ್ಟಲೆ ರೂಪದಲ್ಲಿ ಬೆಳೆದು ನಿಂತಿದೆ.
 ಸಾಮಾನ್ಯ ವಿದ್ಯುತ್ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಒಂದು ನೋಟಿಸ್ ಕೂಡ ಕೊಡದೆ ಕಡಿತಗೊಳಿಸುವ ಮೆಸ್ಕಾಂ ಅಧಿಕಾರಿಗಳು ಸರಕಾರಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿಫಲವಾಗಿದ್ದಾರೆ. ಒಟ್ಟಾರೆ ಮೆಸ್ಕಾಂ ಇಲಾಖೆ ನಿರ್ಲಕ್ಷ್ಯ ಧೋರಣೆಯಿಂದ ಕೋಟಿ ಕೋಟಿ ರೂ.ನಷ್ಟವಾಗುತ್ತಿದೆ. ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿಗಳು ಬಾಕಿ ಉಳಿಸಿಕೊಂಡು ಬೇಜವಾಬ್ದಾರಿತನ ಪ್ರದರ್ಶಿಸುವುದು ತರವಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News