×
Ad

ದಲಿತರು ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಅಭಿವೃದ್ಧಿ ಸಾಧ್ಯ

Update: 2016-04-28 21:55 IST

ಕಳಸ, ಎ.28: ಅಂಬೇಡ್ಕರ್ ತಮ್ಮ ಬದುಕನ್ನು ದಲಿತರ, ಶೋಷಿತರ ಮುಕ್ತಿಗಾಗಿ ಮತ್ತು ಸಂವಿಧಾನದ ಮೂಲಕ ದಲಿತರನ್ನು ಮುಖ್ಯವಾಹಿನಿಗೆ ತರಲು ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಮೀಸಲಾತಿ ಸೌಲಭ್ಯದ ಮೂಲಕ ಶೋಷಿತರ, ಅಸ್ಪಶ್ಯರ ಏಳಿಗೆಗೆ ನೂರಾರು ಕಾನೂನುಗಳನ್ನು ರೂಪಿಸಿದ್ದಾರೆ. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಅಂಬೇಡ್ಕರ್ ವಿಚಾರಗಳನ್ನು ಮೈಗೂಡಿಸಿಕೊಳ್ಳದ ಶೋಷಿತರು ಮಾನಸಿಕ ಗುಲಾಮಗಿರಿಯಲ್ಲಿ ಬದುಕುತ್ತಿದ್ದಾರೆ ಎಂದು ಕಳಸದ ಸರಕಾರಿ ಆಸ್ಪತ್ರೆಯ ದಂತ ವೈದ್ಯ ಪ್ರೇಮ್‌ಕುಮಾರ್ ಹೇಳಿದ್ದಾರೆ.

 ಅವರು ಗುರುವಾರ ಇಲ್ಲಿನ ದುರ್ಗಾ ಮಂಟಪದಲ್ಲಿ ಡಿಎಸ್‌ಎಸ್ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದಲಿತರು ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಅಭಿವೃದ್ಧಿ ಮತ್ತು ಏಳಿಗೆ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಸದ್ಯದ ರಾಜಕೀಯ ವ್ಯವಸ್ಥೆಯಲ್ಲಿ ದಲಿತರು ತಮ್ಮ ಮತದಾನದ ಹಕ್ಕುಗಳನ್ನು ಹಣ, ಹೆಂಡ ಮೊದಲಾದ ಆಮಿಷಗಳಿಗೆ ಮಾರಿಕೊಳ್ಳುತ್ತಿದ್ದಾರೆ. ಇದರ ಫಲವಾಗಿ ದಲಿತರು ಇಂದಿಗೂ ಮಾನಸಿಕವಾಗಿ ಗುಲಾಮಗಿರಿಯಲ್ಲಿದ್ದಾರೆ. ಇದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾದ ಬೆಳವಣಿಗೆಯಾಗಿದ್ದು, ಸಂಘಟನೆಗಳು, ಸುಶಿಕ್ಷಿತರು ಅಂಬೇಡ್ಕರ್ ವಿಚಾರಧಾರೆ, ಹೋರಾಟ, ಆಶಯ, ಕನಸುಗಳ ಬಗ್ಗೆ ದಲಿತರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಹೆಚ್ಚು ಹೆಚ್ಚಾಗಿ ನಡೆಸಬೇಕೆಂದರು.

ದಲಿತರನ್ನು ಗುಲಾಮಗಿರಿಯ ಸಂಕೋಲೆಯಿಂದ ಬಿಡಿಸಲು ಅಂಬೇಡ್ಕರ್ 10ಕ್ಕೂ ಹೆಚ್ಚು ವಿಷಯಗಳಲ್ಲಿ ಪಾಂಡಿತ್ಯ ಸಂಪಾದಿಸಿದರು. ದಲಿತರಿಗೆ ಹೋರಾಟದ ಹಾದಿ ತೋರಿಸಿ, ಕಾನೂನುಗಳನ್ನು ರೂಪಿಸಿ ಶೋಷಣೆಯಿಂದ ಮುಕ್ತಿ ದೊರಕಿಸಿಕೊಟ್ಟರು. ಆದರೆ ಶೋಷಿತ ವರ್ಗಕ್ಕೆ ಅಂಬೇಡ್ಕರ್ ವಿಚಾರಗಳ ಅರಿವಿದ್ದರೂ, ತಮ್ಮ ಹಕ್ಕುಗಳನ್ನು ಆಮಿಷಗಳಿಗೆ ಒತ್ತೆ ಇಡುತ್ತಿರುವುದರ ಪರಿಣಾಮ ದಲಿತರನ್ನು ಪ್ರಭಾವಿಗಳು, ಶ್ರೀಮಂತರು, ಮೇಲ್ವರ್ಗದವರೇ ಆಳುತ್ತಿದ್ದಾರೆ. ದಲಿತರ ಹಕ್ಕುಗಳು ಉಳ್ಳವರ ಪಾಲಾಗುತ್ತಿದ್ದು, ಈ ಬಗ್ಗೆ ಕೆಳ ವರ್ಗದವರು ಎಚ್ಚೆತ್ತುಕೊಳ್ಳಬೇಕು ಎಂದರು.

 ಡಿಎಸ್‌ಎಸ್ ರಾಜ್ಯ ಸಂಚಾಲಕ ತರೀಕೆರೆ ವೆಂಕಟೇಶ್ ಮಾತನಾಡಿ, ಜಾತಿ ವ್ಯವಸ್ಥೆ ಮೂಲಕ ಕೆಳವರ್ಗದವರ ಬದುಕನ್ನು ಕಾಲನಿಗಳೆಂಬ ನರಕಕ್ಕೆ ಮಾತ್ರ ಸೀಮಿತ ಮಾಡಿದ ಮನುವಾದಿಗಳು ಪ್ರಸ್ತುತ ಅಂಬೇಡ್ಕರ್ ವಿಚಾರಗಳನ್ನು ಸ್ವೀಕರಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ ಮೊದಲಾದ ಬದಲಾವಣೆಯ ನಾಟಕವಾಡುತ್ತಿದ್ದಾರೆ. ಇದರ ಹಿಂದೆ ಮನುವಾದಿಗಳ ಹುನ್ನಾರ ಅಡಗಿದ್ದು ಓಟು ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ಮೇಲ್ವರ್ಗದ ಕೋಮುವಾದಿಗಳು ಈ ಹುನ್ನಾರ ನಡೆಸುತ್ತಿದ್ದಾರೆ. ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಳಸ ಗ್ರಾಪಂ ಅಧ್ಯಕ್ಷೆ ರತಿ, ತಾಲೂಕು ಸಂಚಾಲಕ ಲೋಕವಳ್ಳಿ ಮಂಜುನಾಥ್, ಹೋಬಳಿ ಸಂಚಾಲಕ ಚಂದ್ರು, ಛಲವಾದಿ ಮಹಾಸಭಾದ ರಾಜ್ಯ ಸಂಚಾಲಕಿ ಶಶಿಕಲಾ ಮಾತನಾಡಿದರು. ಇದಕ್ಕೂ ಮೊದಲು ಅಂಬೇಡ್ಕರ್ ಭಾವಚಿತ್ರದೊಂದಿಗೆ ನೂರಾರು ಕಾರ್ಯಕರ್ತರು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ದುರ್ಗಾ ಮಂಟಪದಲ್ಲಿ ಸಮಾವೇಶಗೊಂಡರು.

ಡಿಎಸ್‌ಎಸ್ ಸಂಚಾಲಕರಾದ ಹೂವಯ್ಯ, ಶಾರದಾ, ಮಾಗಲು ಕೃಷ್ಣ, ತಲಗೋಡು ಗಂಗಯ್ಯ, ಜನಾರ್ದನ್, ಗೋಪಾಲ್, ಅಣ್ಣಪ್ಪ, ಮರಿಯಯ್ಯ, ಕರವೇ ರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News