4.04 ಕೋಟಿ ರೂ. ಉಳಿತಾಯ ಬಜೆಟ್
ಮಡಿಕೇರಿ ನಗರಸಭೆ
ಮಡಿಕೇರಿ, ಮಾ. 28: ನಗರಸಭೆ 2016-17ನೆ ಸಾಲಿಗಾಗಿ 4.04 ಕೋಟಿ ರೂ.ಗಳ ಉಳಿತಾಯ ಬಜೆಟ್ನ್ನು ಮಂಡಿಸಿದ್ದು, ಕೆರೆಗಳ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗಿದೆ. ಕಾವೇರಿ ಕಲಾಕ್ಷೇತ್ರದ ನೂತನ ಕಟ್ಟಡದ ನಿರ್ಮಾಣಕ್ಕೆ ಸುಮಾರು 7 ಕೋಟಿ ರೂ. ಮೀಸಲಿಡಲು ನಿರ್ಧರಿಸಲಾಗಿದೆ.
ನಗರಸಭಾ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಶ್ರೀಮತಿ ಬಂಗೇರ ಅವರು 4,04,79,051 ರೂ. ಗಳ ಉಳಿತಾಯ ಬಜೆಟ್ನ್ನು ಮಂಡಿಸಿದರು.
ಆರಂಭಿಕ ಶಿಲ್ಕು ರೂ.10.89, ಸ್ವೀಕೃತಿ ರೂ.69.56, ಒಟ್ಟು 80.45 ಕೋಟಿ ರೂ. ಹಾಗೂ ಪಾವತಿ76.41 ಕೋಟಿ ರೂ. ಹಾಗೂ ಅಂತಿಮ ಶಿಲ್ಕು 4.05 ಕೋಟಿ ರೂ. ನಿರೀಕ್ಷಿಸಲಾಗಿದೆ.
ರಸ್ತೆಗಳ ಅಭಿವೃದ್ಧಿಗೆ 12.21 ಕೋಟಿ ರೂ., ತಡೆಗೋಡೆಗೆ 10.37 ಕೋಟಿ ರೂ., ಬೀದಿ ದೀಪಗಳಿಗೆ 5.22 ಕೋಟಿ ರೂ., ಪಾದಚಾರಿಗಳ ಅನುಕೂಲಕ್ಕಾಗಿ ಜನರಲ್ ತಿಮ್ಮಯ್ಯವೃತ್ತದಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ 1.50 ಕೋಟಿ ರೂ.,ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ4.99 ಕೋಟಿ ರೂ., ಜಲಮೂಲಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಕೆರೆಗಳ ಅಭಿವೃದ್ಧಿಗೆ 4 ಕೋಟಿ ರೂ., ಕೂಟುಹೊಳೆ ಜಲಾಶಯದ ಹೂಳೆತ್ತುವ ಮತ್ತು ಆಳಗೊಳಿಸುವ ಕಾರ್ಯಕ್ಕೆ 2.10 ಕೋಟಿ ರೂ., ಕಾವೇರಿ ಕಲಾಕ್ಷೇತ್ರದ ನೂತನ ಕಟ್ಟಡ ನಿರ್ಮಾಣಕ್ಕೆ 7 ಕೋಟಿ ರೂ.,ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕಾಗಿ 3.50 ಕೋಟಿ ರೂ., ಸ್ಮಶಾನ ಅಭಿವೃದ್ಧಿಗಾಗಿ 2 ಕೋಟಿ ರೂ., ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ರೂ. ಹಾಗೂ ಚರಂಡಿ, ಮಳೆ ನೀರು ಚರಂಡಿ, ಸಾರ್ವಜನಿಕ ಶೌಚಾಲಯ, ವಾಹನ ಖರೀದಿ, ನೀರುಸರಬರಾಜು ವಿತರಣಾ ವ್ಯವಸ್ಥೆ, ಮಳೆ ನೀರು ಕೊಯ್ಲು ಮತ್ತಿತರ ಅಭಿವೃದ್ಧಿಗೆ 5.93 ಕೋಟಿ ರೂ. ವೆಚ್ಚವಾಗಬಹುದೆಂದು ನಿರೀಕ್ಷಿಸಲಾಗಿದೆ. *ಸರಕಾರದಿಂದ ಅನುದಾನ ನಿರೀಕ್ಷೆ: ವಿಶೇಷ ಅನುದಾನ 32 ಕೋಟಿ ರೂ., ಖಾಸಗಿ ಬಸ್ ನಿಲ್ದಾಣ 4.99 ಕೋಟಿರೂ., ಕೆರೆಗಳ ಅಭಿವೃದ್ಧಿಗೆ 4 ಕೋಟಿ ರೂ., ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ರೂ., ಸ್ಮಶಾನ ಅಭಿವೃದ್ಧಿಗೆ 2 ಕೋಟಿ ರೂ., ಮೇಲು ಸೇತುವೆ ನಿರ್ಮಾಣಕ್ಕೆ ವಿಶೇಷ ಅನುದಾನ 1 ಕೋಟಿ ರೂ. ನಿರೀಕ್ಷಿಸಲಾಗಿದೆ. ವಾಡಿಕೆ ಅನುದಾನದಂತೆ ಎಸ್ಎಫ್ಸಿ ಮುಕ್ತನಿಧಿ 2.15 ಕೋಟಿ ರೂ., 14ನೆ ಹಣಕಾಸಿನ ಅನುದಾನ 1.28 ಕೋಟಿ ರೂ., ಸಿಎಂಎಸ್ಎಂಟಿಡಿಪಿ ಹಂತ 1 ರ ಅನುದಾನ 5 ಕೋಟಿ ರೂ., ಪ್ರೋತ್ಸಾಹ ಅನುದಾನ 15 ಲಕ್ಷ ರೂ., ವಿದ್ಯುತ್ ಅನುದಾನಗಳು 2.99 ಕೋಟಿ ರೂ.,ಎಸ್ಎಫ್ಸಿ ವಿಶೇಷ ಅನುದಾನ 20 ಲಕ್ಷ ರೂ., ಘನತಾಜ್ಯನಿರ್ವಹಣಾ ಅನುದಾನ 50 ಲಕ್ಷ ರೂ., ಕುಡಿಯುವ ನೀರಿನ ಅನುದಾನ 50 ಲಕ್ಷ ರೂ. ಸ್ವಚ್ಛ ಭಾರತ್ ಮಿಷನ್ ಅನುದಾನ 8.25 ಲಕ್ಷವನ್ನು ನಿರೀಕ್ಷಿಸಲಾಗಿದೆ.
*ನಗಸಭೆಯ ಆದಾಯ ನಿರೀಕ್ಷೆ: ಆಸ್ತಿ ತೆರಿಗೆ 1.70 ಕೋಟಿ ರೂ., ನೀರಿನ ಕರ 45 ಲಕ್ಷ ರೂ., ಮಳಿಗೆ ಬಾಡಿಗೆ 80 ಲಕ್ಷ ರೂ., ಉದ್ದಿಮೆ ಪರವಾನಿಗೆ ಶುಲ್ಕ 20 ಲಕ್ಷ ರೂ. ಹಾಗೂ ಅಭಿವೃದ್ಧಿ ಶುಲ್ಕ, ಜಾಹೀರಾತು ತೆರಿಗೆ, ಘನ ತ್ಯಾಜ್ಯ ನಿರ್ವಹಣಾ ಶುಲ್ಕ, ಖಾತಾ ಬದಲಾವಣೆ, ಖಾತಾ ನಕಲು, ದಂಡಗಳು, ವಾರ್ಷಿಕ ಹರಾಜು ಮತ್ತು ಇತರ ಆದಾಯ 1.99 ಕೋಟಿ ರೂ. ನಿರೀಕ್ಷಿಸಲಾಗಿದೆ. ಆಯ-ವ್ಯಯದ ಮೇಲಿನ ಚರ್ಚೆಗೆ ಎಪ್ರಿಲ್ ಮೊದಲ ವಾರದಲ್ಲಿ ವಿಶೇಷ ಸಭೆ ನಡೆಸಲು ಬಜೆಟ್ ಸಭೆ ನಿರ್ಧರಿಸಿತು.
ಬಿಜೆಪಿ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಮೂರು ಬಾರಿ ತಾವು ಸದಸ್ಯರಾಗಿ ನಗರಸಭೆಯನ್ನು ಪ್ರತಿನಿಧಿಸಿದ್ದು, 15 ಬಾರಿ ಬಜೆಟ್ ಮಂಡನೆಯಾಗಿರುವುದನ್ನು ಕಂಡಿದ್ದೇನೆ. ಎಲ್ಲವೂ ನಿರೀಕ್ಷಿಸಿದಂತೆ ನಡೆಯುವುದಿಲ್ಲ, ಅಲ್ಲೊಂದು ಇಲ್ಲೊಂದು ಲೋಪಗಳು ನಡೆಯುವುದು ಸಹಜವೆಂದು ಸಮರ್ಥಿಸಿಕೊಂಡರು.
ಸಂದರ್ಭ ಅಧ್ಯಕ್ಷೆ ಶ್ರೀಮತಿ ಬಂಗೇರ ಮಾತನಾಡಿ, ಮುಂದಿನ ಬಜೆಟ್ ಸಂದರ್ಭ ಎಲ್ಲಾ ಸದಸ್ಯರ ಗಮನಕ್ಕೆ ತಂದು ಬಜೆಟ್ ತಯಾರಿಸಲಾಗುವುದೆಂದು ಭರವಸೆ ನೀಡಿದರು. ಸದಸ್ಯರ ತೀರ್ಮಾನದಂತೆ ಬಜೆಟ್ ಮೇಲಿನ ಚರ್ಚೆಯನ್ನು ಎಪ್ರಿಲ್ ಮೊದಲ ವಾರದಲ್ಲಿ ನಡೆಸುವುದಾಗಿ ಅಧ್ಯಕ್ಷರು ಹೇಳಿದರು. ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಕಾಂಗ್ರೆಸ್ನ ಹಿರಿಯ ಸದಸ್ಯ ಎಚ್.ಎಂ.ನಂದಕುಮಾರ್ ಹಾಗೂ ಬಿಜೆಪಿಯ ಹಿರಿಯ ಸದಸ್ಯ ಪ್ರಕಾಶ್ ಸಭೆಗೆ ಗೈರು ಹಾಜರಾಗಿದ್ದರು.