ಶೇಖರಿಸಿಡಲಾಗಿದ್ದ ಬೀಟೆ ಮರ ಕಳವು
ಮಡಿಕೇರಿ, ಮಾ.27: ಗದ್ದೆಹಳ್ಳ ಗ್ರಾಮದ ತೋಟವೊಂದರಲ್ಲಿ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಕೊಯ್ದಿರಿಸಿದ್ದ 50ರಿಂದ 60ಸಿಎಫ್ಟಿ ಬೀಟೆ ಮರವನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ನಡೆದಿದೆ.
ಯಂಕನ ವೇಣುಗೋಪಾಲ್ ಎಂಬವರ ತೋಟದಲ್ಲಿ ನಡೆದಿರುವ ಕಳ್ಳತನಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್ ಅವರ ಮಗ ಶ್ರೀರಾಮ ನೀಡಿರುವ ದೂರನ್ನು ಠಾಣಾಧಿಕಾರಿ ಹರಿವರ್ಧನ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಯಂಕನ ವೇಣುಗೋಪಾಲ್ ಅವರು ಕಳೆದ ಹಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ಆರ್ಥಿಕ ಮುಗ್ಗಟ್ಟಿನಿಂದಾಗಿ ಬೀಟೆ ಮರವನ್ನು ಅರಣ್ಯ ಇಲಾಖೆಯ ಪರವಾನಿಗೆ ಪಡೆದುಕೊಂಡು ವೀರಾಜಪೇಟೆಯ ಶ್ಯಾಮ್ಕುಮಾರ್ ಎಂಬವರಿಗೆ ಮಾರಾಟ ಮಾಡಲು ಮರಗಳನ್ನು ಕಡಿದು ಶೇಖರಿಸಿಡಲಾಗಿತ್ತು. ಮಾ. 26ರಂದು ರಾತ್ರಿ ಕಳ್ಳರು ತೋಟದಲ್ಲಿದ್ದ ಬೀಟೆ ಮರವನ್ನು ಅಪಹರಿಸಿದ್ದಾರೆ. ಕಳ್ಳತನ ನಡೆದ ಸ್ಥಳದಿಂದ ಅನತಿ ದೂರದಲ್ಲಿದ್ದ ದ್ವಿಚಕ್ರ ವಾಹನವೊಂದನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಮುಂದಿನ ಎರಡು ದಿನಗಳಲ್ಲಿ ಪೊಲೀಸರು ಕಳ್ಳರನ್ನು ಬಂಧಿಸದಿದ್ದಲ್ಲಿ ಯಂಕನ ಕುಟುಂಬಸ್ಥರೊಂದಿಗೆ ಸುಂಟಿಕೊಪ್ಪ ಠಾಣೆಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಯಂಕನ ಕರುಂಬಯ್ಯ ತಿಳಿಸಿದ್ದಾರೆ.