×
Ad

ಮಂಡನೆಯಾಗದ ವರದಿ: ಮೇಲ್ಮನೆ ಕಲಾಪ ವ್ಯರ್ಥ

Update: 2016-03-24 23:12 IST

ಬೆಂಗಳೂರು, ಮಾ.24: ರಾಜ್ಯದಲ್ಲಿ ನಡೆದಿದೆ ಎನ್ನಲಾದ ವಕ್ಫ್ ಆಸ್ತಿ ಕಬಳಿಕೆ ಸಂಬಂಧದ ಅಲ್ಪಸಂಖ್ಯಾತರ ಆಯೋಗದ ವರದಿಯನ್ನು ಮಂಡಿಸಬೇಕೆಂದು ಪಟ್ಟು ಹಿಡಿದು ವಿಧಾನ ಪರಿಷತ್ತಿನಲ್ಲಿಂದು ಬಿಜೆಪಿ ಸದಸ್ಯರು ನಡೆಸಿದ ಧರಣಿಗೆ ಸದನದ ಇಡೀ ದಿನದ ಕಲಾಪ ಆಹುತಿಯಾಯಿತು. ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸಭಾಪತಿ ಅವರು ನೀಡಿರುವ ರೂಲಿಂಗ್‌ನಂತೆ ಸದನದಲ್ಲಿ ಟಿ.ಬಿ.ಜಯಚಂದ್ರ ಅವರು ವರದಿಯನ್ನು ಮಂಡಿಸಬೇಕಾಗಿತ್ತು. ಆದರೆ, ಅವರು ಶಿವಮೊಗ್ಗ ವಿವಿಯ ಘಟಿಕೋತ್ಸವ ಸಮಾರಂಭಕ್ಕೆ ಹೋದ ಹಿನ್ನೆಲೆಯಲ್ಲಿ ವರದಿಯನ್ನು ಇಂದು ಮಧ್ಯಾಹ್ನ 3ಗಂಟೆಗೆ ಮಂಡಿಸಲಿದ್ದಾರೆ ಎಂದು ಸಭಾನಾಯಕ ಎಸ್.ಆರ್.ಪಾಟೀಲ್ ತಿಳಿಸಿದರು. ಈ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವರದಿಯನ್ನು ಮಂಡಿಸಲು ಕಾನೂನು ಸಚಿವರೇ ಬರಬೇಕೆ. ನಿಮಗೆ ವರದಿಯನ್ನು ಮಂಡಿಸಲು ಏನಾದರೂ ಕಾನೂನಿನ ಅಡ್ಡಿ ಇದೆಯೇ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಕಾನೂನು ಸಚಿವರಿಗೆ ಸದನ ಮುಖ್ಯವೋ ಘಟಿಕೋತ್ಸವ ಮುಖ್ಯವೋ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರೊಂದಿಗೆ ಉನ್ನತ ಶಿಕ್ಷಣ ಸಚಿವರು ಇರಲೇಬೇಕು. ಸದನಕ್ಕೆ ಗೈರು ಹಾಜರಾಗಿ ಅಗೌರವ ತೋರಿಸಲು ಅಲ್ಲಿಗೆ ತೆರಳಿದ್ದಾರೆ ಎಂದು ಯಾರೂ ಭಾವಿಸುವ ಅಗತ್ಯವಿಲ್ಲ ಎಂದು ಕಾನೂನು ಸಚಿವರು ಘಟಿಕೋತ್ಸವದಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿ ಕೊಂಡರು. ಮಾತು ಮುಂದುವರಿಸಿದ ಮುಖ್ಯಮಂತ್ರಿಗಳು ವರದಿಯನ್ನು ಸರಕಾರದ ಯಾವುದೇ ಸಚಿವರು ಮಂಡಿಸಬಹುದು. ಆದರೆ, ಈ ವರದಿಯ ಬಗ್ಗೆ ಕಾನೂನು ಸಚಿವರು ಮೊದಲಿನಿಂದಲೂ ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರೇ ಈ ಬಗ್ಗೆ ಸೂಕ್ತ ವಿವರಣೆಯನ್ನು ನೀಡಬಲ್ಲರು. ಮಧ್ಯಾಹ್ನ ಮೂರು ಗಂಟೆಯವರೆಗೆ ತಾಳ್ಮೆಯಿಂದಿರಿ ಎಂದು ಪ್ರತಿಪಕ್ಷಗಳ ಸದಸ್ಯರಿಗೆ ಕಿವಿಮಾತು ಹೇಳಿದರು.

ಆದರೂ ಪ್ರತಿಪಕ್ಷದ ಸದಸ್ಯರು ಈಗಲೇ ವರದಿಯನ್ನು ಮಂಡಿಸಬೇಕೆಂದು ಪಟ್ಟು ಹಿಡಿದಿದ್ದರಿಂದ ಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ 15 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಮಧ್ಯಾಹ್ನ ಸದನದಲ್ಲಿ ಕಾನೂನು ಸಚಿವರಿಂದಲೇ ವರದಿಯನ್ನು ಮಂಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ತಿಳಿಸಲಿ ಎಂದು ಹೇಳಿದ್ದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನೀವು ಹೇಳಿದ ಹಾಗೆಲ್ಲಾ ಕೇಳುವುದಕ್ಕಾಗುವುದಿಲ್ಲ ಎಂದು ಹೇಳಿದರು. ಸರಕಾರದ ಸಹಾಯಕ್ಕೆ ಬಂದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಪುಟ್ಟಣ್ಣ ಅವರು ಮಧ್ಯಾಹ್ನ 3ಗಂಟೆಗೆ ಕಾನೂನು ಸಚಿವರು ವರದಿ ಮಂಡಿಸುವುದಾಗಿ ಸರಕಾರವೇ ತಿಳಿಸಿದೆ. ಅವರು ಮೊದಲು ವರದಿ ಮಂಡಿಸಲಿ ನಿಮಗೆ ಇಷ್ಟವಾಗದಿದ್ದಲ್ಲಿ ನಿಮ್ಮ ಬೆಂಬಲಕ್ಕೆ ನಾವೂ ಇರುತ್ತೇವೆ. ಧರಣಿ ವಾಪಸ್ ಪಡೆದು ಪ್ರಶ್ನೋತ್ತರ ಕಲಾಪ ನಡೆಸಲು ಅನುವು ಮಾಡಿಕೊಡಿ ಎಂದು ಧರಣಿ ನಿರತರಿಗೆ ಮನವಿ ಮಾಡಿದರು. ಆದರೂ ಬಿಜೆಪಿ ಸದಸ್ಯ ವರದಿಯನ್ನು ಮಂಡಿಸಲೆಬೇಕು ಎಂದು ಪಟ್ಟು ಹಿಡಿದಾಗ ಪುನಃ 10 ನಿಮಿಷಗಳ ಕಾಲ ಸದನದ ಕಲಾಪವನ್ನು ಮುಂದೂಡಿದರು. ಸದನ ಮತ್ತೆ ಸೇರಿದಾಗಲೂ ಧರಣಿ ಮುಂದುವರಿದಿತ್ತು. ಕಾನೂನು ಸಚಿವರು ಮಧ್ಯಾಹ್ನ ಬಂದು ಸದನದಲ್ಲಿ ವರದಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ ಎಂದು ಸಭಾನಾಯಕರು ತಿಳಿಸಿದರೂ ಬಿಜೆಪಿ ಸದಸ್ಯರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಸಭಾಪತಿ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News