ಬಿಡಿಎ ಮ್ಯೂಚುವಲ್ ಫಂಡ್ ಹಗರಣ: ಐಎಎಸ್ ಅಧಿಕಾರಿಗೆ ನ್ಯಾಯಾಂಗ ಬಂಧನ
Update: 2016-04-28 23:54 IST
ಬೆಂಗಳೂರು, ಎ.28: ಬಿಡಿಎ ಮ್ಯೂಚುವಲ್ ಫಂಡ್ ಹಗರಣ ಸಂಬಂಧ ಸಿಐಡಿ ಪೊಲೀಸರು ಬಂಧಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಎ.ಕೆ.ಮೊಣ್ಣಪ್ಪ ಅವರನ್ನು ವಿಶೇಷ ಲೋಕಾಯುಕ್ತ ನ್ಯಾಯಾಲಯವು ಮೇ 11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹಿಂದುಳಿದ ವರ್ಗಗಳ ಇಲಾಖೆಯ ಆಯುಕ್ತರಾಗಿದ್ದ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಹೆಸರಿನಲ್ಲಿ ಚೆಕ್ ಪಡೆದು ಆ ಹಣವನ್ನು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪದಡಿ ಮೊಣ್ಣಪ್ಪ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು.
ಆರೋಪಿ ಪರ ವಾದ ಮಂಡಿಸಿದ ವಕೀಲರು, ಆರೋಪಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರಕಾರದ ಪರ ವಕೀಲರು, ಜಾಮೀನಿಗೆ ತಕರಾರು ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ವಿನಂತಿಸಿದರು. ಅದನ್ನು ನ್ಯಾಯಾಲಯ ಮನ್ನಿಸಿ ವಿಚಾರಣೆಯನ್ನು ಮೇ 11ಕ್ಕೆ ಮುಂದೂಡಿತು.