ಭ್ರಷ್ಟಾಚಾರ ನಿಗ್ರಹ ದಳಕ್ಕೆ ಗಗನ್ ದೀಪ್ ಮುಖ್ಯಸ್ಥ
Update: 2016-03-20 23:36 IST
ಬೆಂಗಳೂರು, ಮಾ.20: ತೀವ್ರ ಪರ-ವಿರೋಧ ಚರ್ಚೆಗಳ ನಡುವೆಯೇ ರಾಜ್ಯ ಸರಕಾರ ‘ಭ್ರಷ್ಟಾಚಾರ ನಿಗ್ರಹದಳ(ಎಸಿಬಿ)’ ಸಂಸ್ಥೆಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ಕೆ.ವಿ. ಗಗನ್ ದೀಪ್ ಅವರನ್ನು ನೇಮಕ ಮಾಡಿದೆ.
ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎಸ್.ಸಲೀಂ ಅವರನ್ನು ಎಸಿಬಿಗೆ ಐಜಿಪಿಯನ್ನಾಗಿ ನಿಯೋಜನೆ ಮಾಡಿ ರಾಜ್ಯ ಸರಕಾರ ಶನಿವಾರ ಸಂಜೆ ಅಧಿಕೃತ ಆದೇಶ ಹೊರಡಿಸಿದೆ. ಆದರೆ, ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿಗೆ ಸಂಬಂಧಿಸಿದಂತೆ ಯಾವುದೇ ನಿಯಮಾವಳಿ ರಚಿಸುವ ಮೊದಲೇ ಅಧಿಕಾರಿಗಳನ್ನು ನೇಮಿಸಿರುವುದು ಅಚ್ಚರಿ ಮೂಡಿಸಿದೆ.