×
Ad

ಖಾಸಗಿ ಬೋರ್‌ವೆಲ್‌ಗಳಲ್ಲಿರುವ ನೀರನ್ನು ಖರೀದಿ ಮಾಡಿ ಜನತೆಗೆ ಒದಗಿಸಿ: ದೇಶಪಾಂಡೆ

Update: 2016-04-23 21:59 IST

ಭಟ್ಕಳ,ಎ.23: ನೀರಿನ ಸಮಸ್ಯೆ ಒಂದು ಮಾನವೀಯ ಸಮಸ್ಯೆಯಾಗಿದ್ದು, ಇದರಲ್ಲಿ ಯಾವುದೇ ಜಾತಿ, ಪಕ್ಷ, ಪಂಥ ಎನ್ನುವ ಬೇಧ ಭಾವವಿಲ್ಲ. ಜನರ ಕಷ್ಟ ಕಾಲದಲ್ಲಿ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಸ್ಪಂದಿಸದಿದ್ದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಸಚಿವ ಆರ್. ವಿ. ದೇಶಪಾಂಡೆ ಭಟ್ಕಳ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಯ ಕುರಿತು ಪುರಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಆಯುಕ್ತ ಚಿದಾನಂದ ವಠಾರೆ ಅವರು, ತಾಲೂಕಿನಲ್ಲಿ 16 ಗ್ರಾಪಂಗಳಲ್ಲಿ 10ರಲ್ಲಿ ನೀರಿನ ಅಭಾವ ತಲೆದೋರಿದೆ, 52 ಮಜಿರೆಗಳಿಗೆ ಈಗಾಗಲೇ ನೀರು ಪೂರೈಸಲಾಗುತ್ತಿದ್ದು, ಇನ್ನಾವುದೇ ಕಡೆಯಿಂದ ದೂರು ಬಂದಿಲ್ಲ ಎಂದರು. ಕಳೆದ ಬಾರಿ ಶೇ.22 ರಿಂದ 30ರಷ್ಟು ಕಡಿಮೆ ಮಳೆ ಬಿದ್ದಿದ್ದು, ಕೆಲವೆಡೆ ಉಪ್ಪು ನೀರು ಬಾವಿಯಲ್ಲಿ ನುಗ್ಗಿ ತೀವ್ರ ಸಮಸ್ಯೆಗೆ ಕಾರಣವಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಮಂಕಾಳ ವೈದ್ಯ ಮಾತನಾಡಿ, ನೀರಿನ ಕೊರತೆ ಇರುವಲ್ಲಿ ಸರಿಯಾಗಿ ನೀರು ಪೂರೈಸುತ್ತಿಲ್ಲ ಕೆಲವೆಡೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಕೊಡುತ್ತಾರೆ.ನೀರಿನ ಸರಬರಾಜು ವಿಧಾನವನ್ನು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.

 ಸಭೆಯಲ್ಲಿ ಉಪಸ್ಥಿತರಿದ್ದ ಸಾಂಬಾರು ಮಂಡಳಿಯ ಅಧ್ಯಕ್ಷ ಹಾಗೂ ತಂಝೀಂ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ, ಹಲವೆಡೆ ಜನರು ನೀರಿಗಾಗಿ ತೀವ್ರತೊಂದರೆ ಅನುಭವಿಸುತ್ತಿದ್ದಾರೆ. ನಗರದ ಗೌಸಿಯಾ ಸ್ಟ್ರೀಟ್‌ನಲ್ಲಿಯ ಪುರಸಭೆಯ ಯುಜಿಡಿ ಟ್ಯಾಂಕ್‌ನಿಂದಾಗಿ ಸುಮಾರು 200-300 ಬಾವಿಗಳು ಹಾಳಾಗಿದ್ದು, ನೀರಿನ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ತಕ್ಷಣ ಅಲ್ಲಿಯ ಯುಜಿಡಿ ವಾಲ್‌ಗೆ ಕಾಯಕಲ್ಪವಾಗಬೇಕು. ಶರಾಬಿ ಹೊಳೆಗೆ ಹೊಲಸು ನೀರು ಹೋಗುವುದನ್ನು ತಡೆಗಟ್ಟಬೇಕು.ಶರಾಬಿ ಹೊಳೆಯಲ್ಲಿ ಹೂಳು ತುಂಬಿದು,್ದ ಕಳೆದ ಮಳೆಗಾದಲ್ಲಿ ಓರ್ವಯುವಕ ಬಿದ್ದು ಮೃತಪಟ್ಟಿದ್ದು, ಈ ತನಕ ಆತನ ದೇಹ ಪತ್ತೆಯಾಗಿಲ್ಲ ಎಂದರು.

 ಜನತೆಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಯಾವುದೇ ಅಧಿಕಾರಿಗಳು ಸ್ವಸ್ಥಾನ ಬಿಡಬಾರದು.ಮೇವು ಕಡಿಮೆಯಾಗುವ ಸಂಭವವಿದ್ದರೆ, ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮೊದಲೇ ಸಂಗ್ರಹಿಸಬೇಕು.ಸಮಸ್ಯೆ ಬರುವ ಮೊದಲೇ ಪರಿಹಾರ ಮಾಡಿಕೊಳ್ಳಲು ಸೂಚಿಸಿದರು. ಕುಡಿಯುವ ನೀರಿನ ಕಾಮಗಾರಿಗಳನ್ನು ಜೂ.15 ಒಳಗಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು. ನೀರಿನ ಆವಶ್ಯಕತೆಯಿರುವಲ್ಲಿ ಯಾವುದೇ ಖಾಸಗೀ ಬೋರ್‌ವೆಲ್‌ಗಳಲ್ಲಿರುವ ನೀರನ್ನು ಖರೀದಿ ಮಾಡಿಜನತೆಗೆ ಒದಗಿಸುವಂತೆ ದೇಶಪಾಂಡೆ ಸೂಚಿಸಿದ್ದಾರೆ.

ಶಾಸಕ ಮಂಕಾಳ ವೈದ್ಯ, ಜಿಪಂ ಸದಸ್ಯರಾದ ಆಲ್ಬರ್ಟಡಿಕೋಸ್ತ, ಜಯಶ್ರೀ ಮೊಗೇರ, ಸಿಂಧು ಬಾಸ್ಕರ ನಾಯ್ಕ, ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್‌ಘೋಷ್, ಜಿಪಂ ಕಾರ್ಯ ನಿರ್ವಹಣಾಧಿಕಾರಿ ರಾಮಪ್ರಸಾದ್ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News