ಗಣಕಯಂತ್ರ ಕನ್ನಡೀಕರಣದಿಂದ ಭಾಷಾ ರಕ್ಷಣೆ ಸಾಧ್ಯ: ಡಾ.ಚಂದ್ರಶೇಖರ ಕಂಬಾರ
ಬೆಂಗಳೂರು, ಮಾ. 27: ಆಂಗ್ಲ ಭಾಷೆಯ ಪ್ರಮಾಣದಷ್ಟೇ ಗಣಕಯಂತ್ರದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸದ ಹೊರತು ಕನ್ನಡವನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ ರವಿವಾರ ನಗರದ ಯವನಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ದಶಮಾನೋತ್ಸವ ಮತ್ತು ರಾಜ್ಯಮಟ್ಟದ ತರಬೇತಿ ಪ್ರಮಾಣಪತ್ರ ವಿತರಣೆ ಹಾಗೂ ಕನ್ನಡ ಗಣಕ ಸ್ಮರಣಪತ್ರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಉಳಿವಿಗಾಗಿ ಎಷ್ಟು ವಿಶ್ವ ಕನ್ನಡ ಸಮ್ಮೇಳನ, ವಿಚಾರ ಸಂಕಿರಣ, ಚರ್ಚೆ, ಸಂವಾದಗಳನ್ನು ಹಮ್ಮಿಕೊಂಡರೂ ಭಾಷೆಯ ರಕ್ಷಣೆಗೆ ಉಪಯೋಗಕ್ಕೆ ಬರುವುದಿಲ್ಲ. ಆಧುನೀಕರಣದ ಪ್ರಭಾವತೆಯ ಕಂಪ್ಯೂಟರ್ನಲ್ಲಿ ಬಳಸುವ ಎಲ್ಲ ತಂತ್ರಾಂಶಗಳನ್ನು ಆಂಗ್ಲ ಭಾಷೆಯ ಮಾದರಿಯಲ್ಲೆ ಕನ್ನಡವನ್ನು ಬಳಸಿದಾಗ ಮಾತ್ರ ಭಾಷಾ ರಕ್ಷಣೆ ಮಾಡಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಅವಧಿಯಲ್ಲಿ ನಾನೂ ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಕಂಪ್ಯೂಟರನ್ನು ಕನ್ನಡೀಕರಣಗೊಳಿಸಬೇಕು ಎಂದು ಹೋರಾಟ ಮಾಡಿದೆ. ನನ್ನ ಜೊತೆ ಪೂರ್ಣಚಂದ್ರ ತೇಜಸ್ವಿ ಮತ್ತು ಕುವೆಂಪು ವಿವಿ ಕುಲಪತಿಯಾಗಿದ್ದ ಡಾ.ಚಿದಾನಂದಗೌಡ ಸೇರಿ ಸರಕಾರದ ಮೇಲೆ ಒತ್ತಡ ತಂದರೂ ಯಾವುದೇ ಪ್ರಯೋಜನ ಸಿಗಲಿಲ್ಲ. ಈ ನಮ್ಮ ಪ್ರಯತ್ನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪನವರು ಪ್ರೋತ್ಸಾಹ ನೀಡಿದರಾದರೂ ಈ ಯೋಜನೆ ಇಂದಿಗೂ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಯಾವೊಬ್ಬ ರಾಜಕಾರಣಿ ಕನ್ನಡ ಭಾಷೆಗಾಗಿ ಧ್ವನಿ ಎತ್ತುತ್ತಿಲ್ಲ, ಎನೇನೂ ಕೆಲಸ ಮಾಡುತ್ತಿಲ್ಲ. ಮಂತ್ರಿಗಳಿಂದಲೇ ಕನ್ನಡ ಭಾಷೆ ನಾಶವಾಗುತ್ತಿದೆ.ರಾಜಕೀಯ ನಾಯಕರೇ ಪರೋಕ್ಷವಾಗಿ ಕನ್ನಡವನ್ನು ಕೊಲೆ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಅವರು, ಕನ್ನಡ ಭಾಷೆಯನ್ನು ಕಂಪ್ಯೂಟರೀಕರಣ ಗೊಳಿಸಲು ಸರಕಾರ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಿಷಿ ವರದಿ ಅನುಷ್ಠಾನಗೊಳಿಸಿ: ಇತ್ತೀಚಿನ ದಿನಗಳಲ್ಲಿ ಯುವಕರ ಮೇಲೆ ಹೆಚ್ಚು ಬ್ರಿಟಿಷರ ಪ್ರಭಾವ ಬೀರಿದೆ. ಅವರ ಜೀವನ ಶೈಲಿ, ಜೀವನ ಕ್ರಮ ಮತ್ತು ಭಾಷೆಯ ಮೇಲೆ ಪರಾವಲಂಬಿಯಾಗುತ್ತಿದ್ದಾರೆ. ಈ ಪರಿಣಾಮ ಮಕ್ಕಳಲ್ಲಿನ ಸೃಜನಶೀಲತೆಗೆ ಕುಂದು ಬಂದಿದೆ. ಇಂದಿನ ಯುವಕರಲ್ಲಿ ಸೃಜನಶೀಲತೆ ಬೆಳೆಯಬೇಕಾದರೆ ಸರೋಜಿನಿ ಮಹಿಷಿ ವರದಿಯನ್ನು ಕೂಡಲೆ ಅನುಷ್ಠಾನಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆಹಾರ ಸಚಿವ ದಿನೇಶ್ಗುಂಡೂ ರಾವ್ ಮಾತನಾಡಿ, ಕನ್ನಡದಲ್ಲಿ ಕಂಪ್ಯೂಟರ್ ತರಬೇತಿ ನೀಡುವುದರಿಂದ ಅನ್ಯ ಭಾಷೆಗೆ ಅವಲಂಬಿತರಾಗುವುದನ್ನು ತಪ್ಪಿಸಬಹುದು. ಇಂದು ಕಂಪ್ಯೂಟರ್ ಜ್ಞಾನವಿದ್ದರೆ ಮಾತ್ರ ಉದ್ಯೋಗ ಗಳಿಸಲು ಸಾಧ್ಯ. ಈ ದೃಷ್ಠಿಯಿಂದ ಯುವಕರಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುತ್ತಿರುವ ಕೇಂದ್ರಗಳಿಗೆ ಸರಕಾರ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ಅಧ್ಯಕ್ಷ ಎಸ್.ಎಲ್.ಗಂಗಾಧರಪ್ಪ ಮಾತನಾಡಿ, ಕನ್ನಡಿಗರ ಸೋಮಾರಿತನ ದಿಂದ ಇಂದು ಕನ್ನಡ ಅವನತಿಯತ್ತ ಸಾಗಿದೆ. ನಗರದಲ್ಲಿ ಹೋಟೆಲ್ ಉದ್ಯಮ ಸೇರಿದಂತೆ ಇತರೆ ವಲಯಗಳ ಸಣ್ಣ ಪುಟ್ಟ ಕೆಲಸಗಳನ್ನು ಇಂದು ಹೆಚ್ಚು ಪರಭಾಷಿಗರೇ ನಿಭಾಯಿಸುತ್ತಿದ್ದಾರೆ. ಈ ಪರಿಣಾಮ ಬೆಂಗಳೂರು ನಗರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ.23ಕ್ಕೆ ಇಳಿದಿದೆ.ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಕನ್ನಡ ಭಾಷೆ ಸಂಪೂರ್ಣವಾಗಿ ನಶಿಸಲಿದೆ ಎಂದು ಆತಂಕಪಟ್ಟರು.
ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ಸಂಸ್ಥಾಪಕ ಮುಖ್ಯಸ್ಥ ಆರ್.ಎ.ಪ್ರಸಾದ್, ಕೆಪಿಸಿಎಲ್ನ ಮಾಜಿ ನಿರ್ದೇಶಕ ಎಂ.ಬಿ.ಜಯರಾಂ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಸ್.ಆರ್.ಸತ್ಯನಾರಾಯಣ ಉಪಸ್ಥಿತ ರಿದ್ದರು.