×
Ad

ಮೂಢನಂಬಿಕೆ ಸಮಾಜಕ್ಕಂಟಿದ ಶಾಪ: ನಿಂಗಯ್ಯ

Update: 2016-04-28 21:53 IST

ಮೂಡಿಗೆರೆ, ಎ.28: ಮೂಢನಂಬಿಕೆಗಳು ಸಮಾಜಕ್ಕಂಟಿದ ಶಾಪವಾಗಿದೆ. ವೌಢ್ಯವನ್ನು ದೂರವಿಟ್ಟು ಕಾಯಿಲೆಗಳು ಬಂದಾಗ ಮಂತ್ರವಾದಿಗಳ ಬಳಿ ತೆರಳದೆ ಆಸ್ಪತ್ರೆಗಳಿಗೆ ತೆರಳಿ ನುರಿತ ವೈದ್ಯರಿಂದ ಚಿಕಿತ್ಸೆ ಪಡೆದರೆ ರೋಗಗಳು ಮಾಯವಾಗಿ ಆರೋಗ್ಯವಂತರಾಗಬಹುದು ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದ್ದಾರೆ.

ಅವರು ಗುರುವಾರ ಎಂಜಿಎಂ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ತಿಪಟೂರಿನ ಕುಮಾರ್ ಆಸ್ಪತ್ರೆ, ಮಂಗಳೂರಿನ ಕ್ಯಾನ್ಸರ್ ಆಸ್ಪತ್ರೆ ಹಾಗೂ ಇಂಡಿಯಾನ ಆಸ್ಪತ್ರೆ ಸಹಯೋಗದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ನಡೆದ ವಿಶ್ವ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮತ್ತು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸತ್ತ ವ್ಯಕ್ತಿಯ ಬೆನ್ನ ಮೇಲೆ ದೆವ್ವಗಳು ಹೊಡೆದ ಕುರುಹುಗಳಿವೆ. ರಕ್ತ ವಾಂತಿ ಮಾಡಿ ಸತ್ತಿದ್ದಾನೆ, ಪಿಶಾಚಿ ಹೊಡೆದು ಸಾಯಿಸಿದೆ ಎಂದು ವೌಢ್ಯ ಪ್ರದರ್ಶಿಸುವವರಿದ್ದಾರೆ. ಮನುಷ್ಯನ ದೇಹದಲ್ಲಿ ರಕ್ತ ಅಧಿಕಗೊಂಡಾಗ ಶರೀರದಿಂದ ಬಾಯಿ ಮೂಲಕ ರಕ್ತವಾಂತಿಯಾಗುತ್ತದೆ. ದೇಹದ ಭಾಗಗಳು ಒಡೆದಾಗ ಈ ರೀತಿಯಾಗಿ ಸಾವು ಸಂಭವಿಸುತ್ತದೆಯೇ ಹೊರತು ದೆವ್ವ, ಪಿಶಾಚಿ ಹೊಡೆದು ಸಾಯಿಸಿದೆ ಎಂದು ಮೂಢನಂಬಿಕೆ ಹೊಂದಬಾರದು ಎಂದು ಹೇಳಿದರು.

ಮಂಗಳೂರಿನ ಇಂಡಿಯಾನ ಆಸ್ಪತ್ರೆ ವೈದ್ಯ ಡಾ. ನಾಗನಾಥ್ ಮಾತನಾಡಿ, ಹೃದಯದ ಕಾಯಿಲೆ ಗುಣಪಡಿಸಬಹುದಾದ ಕಾಯಿಲೆಯಾದರೂ, ನಿರಂತರ ಚಿಕಿತ್ಸೆ ಅಗತ್ಯವಿದೆ. ಮುಂಜಾಗೃತೆ ವಹಿಸುವ ವ್ಯಕ್ತಿಗಳಿಗೆ ಕಾಯಿಲೆ ಹತ್ತಿರ ಸುಳಿಯದು ಎಂದು ಕಿವಿಮಾತು ಹೇಳಿದರು. ಶಿಬಿರದ ಸಂಯೋಜಕ ಕುಮಾರ್ ಮಾತನಾಡಿ, 1,554 ರೋಗಿಗಳಿಗೆ ರಾಜ್ಯದ ನುರಿತ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಜಿಲ್ಲೆಯ 282 ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಮೂಲಕ ಸಂಪೂರ್ಣ ಉಚಿತ, ಎಪಿಎಲ್ ಕಾರ್ಡುದಾರರಿಗೆ ರಾಜೀವ್ ಆರೋಗ್ಯಭಾಗ್ಯ ಯೋಜನೆಯಡಿ ಶೇ.70ರಷ್ಟು ಉಚಿತ ಮತ್ತು 30ರಷ್ಟು ವೆಚ್ಚವನ್ನು ರೋಗಿಗಳೇ ಭರಿಸಬೇಕು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ಅನಂತ ಪದ್ಮನಾಭ, ಜಿಪಂ ಸದಸ್ಯ ಶಾಮಣ್ಣ, ತಾಪಂ ಸದಸ್ಯ ಕೆ.ಸಿ.ರತನ್, ಆರೋಗ್ಯಾಧಿಕಾರಿ ಡಾ. ಯೋಗೀಶ್, ಡಾ. ಸುಂದರೇಶ್, ಡಾ. ಕಾರ್ತಿಕ್, ಡಾ. ವೆಂಕಟೇಶ್, ಡಾ. ಎಲ್.ವಿಸ್, ಡಾ. ದೇವರಾಜ್, ಆರೋಗ್ಯ ಇಲಾಖೆ ಸಹಾಯಕ ಮೂರ್ತಿ, ಡಾ. ವಿದೀಶ್, ಮುಖಂಡರಾದ ಎಚ್.ಆರ್.ಪುಟ್ಟಸ್ವಾಮಿ, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News