×
Ad

ಪಿಯು ರಸಾಯನಶಾಸ್ತ್ರ ಮರು ಪರೀಕ್ಷೆಗೆ ವಿರೋಧ: ವಿದ್ಯಾರ್ಥಿಗಳಿಂದ ರಕ್ತದಲ್ಲಿ ಸಹಿ ಹಾಕಿ ಪ್ರತಿಭಟನೆ

Update: 2016-03-23 23:47 IST

ಬೆಂಗಳೂರು, ಮಾ.23: ದ್ವಿತೀಯ ಪಿಯು ರಸಾಯನಶಾಸ್ತ್ರ ವಿಷಯದ ಹೊಸ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬಾರದೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಕೈಕೊಯ್ದುಕೊಂಡು ರಕ್ತದಿಂದ ಸಹಿ ಹಾಕಿದ ಪತ್ರವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಪಿಯು ಬೋರ್ಡ್ ನಿರ್ದೇಶಕಿ ಪಲ್ಲವಿ ಅಕುರಾತಿ ಅವರಿಗೆ ಕಳುಹಿಸಿದ್ದಾರೆ.

ಮರುಪರೀಕ್ಷೆ ನಡೆಸುವುದನ್ನು ಖಂಡಿಸಿ ವಿದ್ಯಾರ್ಥಿಗಳು ಬುಧವಾರ ಕೂಡ ಮಲ್ಲೇಶ್ವರದ ಪಿಯು ಬೋರ್ಡ್ ಎದುರು ಪ್ರತಿಭಟನೆ ನಡೆಸಿದರು. ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅನುಕೂಲ ಆಗಿದೆ. ಎಲ್ಲಿ ಸೋರಿಕೆಯಾಗಿದೆ ಅಲ್ಲಿ ಮರು ಪರೀಕ್ಷೆ ನಡೆಯಲಿ. ಅದರ ಬದಲು ಎಲ್ಲರೂ ಮತ್ತೆ ಪರೀಕ್ಷೆ ಬರೆಯಬೇಕೆನ್ನುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಖಂಡಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಸೇರಿ ನೂರಾರು ಮಂದಿ ಜಮಾಯಿಸಿದ್ದರು. ಪಿಯು ಮಂಡಳಿ ನಿರ್ದೇಶಕಿ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಗೈರು ಹಾಜರಾಗಿದ್ದರು. ಮರು ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳಿಕೊಂಡಿರುವ ವಿದ್ಯಾರ್ಥಿಗಳು, ಈ ಮರು ಪರೀಕ್ಷೆ ವಿರುದ್ಧ ಕಾನೂನು ಸಮರಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.

ಮಂಡಳಿ ಆವರಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಹೊರಟ್ಟಿ ಬೆಂಬಲ: ಈ ಬಗ್ಗೆ ವಿಧಾನ ಪರಿಷತ್‌ನಲ್ಲೂ ಚರ್ಚೆ ನಡೆಯಿತು. ಪಿಯು ಪರೀಕ್ಷೆಯ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ತಿಂಗಳ 29ರಂದು ರಾಜ್ಯಾದ್ಯಂತ ಮರು ಪರೀಕ್ಷೆ ನಡೆಸಲು ಸರಕಾರ ನಿರ್ಧರಿಸಿರುವುದು ಸರಿಯಲ್ಲ. ಎಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೋ ಅಂತಹ ಕಡೆ ಮಾತ್ರ ಮರು ಪರೀಕ್ಷೆ ನಡೆಸಿ ಎಂದು ಜೆಡಿಎಸ್ ಪಕ್ಷದ ನಾಯಕ ಬಸವರಾಜ್ ಹೊರಟ್ಟಿ ಸರಕಾರವನ್ನು ಆಗ್ರಹಿಸಿದರು.

 ಮಾ.29ಕ್ಕೆ ಹೊಸ ಸಿಲೆಬಸ್‌ನ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಿಂದಾಗಿ ಮಾರ್ಚ್ 29ರಂದು ಮರು ಪರೀಕ್ಷೆ ನಡೆಸಲಾಗುವುದು ಎಂದು ಪಿಯು ಬೋರ್ಡ್ ತಿಳಿಸಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಪರೀಕ್ಷೆ ನಡೆಯಲಿದೆ. 2012ಕ್ಕಿಂತ ಹಿಂದಿನ ಸಿಲೆಬಸ್‌ನ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಇಲ್ಲ ಎಂದು ಪಿಯು ಶಿಕ್ಷಣ ಮಂಡಳಿ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News