×
Ad

ಅಕ್ರಮ ಲ್ಯಾಬ್ ಟೆಂಡರ್ ಆರೋಪ: ಸಂಸ್ಥೆಗೆ ಸಿಎಂ ಪುತ್ರ ರಾಜೀನಾಮೆ

Update: 2016-04-16 23:44 IST

ಬೆಂಗಳೂರು, ಎ.16: ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸಹಭಾಗಿತ್ವದ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಡಯಾಗ್ನಾಸ್ಟಿಕ್ ಕೇಂದ್ರದ ಗುತ್ತಿಗೆ ವಿವಾದದ ಹಿನ್ನೆಲೆಯಲ್ಲಿ ಡಾ.ಯತೀಂದ್ರ ಆ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಂಪೆನಿಯಿಂದ ಹೊರ ಬರುವ ಮೂಲಕ ಸಿದ್ದರಾಮಯ್ಯನವರಿಗೆ ಆಗಿರುವ ಮುಜುಗರವನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಡಾ.ಯತೀಂದ್ರ ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆಂದು ಮೂಲಗಳಿಂದ ಗೊತ್ತಾಗಿದೆ.

ಆದರೆ, ಈ ಪ್ರಕರಣವನ್ನು ಮುಂದಿಟ್ಟುಕೊಂಡ ವಿಪಕ್ಷಗಳು, ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕುತ್ತಿವೆ. ಮಾತ್ರವಲ್ಲ, ಸ್ವಪಕ್ಷೀಯರು ಸಿಎಂ ಸ್ಥಾನವನ್ನು ಅಲುಗಾಡಿಸಲು ದಿಲ್ಲಿ ಮಟ್ಟದಲ್ಲಿ ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತು ನಡೆಸಿರುವುದು ಗುಟ್ಟಾಗೇನೂ ಉಳಿದಿಲ್ಲ.

ದಿಗ್ವಿ ಸೂಚನೆ: ವಿವಾದ ಬಯಲಿಗೆ ಬಂದಿರುವ ಹಿನ್ನೆಲೆಯಲ್ಲಿ ಡಾ.ಯತೀಂದ್ರ ಮ್ಯಾಟ್ರಿಕ್ಸ್ ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು.

ಡಯಾಗ್ನಸ್ಟಿಕ್ಸ್ ಸೆಂಟರ್ ಆರಂಭವಾಗದಿದ್ದರೂ ನೈತಿಕವಾಗಿ ಕಂಪೆನಿಯಲ್ಲಿ ಇರುವುದು ಸರಿಯಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸಿಎಂಗೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಡಾ.ಯತೀಂದ್ರ ತಂದೆಯವರಿಗೆ ಮುಜುಗರ ಆಗಬಾರದೆಂದು ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ದುಬಾರಿ ವಾಚ್ ಪ್ರಕರಣ, ತರಾತುರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ, ಇದೀಗ ಪುತ್ರನ ಸಹಭಾಗಿತ್ವದ ಕಂಪೆನಿಗೆ ಟೆಂಡರ್ ಗುತ್ತಿಗೆ, ಪುತ್ರನ ಸ್ನೇಹಿತನಿಗೆ 150 ಕೋಟಿ ರೂ.ಭೂಮಿ ಮಂಜೂರು ಸೇರಿದಂತೆ ಒಂದೊಂದೇ ವಿವಾದಗಳನ್ನು ಸಿದ್ದರಾಮಯ್ಯ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿನ ಭೀಕರ ಸ್ವರೂಪದ ಬರ, ಪರಿಹಾರ ಕಾರ್ಯಗಳಲ್ಲಿ ವೈಫಲ್ಯ ವಿರೋಧ ಪಕ್ಷಗಳ ಕೈಗೆ ಅಸ್ತ್ರಗಳನ್ನು ನೀಡಿದಂತಾಗಿದೆ.

ಮೂರು ವರ್ಷಗಳಿಂದ ಯಾವುದೇ ವಿವಾದಗಳಿಲ್ಲದೆ ಉತ್ತಮ ರೀತಿಯಲ್ಲೇ ಆಡಳಿತ ನಿರ್ವಹಿಸಿದ ಸಿಎಂ ಸಿದ್ದರಾಮಯ್ಯ ಇದೀಗ ವಿವಾದಗಳಿಗೆ ಸಿಲುಕುತ್ತಿದ್ದಾರೆ. ಹೀಗಾಗಿ ರಾಜಕೀಯ ವಲಯದಲ್ಲಿ ಕ್ಷಣಕ್ಕೊಂದು ಬದಲಾವಣೆ ಸಂಭವಿಸುತ್ತಿದ್ದು ಕುತೂಹಲ ಮೂಡಿಸಿದೆ.

ಸೋಮವಾರ ರಾಜೀನಾಮೆ
ಬೆಂಗಳೂರಿಗೆ ಹಿಂದಿರುಗಿದ ನಂತರ ಮ್ಯಾಟ್ರಿಕ್ಸ್ ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದಿರುವ ಡಾ.ಯತೀಂದ್ರ ಸಿದ್ದರಾಮಯ್ಯ, ಸದ್ಯಕ್ಕೆ ಅಜ್ಞಾತ ಸ್ಥಳದಲ್ಲಿದ್ದು, ಸೋಮವಾರ ರಾಜೀನಾಮೆ ನೀಡುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.


ಸಿಎಂ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು

ಬೆಂಗಳೂರು, ಎ.16: ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಪ್ರಯೋಗಾಲಯ ಸ್ಥಾಪನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಮಾಲಕತ್ವದ ಮ್ಯಾಟ್ರಿಕ್ಸ್ ಕಂಪೆನಿಗೆ ಟೆಂಡರ್ ಲಭ್ಯವಾಗಿರುವ ಸಂಬಂಧ ಮಾಹಿತಿ ಹಕ್ಕು ಕಾರ್ಯಕರ್ತ ಭಾಸ್ಕರನ್ ಎಂಬವರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ದೂರು ದಾಖಲಿಸಿದ್ದಾರೆ.
 ಶನಿವಾರ ಬೆಳಗ್ಗೆ ಎಸಿಬಿಯಲ್ಲಿ ದೂರು ದಾಖಲಿಸಿರುವ ಭಾಸ್ಕರನ್, ಈ ಹಗರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕ ಹಾಗೂ ಸ್ವತಂತ್ರ ತನಿಖೆ ನಡೆಸಿ ಸತ್ಯಾಂಶ ಬಯಲು ಮಾಡುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಗೃಹ ಇಲಾಖೆಯೂ ಸಚಿವರಿಗೆ ನೀಡಿರುವ ನೀತಿ ಸಂಹಿತೆಯಂತೆ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಇಂಡಿಯಾ ಪ್ರೈ.ಲಿ.ಗೆ ಟೆಂಡರ್ ಲಭ್ಯವಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.
ಮ್ಯಾಟ್ರಿಕ್ಸ್ ಸಂಸ್ಥೆಗೆ ಟೆಂಡರ್ ಸಿಗುವಲ್ಲಿ ಮುಖ್ಯಮಂತ್ರಿಯ ಪಾತ್ರವೇನಾದರೂ ಇದೇಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಿ. ಅಲ್ಲದೆ, ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಮ್ಯಾಟ್ರಿಕ್ಸ್ ಸಂಸ್ಥೆ ಪಾಲ್ಗೊಂಡಿರುವ ಕುರಿತು ಮಾಧ್ಯಮಗಳ ವರದಿಗಳು ಹಾಗೂ ದಾಖಲೆಗಳು ಮೇಲ್ನೋಟಕ್ಕೆ ಸ್ಪಷ್ಟಪಡಿಸುತ್ತಿವೆ. ಆದುದರಿಂದ, ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆಯೂ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News