ತಾಲೂಕು ಮಟ್ಟದಲ್ಲಿ ಅಲ್ಪಸಂಖ್ಯಾತರ ಕಚೇರಿ ಸ್ಥಾಪನೆಗೆ ಶಿಫಾರಸು
14ನೆ ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿಯಿಂದ ವರದಿ
-ಅಮ್ಜದ್ಖಾನ್ ಎಂ.
ಬೆಂಗಳೂರು, ಎ.3: ರಾಜ್ಯ ಸರಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೆ ತರುವಂತಹ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಪ್ರತಿಯೊಂದು ತಾಲೂಕಿನಲ್ಲಿ ಅಲ್ಪಸಂಖ್ಯಾತರ ಕಚೇರಿಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಶಾಸಕ ತನ್ವೀರ್ಸೇಠ್ ಅಧ್ಯಕ್ಷತೆಯ 14ನೆ ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿಯು ಶಿಫಾರಸು ಮಾಡಿದೆ.
ತಾಲೂಕು ಮಟ್ಟದ ಅಲ್ಪಸಂಖ್ಯಾತರ ಕಚೇರಿಗಳನ್ನು ಸೃಜಿಸಿ, ತಾಲೂಕು ವಿಸ್ತರಣಾಧಿಕಾರಿ, ದ್ವಿತೀಯ ದರ್ಜೆ ಸಹಾಯಕ ಹಾಗೂ ಡಿ ವೃಂದದ ನೌಕರರನ್ನು ತಲಾ ಒಬ್ಬರಂತೆ ನೇಮಕ ಮಾಡಬೇಕು. ಇದರಿಂದಾಗಿ, ಸರಕಾರದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಹಕಾರಿಯಾಗುತ್ತದೆ ಎಂದು ಸಮಿತಿ ತನ್ನ ವರದಿಯಲ್ಲಿ ಅಭಿಪ್ರಾಯಿಸಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಲ್ಪಸಂಖ್ಯಾತ ಕಲ್ಯಾಣ ಇಲಾಖಾ ಕಚೇರಿಗಳಲ್ಲಿ ಸಮರ್ಪಕ ಸಿಬ್ಬಂದಿಯಿಲ್ಲ. ಇದರಿಂದಾಗಿ, ವಿವಿಧ ಯೋಜನೆಗಳ ಅನುಷ್ಠಾನ ವಿಳಂಬವಾಗಲು ಕಾರಣವಾಗಿದೆ. ಹಜ್ ಮತ್ತು ವಕ್ಫ್ ಇಲಾಖೆಗೆ ಬಜೆಟ್ನಲ್ಲಿ ನೀಡುತ್ತಿರುವ ಅನುದಾನ ಹೆಚ್ಚಿಸಬೇಕು. ಇಲಾಖೆಯಲ್ಲಿ ಸಿಬ್ಬಂದಿಯ ನೇಮಕಾತಿಯನ್ನು ಖಾಯಂ ಗೊಳಿಸಬೇಕು.
ರಾಜ್ಯದಲ್ಲಿ 29,044 ವಕ್ಫ್ ಸಂಸ್ಥೆಗಳಿದ್ದು, 34,828 ಸ್ವತ್ತುಗಳಿವೆ. ಈ ಸಂಸ್ಥೆಗಳ ಆಸ್ತಿ ಮತ್ತು ಸಂಸ್ಥೆಗಳ ವ್ಯವಹಾರ, ಸಂರಕ್ಷಣೆಯ ಕುರಿತು ರಾಜ್ಯ ವಕ್ಫ್ ಮಂಡಳಿಯು ಉಸ್ತುವಾರಿ ನಡೆಸುತ್ತಿದ್ದು, ಜಿಲ್ಲೆಯಲ್ಲಿ ವಕ್ಫ್ ಅಧಿಕಾರಿ ಮತ್ತು ಸಿಬ್ಬಂದಿಯಿದ್ದಾರೆ. ಮಂಡಳಿಯಿಂದ ನಾಮನಿರ್ದೇಶಿತ ಸಲಹಾ ಸಮಿತಿಯಿದೆ. ಅದರೆ, ತಾಲೂಕು ಮಟ್ಟದಲ್ಲಿ ಆಡಳಿತ ವ್ಯವಸ್ಥೆಯಿಲ್ಲ.
ವಕ್ಫ್ ಸಂಸ್ಥೆಗಳ ಆಯವ್ಯಯ, ಲೆಕ್ಕಪತ್ರಗಳ ನಿರ್ವಹಣೆ, ನಿಯತ ಕಾಲದಲ್ಲಿ ನಡೆಯುವ ‘ಉರೂಸ್’ ಸಮಾರಂಭಗಳನ್ನು ಸುಲಲಿತವಾಗಿ ನಡೆಸುವ ಕುರಿತು ಜಿಲ್ಲಾದ್ಯಂತ ಓಡಾಡಲು ವಾಹನಗಳ ಆವಶ್ಯಕತೆಯಿದ್ದು, ವಾಹನ ಖರೀದಿಗೆ ಅನುದಾನ ನೀಡಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ವಕ್ಫ್ ಭವನಗಳಿವೆ. ಉಳಿದ ಜಿಲ್ಲೆಗಳಲ್ಲೂ ವಕ್ಫ್ ಭವನಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಹಾಗೂ ಸ್ಥಳಾವಕಾಶ ನೀಡಬೇಕು. ವಕ್ಫ್ ಮಂಡಳಿಯ ಎಲ್ಲ ಕಾರ್ಯಗಳಿಗಾಗಿ ಕನಿಷ್ಠ ಆಡಳಿತ ವೆಚ್ಚಕ್ಕಾಗಿ ಮುಂಬರುವ ಆಯವ್ಯಯದಲ್ಲಿ 120 ಕೋಟಿ ರೂ.ಅನುದಾನ ನೀಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ವಕ್ಫ್ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ರಾಜ್ಯ ಸರಕಾರಿ ನೌಕರರಿಗೆ ನೀಡುತ್ತಿರುವ ಮಾಸಿಕ ವೇತನ ಹಾಗೂ ಇತರ ಸೌಲಭ್ಯವನ್ನು ಒದಗಿಸಲು ಪ್ರಸ್ತಾವವನ್ನು ಕ್ರೋಡೀಕರಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಅನಾಥಾಲಯಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಿಂದ ಹಣ ನೀಡಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಸುತ್ತಿರುವ ಮಂಡಳಿಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಡಿಮೆ ಸಂಬಳ ನೀಡುತ್ತಿದ್ದು, ಇವರನ್ನು ಇತರ ರಾಜ್ಯ ಸರಕಾರಿ ನೌಕರರಂತೆ ಪರಿಗಣಿಸಲು ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಹುದ್ದೆಗಳನ್ನು ಸೃಜಿಸಿ ಅನುಕೂಲ ಕಲ್ಪಿಸಬೇಕು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶನಾಲ ಯವು 1999-2000ನೆ ಸಾಲಿನಿಂದ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 34 ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸುಮಾರು 6,77,086 ಫಲಾನುಭವಿ ಗಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಗಳ ಸೌಲಭ್ಯವನ್ನು ಗ್ರಾಮೀಣ, ನಗರ ಭಾಗಗಳಲ್ಲಿ ವಾಸವಾಗಿರುವ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮ್, ಕ್ರೈಸ್ತ, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಜನಾಂಗದವರಿಗೆ ಸಕಾಲದಲ್ಲಿ ಹಂಚಬೇಕು. ನಿರ್ದೇಶನಾಲಯ: ಪ್ರಥಮ ದರ್ಜೆ ಸಹಾಯಕರು-3, ದ್ವಿತೀಯ ದರ್ಜೆ ಸಹಾಯಕರು-3, ಡಾಟಾ ಎಂಟ್ರಿ ಆಪರೇಟರ್-3, ವಾಹನ ಚಾಲಕರು-2, ಡಿ ವೃಂದ ನೌಕರರು ಇಬ್ಬರು ಸೇರಿದಂತೆ 13 ಮಂದಿಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡಬೇಕು.
ಜಿಲ್ಲಾ ಕಚೇರಿಗಳು: ಲೆಕ್ಕಾಧೀಕ್ಷಕರು, ಕಚೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್, ವಾಹನ ಚಾಲಕ ಹಾಗೂ ಡಿ ವೃಂದದ ನೌಕರರನ್ನು ತಲಾ ಒಬ್ಬರಂತೆ ಒಟ್ಟು ಏಳು ಮಂದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಗಳಿಗೆ ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.