×
Ad

ಯುಪಿಎಸ್ಸಿ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಾಗಾರ

Update: 2016-03-27 22:24 IST

ಶಿವಮೊಗ್ಗ, ಮಾ.27: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧ್ದತೆ ನಡೆಸುತ್ತಿರುವ, ಐಎಎಸ್, ಐಪಿಎಸ್, ಐಎಫ್‌ಎಸ್ ನಂತಹ ಉನ್ನತ ಹುದ್ದೆಗೇರುವ ಕನಸು ಕಟ್ಟಿಕೊಂಡಿರುವ ಯುವಕ-ಯುವತಿಯರಿಗೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ, ಶಿವಮೊಗ್ಗ ಜಿಲ್ಲಾಡಳಿತವು ಪರೀಕ್ಷಾರ್ಥಿಗಳಿಗೆ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಿದೆ. ಜಿಲ್ಲೆಯ ಮಟ್ಟಿಗೆ ಜಿಲ್ಲಾಡಳಿತದಿಂದ ಈ ರೀತಿಯ ತರಬೇತಿ ಕಾರ್ಯಾಗಾರ ಆಯೋಜಿಸುತ್ತಿರುವುದು ಇದೇ ಪ್ರಪ್ರಥಮವಾದುದಾಗಿದೆ. ಮಾ. 29 ರಂದು ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಬೆಳಗ್ಗೆ 10:30 ರಿಂದ ಸಂಜೆ 4:30ರವರೆಗೆ ಈ ತರಬೇತಿ ಕಾರ್ಯಾಗಾರ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್‌ರವರು ಮನವಿ ಮಾಡಿದ್ದಾರೆ. ಈ ಕುರಿತಂತೆ ಅವರು ಪತ್ರಿಕಾ ಪ್ರಕಟನೆಯೊಂದನ್ನು ಬಿಡುಗಡೆ ಮಾಡಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಲಿ ಚ್ಛಿಸುವ ಪದವೀಧರರು, ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ಜಿಲ್ಲಾ ಅಪರಾಧ ವಿಭಾಗ ಅಥವಾ ಸ್ವಾಗತಕಾರರ ಬಳಿ ಖುದ್ದಾಗಿ ಆಗಮಿಸಿ ಹೆಸರು ನೋಂದಾಯಿಸಬೇಕು ಎಂದು ರವಿ ಡಿ. ಚೆನ್ನಣ್ಣವರ್‌ರವರು ಮಾಹಿತಿ ನೀಡಿದ್ದಾರೆ. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಐಎಎಸ್, ಐಪಿಎಸ್ ಅಧಿಕಾರಿಗಳು ಭಾಗವಹಿಸಿ, ಮಾರ್ಗದರ್ಶನ ನೀಡಲಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಎಸ್. ಗುಳೇದ್, ಚಿತ್ರದುರ್ಗ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಪಾಟೀಲ್, ಕೊಪ್ಪಳ ಜಿಪಂ ಸಿಇಒ ಆರ್. ರಾಮಚಂದ್ರನ್, ಭಟ್ಕಳ ಉಪ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ ಅನೂಪ್‌ಶೆಟ್ಟಿ, ಸಾಗರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ನಿಶಾ ಜೇಮ್ಸ್, ಶಿವಮೊಗ್ಗ ಜಿಲ್ಲಾ ಸಹಾಯಕ ಪೊಲೀಸ್ ಅಧೀಕ್ಷಕ ಎಂ.ಎಸ್.ಮುಹಮ್ಮದ್ ಸುಜೀತಾರವರು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಪ್ರಸ್ತುತ ಶಿವಮೊಗ್ಗ ಜಿಲ್ಲಾಡಳಿತ ಯುಪಿಎಸ್‌ಸಿ ಪರೀಕ್ಷೆ ಎದುರಿಸುವುದು ಹೇಗೆಂಬ ವಿಷಯದ ಬಗ್ಗೆ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಿರುವುದು ಹಾಗೂ ಯುಪಿಎಸ್‌ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಐಎಎಸ್, ಐಪಿಎಸ್ ಹುದ್ದೆ ಅಲಂಕರಿಸಿರುವ ಅಧಿಕಾರಿಗಳ ಮೂಲಕ ಮಾರ್ಗದರ್ಶನ ನೀಡುತ್ತಿರುವುದು ಸ್ಪರ್ಧಾಕಾಂಕ್ಷಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ನಗರದ ಪದವೀಧರ ವಿಕ್ರಮ್ ಎಂಬವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News