×
Ad

ಮಹಿಳೆಯರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಮನಸ್ಸು ಜನರಲ್ಲಿರಬೇಕು: ಮೋಟಮ್ಮ

Update: 2016-03-26 22:23 IST

ಚಿಕ್ಕಮಗಳೂರು. ಮಾ.26: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪಿಡುಗು ಹೆಚ್ಚಾಗಿದೆ. ಜಿಲ್ಲೆಯಲ್ಲೂ ಸಾಕಷ್ಟು ಮಂದಿ ದೌರ್ಜನ್ಯಕ್ಕೆ ಒಳಗಾದ ಪ್ರಕರಣಗಳಿವೆ. ಶೃಂಗೇರಿಯಲ್ಲಿ ಮಹಿಳೆಯೋರ್ವರ ಮೇಲೆ ಆ್ಯಸಿಡ್ ದಾಳಿ ನಡೆದಾಗ ಜಿಲ್ಲೆಯಲ್ಲಿ ಮಹಿಳೆಯರು ಅದರ ಬಗ್ಗೆ ಜೋರಾಗಿ ಧ್ವನಿ ಎತ್ತಬೇಕಾಗಿತ್ತು. ಆದರೆ ಆಗ ವೌನವಾಗಿದ್ದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಹೇಳಿದ್ದಾರೆ.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿವಿಧ ಮಹಿಳಾ ಸಂಘಗಳ ಸಹಯೋಗದಲ್ಲಿ ಕುವೆಂಪು ಕಲಾ ಮಂದಿರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣುಮಕ್ಕಳ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಮನಸ್ಸು ಜನರಲ್ಲಿರಬೇಕು. ಮಹಿಳೆಯರನ್ನು ಎಲ್ಲ ವಿಚಾರಗಳಲ್ಲಿಯೂ ಬೆಂಬಲಿಸುವ ಉತ್ತಮ ಸಮಾಜ ನಿರ್ಮಾಣವಾಗಬೇಕು. ಹೆಂಗಳೆಯರಿಗೆ ಧೈರ್ಯ ತುಂಬುವ ಜನಸಮುದಾಯದ ಅಗತ್ಯವಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ತಿಳಿಸಿದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಬದಲು ನ್ಯಾಯಾಂಗ ಬಂಧನದಿಂದ ಬೇಗನೆ ಖುಲಾಸೆಯಾಗುತ್ತಿದ್ದಾರೆ. ಲೈಂಗಿಕ ಕಿರುಕುಳ ನಡೆಸಿದವರಿಗೆ ಕಠಿಣ ಶಿಕ್ಷೆ ನಿಯಮ ಬಲಗೊಳ್ಳಬೇಕು. ತಾಯಂದಿರೂ ಹೆಣ್ಣು ಮಕ್ಕಳಿಗೆ ಶಿಸ್ತು, ಗಟ್ಟಿತನ ಕಲಿಸಿಕೊಡಬೇಕು. ಸವಾಲನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಮೂಡಿಸಬೇಕು. ಸಮಸ್ಯೆಗಳು ಎದುರಾದಾಗ ಹೋರಾಟದ ಮೂಲಕ ನ್ಯಾಯ ದಕ್ಕಿಸಿಕೊಳ್ಳುವಂತಾಗಬೇಕು. ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಸಮಸ್ಯೆ ಹೇಳಿಕೊಂಡು ಬರುವ ಹೆಂಗಳೆಯರಿಗೆ ಶೀಘ್ರ ಸ್ಪಂದಿಸಬೇಕು ಎಂದು ತಿಳಿಸಿದರು.

  ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಹೆಣ್ಣು ಕಾರಣ. ಆಕೆ ಸಮಾಜವನ್ನು ತಿದ್ದಬಲ್ಲಳು. ಮಹಿಳೆಯರ ಬಗ್ಗೆ ಅನೇಕ ಕಟ್ಟುಪಾಡುಗಳಿವೆ. ನಮ್ಮ ದೈನಂದಿನ ಬದುಕಿನಲ್ಲಿ ಸತ್-ಸಂಪ್ರದಾಯಗಳನ್ನು ಪಾಲಿಸಬೇಕೇ ವಿನಃ ಗೊಡ್ಡು ಸಂಪ್ರದಾಯಗಳನ್ನಲ್ಲ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಕಠಿಣ ಕಾರ್ಯಗಳನ್ನು ನಿರ್ವಹಿಸುತ್ತಿರುವ ಮಹಿಳೆಯರು ಅಬಲೆಯಲ್ಲ. ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಹಿರಿಯ ರಾಜಕಾರಣಿ ಮೋಟಮ್ಮಾ ಅವರನ್ನು ಮಂತ್ರಿಯಾಗಿ ನೇಮಕ ಮಾಡುವುದು ಸೂಕ್ತ. ಈ ವಿಚಾರವನ್ನು ಮೋಟಮ್ಮರವರ ಮೇಲಿನ ಗೌರವದಿಂದ ಹೇಳುತ್ತಿದ್ದೇನೆಯೇ ಹೊರತು, ರಾಜಕೀಯ ಉದ್ದೇಶದಿಂದಲ್ಲ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿದರು.ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಮಹಿಳಾ ಸಾಧಕರಾದ ಬಿ.ಸಿ.ಗೀತಾ, ಕವಿತಾಗೋಪಾಲ್‌ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉದಯ ಟಿವಿ ನಿರೂಪಕ ಬಿ.ಎಸ್. ಸತ್ಯಾ, ನಗರಸಭಾ ಅಧ್ಯಕ್ಷ ದೇವರಾಜ್‌ಶೆಟ್ಟಿ, ನಗರಸಭೆ ಪ್ರಭಾರಿ ಆಯುಕ್ತೆ ಪಲ್ಲವಿ, ಉಪ ವಿಭಾಗಾಧಿಕಾರಿ ಸ್ನೇಹಲ್, ಪದ್ಮತಿಮ್ಮೇಗೌಡ, ರೇಖಾ ಹುಲಿಯಪ್ಪಗೌಡ ಮತ್ತಿತರರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜಯ್ಯ ವಂದಿಸಿದರು. ಶೃತಿ ಶ್ರೀನಿವಾಸ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News