×
Ad

ಬೇಡಿಕೆ ಪೂರೈಸುವಂತೆ ಆಗ್ರಹಿಸಿ ಮೌಲ್ಯಮಾಪನ ಬಹಿಷ್ಕಾರ

Update: 2016-04-19 22:14 IST

ಕಾರವಾರ, ಎ.19: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರೌಢಶಾಲಾ ಶಿಕ್ಷಕರು ಎಸೆಸೆಲ್ಸಿ ಮೌಲ್ಯಮಾಪನ ಬಹಿಷ್ಕರಿಸಿದ್ದು, ಇದರಿಂದ ಜಿಲ್ಲೆಯ 6 ಕೇಂದ್ರಗಳಲ್ಲಿ ನಡೆಯಬೇಕಿದ್ದ ಮೌಲ್ಯಮಾಪನವು ಸ್ಥಗಿತಗೊಂಡಿದೆ.

ಸೋಮವಾರ ಬೆಳಗ್ಗೆ ಕಾರವಾರದ ಹಿಂದೂ ಹೈಸ್ಕೂಲ್, ಬಾಲಮಂದಿರ ಹಾಗೂ ಸೈಂಟ್ ಮೈಕಲ್ ಪ್ರೌಢಶಾಲೆ ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳಿಗೆ ಆಗಮಿಸಿದ ಶಿಕ್ಷಕರು ಒಟ್ಟಾಗಿ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಿದರು. ಆದರೆ ಇದಕ್ಕೆ ಕೆಲವರು ಒಪ್ಪದ ಕಾರಣ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬೆಳಗ್ಗೆ 9:30ಕ್ಕೆ ಹಾಜರಾಗಿದ್ದ ಶಿಕ್ಷಕರು ಕೆಲವು ಗೊಂದಲಗಳಿಂದ ಮಧ್ಯಾಹ್ನ 12ಗಂಟೆಯಾದರೂ ಮೌಲ್ಯಮಾಪನ ಆರಂಭಿಸಿರಲಿಲ್ಲ. ನಂತರ ಹಿಂದೂ ಹೈಸ್ಕೂಲ್‌ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಸಭೆ ನಡೆಸಿ ಮೌಲ್ಯ ಮಾಪನಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡರು.

ನಗರದ ಹಿಂದೂ ಹೈಸ್ಕೂಲ್‌ನಲ್ಲಿ ಸೋಮವಾರ ನಡೆದ ಪರೀಕ್ಷಾ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಕರೆದ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ನಾವು ನೋಡುವ ಉತ್ತರ ಪತ್ರಿಕೆಯಲ್ಲಿರುತ್ತದೆ. ಇದರ ಬಗ್ಗೆ ನಿಷ್ಕಾಳಜಿ ತೋರದಂತೆ ಮೌಲ್ಯಮಾಪನ ನಡೆಸುವ ಶಿಕ್ಷಕರಿಗೆ ಮಾಹಿತಿ ನೀಡಿದರು. ಪ್ರತಿ ದಿನ ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆಯವರೆಗೆ ಮೌಲ್ಯ ಮಾಪನ ನಡೆಯುತ್ತದೆ. ಮಧ್ಯಾಹ್ನ ಒಂದು ಗಂಟೆಯ ಬಿಡುವು ನೀಡಲಾಗುತ್ತದೆ. ಪ್ರತಿಯೊಬ್ಬ ಮೌಲ್ಯ ಮಾಪನ ಮಾಡುವ ಶಿಕ್ಷಕರು ಅತ್ಯಂತ ಜಾಗರೂಕತೆಯಿಂದ ಮೌಲ್ಯ ಮಾಪನ ಮಾಡಬೇಕು ಎಂದರು. ಕಳೆದ ಬಾರಿ ಪರೀಕ್ಷಾ ಕೇಂದ್ರಗಳಿಂದ ಉತ್ತರ ಪತ್ರಿಕೆಗಳನ್ನು ಮೊಬೈಲ್ ಫೋನ್‌ಗಳಲ್ಲಿ ಫೋಟೊ ತೆಗೆದು ಜಾಲತಾಣಗಳಿಗೆ ಬಿಟ್ಟಿದ್ದರಿಂದ ಈ ಬಾರಿ ಮೊಬೈಲ್‌ನ್ನು ಸಂಪೂರ್ಣವಾಗಿ ನಿಷೇಸಧಿಲಾಗಿದೆ. ಅಲ್ಲದೆ, ಪರೀಕ್ಷಾ ಅವಧಿಯಲ್ಲಿ ಯಾವ ಲೋಪದೋಷ ಬಾರದಂತೆ ಅತ್ಯಂತ ಜಾಗರೂಕತೆಯಿಂದಿರಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರು ಜಿಲ್ಲೆಯ ಬಹುತೇಕ ಎಲ್ಲ ಕೇಂದ್ರಗಳಲ್ಲಿ ೋಮವಾರ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದರಿಂದ ನಗರದ ಎಲ್ಲ ಕೇಂದ್ರಗಳಿಂದ ಶಿಕ್ಷಕರು ಹೊರಬಂದು ಬಹಿಷ್ಕಾರಕ್ಕೆ ಬೆಂಬಲ ಸೂಚಿಸಿದರು. ಅಲ್ಲದೆ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಿದಲ್ಲಿ ನಾವು ಎಸೆಸೆಲ್ಸಿ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತೇವೆ. ಇತರೆ ಇಲಾಖೆಗೆ ಹೋಲಿಸಿದರೆ ತಮ್ಮ ವೇತನ ಕಡಿಮೆ ಇದ್ದು, ವೇತನ ತಾರತಮ್ಯ ಹೋಗಲಾಡಿಸಬೇಕು ಮತ್ತು ಕುಮಾರ ನಾಯಕ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಸದ್ಯ ಸರಕಾರ 400ರೂ. ವಿಶೇಷ ಭತ್ತೆ ನೀಡಲು ಒಪ್ಪಿದ್ದು ಅದನ್ನು 800ರೂ.ಗೆ ಏರಿಸಬೇಕು. ಎರಡು ಮುಂಭಡ್ತಿ ನೀಡಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆಗೆ ಸೇರಿದ ಮೊದಲ ತಿಂಗಳಿನಿಂದಲೇ ವೇತನ ದೊರೆಯುವಂತಾಗಬೇಕು. ಬಸವರಾಜ ಹೊರಟ್ಟಿಯವರು ಆಗ್ರಹಿಸಿದಂತೆ ಕಾಲ್ಪನಿಕ ವೇತನ ಭಡ್ತಿ ವಿವರ ಬಹಿರಂಗಗೊಳಿಸಬೇಕು ಎಂದು ಶಿಕ್ಷಕರು ಒತ್ತಾಯಿಸಿದರು.

ಹಿಂದೂ ಹೈಸ್ಕೂಲ್‌ನಲ್ಲಿ ಸೋಮವಾರ ನಡೆದ ಪರೀಕ್ಷಾ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಕರೆದ ಸಭೆಯಲ್ಲಿ ನೋಡೆಲ್ ಅಧಿಕಾರಿಗಳಾದ ಸುರೇಖಾ ನಾಯ್ಕ, ಶೋಭಾ ನಾಯ್ಕ, ಕನ್ನಡ ವಿಭಾಗದ ಮೌಲ್ಯಮಾಪನ ಮುಖ್ಯಸ್ಥ ಜಿ.ಕೆ. ಹೆಗಡೆ, ಇಂಗ್ಲಿಷ್ ವಿಭಾಗದ ವಿ.ಎನ್ ಹೆಗಡೆ ಸೇರಿದಂತೆ ಬಹುತೇಕ ಮೌಲ್ಯಮಾಪಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News