×
Ad

ಮೇಲ್ಮನೆಯಲ್ಲಿ ಮುಂದುವರಿದ ಗದ್ದಲ-ಕೋಲಾಹಲ

Update: 2016-03-28 22:14 IST

ಬೆಂಗಳೂರು, ಮಾ.28: ರಾಜ್ಯದಲ್ಲಿ ನಡೆದಿದೆ ಎನ್ನಲಾದ 15 ಲಕ್ಷ ಕೋಟಿ ರೂ. ವೌಲ್ಯದ 57 ಸಾವಿರ ಎಕರೆ ವಕ್ಫ್ ಆಸ್ತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಮಂಡಿಸುವಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಗದ್ದಲ, ಕೋಲಾಹಲ ನಡೆದಿದ್ದರಿಂದ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡುವಂತಾಯಿತು. ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಕಳೆದ ವಾರದಿಂದ ನಡೆಸುತ್ತಿರುವ ಧರಣಿಯನ್ನು ಸೋಮವಾರವೂ ಮುಂದೂವರಿಸಿ ಸರಕಾರ ವರದಿಯನ್ನು ಮಂಡಿಸಲೇಬೇಕು ಎಂದು ಒತ್ತಾಯಿಸಿದರು. ಇದರಿಂದ ಉಂಟಾದಮಾತಿನ ಚಕಮಕಿ ಗದ್ದಲದಿಂದಾಗಿ ಸದನವನ್ನು ಕೆಲಕಾಲ ಮುಂದೂಡಲಾಯಿತು. ಮತ್ತೆ ಸದನ ಸೇರಿದಾಗಲೂ ಇದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಮಧ್ಯಾಹ್ನದವರೆಗೆ ಕಲಾಪವನ್ನು ಮುಂದೂಡಲಾಯಿತು.
 ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಭಾಪತಿಗಳು ವರದಿ ಮಂಡನೆ ಸಂಬಂಧ ನೀಡಿರುವ ರೂಲಿಂಗ್‌ನ್ನು ಪುನರ್ ಪರಿಶೀಲಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕಕೆ.ಎಸ್.ಈಶ್ವರಪ್ಪ ಹಾಗೂ ಸದಸ್ಯ ಗೋ.   
  ಮಧು ಸೂದನ್, ವಕ್ಫ್ ಆಸ್ತಿ ವರದಿಗೆ ಸಂಬಂಧಿಸಿದಂತೆ ಮರುಪರಿಶೀಲನೆಗೆ ಅವಕಾಶ ನೀಡಬೇಕೆಂದಾಗ ಸಭಾ ಪತಿಗಳು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಅಭಿಪ್ರಾಯ ಪಡೆದು ವರದಿ ಮಂಡಿಸಲು ಹೇಳಿದ್ದರೂ ಅದನ್ನು ಪರಿಪಾಲಿಸದೆ ಮರು ಪರಿಶೀಲನೆ ಮಾಡಿ ಎಂದು ಮನವಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
 ಪುನಃ ಮಾತು ಮುಂದುವರಿಸಿದ ಕೆ.ಎಸ್.ಈಶ್ವರಪ್ಪ, ಸರಕಾರ ವಕ್ಫ್ ಆಸ್ತಿ ಕಬಳಿಕೆ ಸಂಬಂಧಿಸಿದ ವರದಿಯನ್ನು ಮಂಡಿಸದಿದ್ದರೆ ಧರಣಿಯನ್ನು ವಾಪಸ್ ಪಡೆದುಕೊಳ್ಳದೆ ಮುಂದುವರಿಸುತ್ತೇವೆ ಎಂದು ಹೇಳಿದರು.
 ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಎಸ್.ಆರ್.ಪಾಟೀಲ್, ರಾಜ್ಯದ ಜನರ ತೆರಿಗೆ ಹಣದಿಂದ ಸದನವನ್ನು ನಡೆಸಲಾಗುತ್ತಿದ್ದು, ಸದನ ನಡೆಸಲು ಅವಕಾಶ ಮಾಡಿಕೊಡಿ. ಕಾಲಹರಣ ಮಾಡುವುದು ಸರಿಯಲ್ಲ. ಈಗಾಗಲೇ ಹಲವು ದಿನಗಳ ಕಲಾಪ ಬಲಿಯಾಗಿದ್ದು, ವಿಪಕ್ಷ ನಾಯಕ ಈಶ್ವರಪ್ಪಅವರು ತಮ್ಮ ಸದಸ್ಯರನ್ನು ವಾಪಸ್ ಕರೆಯಿಸಿಕೊಳ್ಳಿ ಎಂದು ಮನವಿ ಮಾಡಿದರು.
 ಸಭಾನಾಯಕರ ಮಾತನ್ನು ಕೇಳುವ ಪರಿಸ್ಥಿತಿ ಯಲ್ಲಿಲ್ಲದ ಬಿಜೆಪಿ ಸದಸ್ಯರು ವರದಿ ಮಂಡಿಸುವಂತೆ ತಮ್ಮ ಪಟ್ಟು ಮುಂದುವರಿಸಿದರು. ಆಗ ಮತ್ತೆ ಆಡಳಿತ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡೂ ಕಡೆಯ ಸದಸ್ಯರು ಎದ್ದುನಿಂತು ಮಾತನಾಡಲು ಆರಂಭಿಸಿದ್ದರಿಂದ ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸಂಪುಟ ಸಭೆಯಲ್ಲಿ ತಿರಸ್ಕರಿಸಲಾಗಿದೆ. ತಾವು ನೀಡಿರುವ ರೂಲಿಂಗ್‌ನ್ನು ಮರು ಪರಿಶೀಲಿಸಿ ಎಂದು ಸಚಿವ ಜಯಚಂದ್ರ ಹೇಳುತ್ತಿದ್ದಂತೆ ಮತ್ತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗಲಾಟೆ, ಗದ್ದಲ ಶುರುವಾಯಿತು.
 ಜೋರಾಗಿ ಗದ್ದಲ ಕೋಲಾಹಲ ನಡೆದಾಗ ಪ್ರತಿಕ್ರಿಯಿಸಿದ ಸಭಾಪತಿ ಶಂಕರಮೂರ್ತಿ, ಸದನವನ್ನು ಸರಿ ದಾರಿಗೆ ತರುವುದು ನನ್ನ ಕೆಲಸ. ಸದಸ್ಯರು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿ, ಕಲಾಪ ನಡೆಸಲು ಅವಕಾಶ ಮಾಡಿಕೊಡಿ. ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ಆರೋಪ ಪ್ರತ್ಯಾರೋಪದಲ್ಲಿ ತಮ್ಮನ್ನು ಎಳೆಯಬೇಡಿ ಎಂದು ಈ ಎರಡೂ ಪಕ್ಷಗಳ ಸದಸ್ಯರಿಗೆ ಮನವಿ ಮಾಡಿದರು.
  ಬಿಜೆಪಿಯ ಗೋ. ಮಧುಸೂದನ್ ಮಾತನಾಡಿ, ಸಭಾಪತಿಗಳು ನೀಡುವ ರೂಲಿಂಗೇ ಸರ್ವೋಚ್ಚ. ಸರಕಾರ ತಕರಾರು ತೆಗೆಯಲು ಬರುವುದಿಲ್ಲ. ರೂಲಿಂಗ್‌ನ್ನು ಪರಿಪಾಲನೆ ಮಾಡುವುದು ಒಂದೇ ಸರಕಾರಕ್ಕೆ ಇರುವ ಮಾರ್ಗ. ಅದನ್ನು ಬಿಟ್ಟು 15 ಲಕ್ಷ ಕೋಟಿ ರೂ. ವಕ್ಫ್ ಆಸ್ತಿ ದುರುಪಯೋಗವಾಗಿದೆ. ಭ್ರಷ್ಟರನ್ನು ಸರಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಈ ಮಧ್ಯೆ ಪ್ರವೇಶಿಸಿದ ಜೆಡಿಎಸ್ ಸದಸ್ಯ ಪುಟ್ಟಣ್ಣ, ಕಳೆದ ಆರು ದಿನಗಳಿಂದ ಇದೇ ವಿಷಯವಾಗಿ ಚರ್ಚೆ ನಡೆಯುತ್ತಿದೆ. ನಾವು ಹಲವು ವಿಷಯಗಳನ್ನು ಹೊರ ಹಾಕಿದರೂ ಅದು ಸದನದಲ್ಲಿ ಬರುತ್ತಿಲ್ಲ. ಒಂದೇ ವಿಷಯವನ್ನು ಇಟ್ಟುಕೊಂಡು ಆಟವಾಡುವುದು ಸರಿಯಲ್ಲ. ಸರಕಾರ ಕೂಡಾ ವರದಿ ಮಂಡನೆ ಮಾಡುವುದನ್ನು ಬಿಟ್ಟು ಪುನರ್ ಪರಿಶೀಲಿಸಿ ಎಂದು ಕೇಳುವುದು ಅರ್ಥವಿಲ್ಲ. ಸಂಪುಟ ಸಭೆಯಲ್ಲಿ ವರದಿ ತಿರಸ್ಕಾರವಾಗಿದ್ದರೆ ಅದನ್ನೇ ಮಂಡಿಸಿ. ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದರು.
ಈ ಮಧ್ಯೆ ಟಿ.ಬಿ. ಜಯಚಂದ್ರ ಮತ್ತೆ ಸಮಜಾಯಿಷಿ ನೀಡಲು ಮುಂದಾಗುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ, ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸದನ ಹಾದಿ ತಪ್ಪುತ್ತಿರುವುದನ್ನು ಗಮನಿಸಿದ ಸಭಾಪತಿ ಶಂಕರಮೂರ್ತಿ, ಸದನವನ್ನು ಕೆಲ ಕಾಲ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News