ಉಪನ್ಯಾಸಕರಿಗೆ ನೋಟಿಸ್ ಜಾರಿ ಶಿಸ್ತು ಕ್ರಮದ ಎಚ್ಚರಿಕೆ
18ನೆ ದಿನಕ್ಕೆ ಕಾಲಿಟ್ಟ ಪಿಯು ಉಪನ್ಯಾಸಕರ ಧರಣಿ
ಬೆಂಗಳೂರು, ಎ. 18: ವೇತನ ತಾರತಮ್ಯ ನಿವಾರಣೆ ಹಾಗೂ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಧರಣಿ ನಡೆಸುತ್ತಿರುವ ಉಪನ್ಯಾಸಕರಿಗೆ ಪದವಿಪೂರ್ವ ಶಿಕ್ಷಣ ಮಂಡಳಿ ಸೋಮವಾರ ನೋಟಿಸ್ ಜಾರಿ ಮಾಡಿದ್ದು, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಪಿಯು ಮಂಡಳಿ ಅಧಿಕಾರಿಗಳು, ಸೆಕ್ಷನ್ ಅಧಿಕಾರಿಗಳು ಸೋಮವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಉಪನ್ಯಾಸಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರಿಗೆ ನೋಟಿಸ್ ನೀಡಿದ್ದಾರೆ.
ನೋಟಿಸ್ನಲ್ಲಿ ಏನಿದೆ?: ಪ್ರಾಂಶುಪಾಲರು, ಉಪನ್ಯಾಸಕರು ಆದ ನಿಮ್ಮನ್ನು 2016ರ ಮಾರ್ಚ್ ದ್ವಿತೀಯ ಪಿಯು ಪರೀಕ್ಷೆಯ ವೌಲ್ಯಮಾಪನ ಕಾರ್ಯಕ್ಕೆ ಶಿಬಿರಾಧಿಕಾರಿ, ಮೇಲ್ವಿಚಾರಕರು, ಮುಖ್ಯ ವೌಲ್ಯಮಾಪಕರು, ಉಪಮುಖ್ಯ ವೌಲ್ಯಮಾಪಕರು, ಸಹಾಯಕ ವೌಲ್ಯಮಾಪಕರಾಗಿ ನಿಯುಕ್ತ ಮಾಡಿ ಆದೇಶಿಸಲಾಗಿದೆ.
ಆದರೆ, ನೀವು ಸದರಿ ಕಾರ್ಯಕ್ಕೆ ಗೈರು ಹಾಜರಾಗಿದ್ದು,ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ನಡೆಸುತ್ತಿರುವ ಮುಷ್ಕರದಲ್ಲಿ ಭಾಗವಹಿಸುತ್ತಿದ್ದೀರಿ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ವೌಲ್ಯಮಾಪನ ಕಾರ್ಯಕ್ಕೆ ಗೈರು ಹಾಜರಾಗುವ ಮೂಲಕ ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ್ದೀರಿ. ಹೀಗಾಗಿ, ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಜರಗಿಸಲಾಗುವುದೆಂದು ನೋಟಿಸ್ನಲ್ಲಿ ತಿಳಿಸಲಾಗಿದೆ.