×
Ad

ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ರಿಯಾಯಿತಿ ಇರಲಿ: ಸಚಿವ ದಿನೇಶ್ ಗುಂಡೂರಾವ್

Update: 2016-03-20 22:54 IST

ಬೆಂಗಳೂರು, ಮಾ. 20: ನಗರದ ಬಡ- ಮಧ್ಯಮ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸಲು ಖಾಸಗಿ ಆಸ್ಪತ್ರೆಗಳು ಮುಂದಾದರೆ, ರಾಜ್ಯ ಸರಕಾರ ಅಗತ್ಯ ಬೆಂಬಲ-ಸಹಕಾರ ನೀಡಲಿದೆ ಎಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ರವಿವಾರ ನಗರದ ಶೇಷಾದ್ರಿಪುರಂನಲ್ಲಿ ಅಪೋಲೊ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಸ್ಥಳೀಯ ಜನರ ಜೀವನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸಬೇಕು ಎಂದು ಸಲಹೆ ನೀಡಿದರು.
ಮುನ್ನೆಚ್ಚರಿಕೆ ಅಗತ್ಯ: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯಿಂದ ಬರುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ, ಖಾಸಗಿ ಆಸ್ಪತ್ರೆಗಳು ಜನರಿಗೆ ಬರುವ ರೋಗಗಳನ್ನು ತಡೆಯುವ ಕ್ರಮಗಳತ್ತ ಸೂಕ್ತ ಗಮನ ನೀಡಬೇಕಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರೋಗ ಬಂದ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ. ಮುನ್ನೆಚ್ಚರಿಕೆ ವಹಿಸಿದರೆ ಜೀವನ ಶೈಲಿ ಬದಲಾವಣೆಯಿಂದ ಬರುವ ಹೃದ್ರೋಗ, ಮಧುಮೇಹ, ರಕ್ತದೊತ್ತಡದಂತಹ ಹಲವು ರೋಗಗಳನ್ನು ನಿಯಂತ್ರಿಸಬಹುದು ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಖಾಸಗಿ ಆಸ್ಪತ್ರೆಗಳನ್ನು ಆರಂಭಿಸುವುದು ಸುಲಭದ ಮಾತಲ್ಲ. ಉತ್ತಮ ವೈದ್ಯರ ತಂಡದ ಜೊತೆಗೆ ಹೆಚ್ಚಿನ ಬಂಡವಾಳವು ಅಗತ್ಯ. ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವ ತುರ್ತು ಇದೆ. ಅಲ್ಲದೆ, ಸೇವಾ ಮನೋಭಾವನೆ ಇದ್ದರೂ ಇದೆಲ್ಲವನ್ನು ಸರಿದೂಗಿಸುವುದು ಸುಲಭವಲ್ಲ ಎಂದು ಹೇಳಿದರು.
ಕೆಂಪೇಗೌಡ ಬಸ್ ನಿಲ್ದಾಣದಿಂದ ಸಮೀಪದಲ್ಲೇ ಇರುವ ಅಪೋಲೊ ಆಸ್ಪತ್ರೆ ಶೇಷಾದ್ರಿಪುರಂ ಪ್ರದೇಶದಲ್ಲಿ ಕೊಳಗೇರಿ ನಿವಾಸಿಗಳಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಬೇಕು ಎಂದ ಅವರು, ಸ್ಥಳೀಯ ಜನರ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಅಪೋಲೊ ಆಸ್ಪತ್ರೆಯ ಅಧ್ಯಕ್ಷ ಡಾ.ಪ್ರತಾಪ್ ಸಿ. ರೆಡ್ಡಿ ಮಾತನಾಡಿ, ಗುಣಮಟ್ಟದ ಆರೋಗ್ಯ ಸೇವೆಗೆ ಹೆಸರಾಗಿರುವ ಅಪೋಲೊ ಆಸ್ಪತ್ರೆ ಆಧುನಿಕ ತಂತ್ರಜ್ಞಾನ ಹಾಗೂ ಅತ್ಯುತ್ತಮ ವೈದ್ಯರ ತಂಡದೊಂದಿಗೆ ಆರೋಗ್ಯ ಸೇವೆ ನೀಡಲು ಸನ್ನದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪೋಲೊ ಆಸ್ಪತ್ರೆಯ ನಿರ್ದೇಶಕಿ ಸುನೀತಾ ರೆಡ್ಡಿ, ಆಸ್ಪತ್ರೆ ಸಿಇಒ ಡಾ.ನರೇಶ್, ರವೀಂದ್ರಪ್ಪಸೇರಿದಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News