ಕಾರವಾರ: ನೀರು ಪೂರೈಕೆಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ
ಕಾರವಾರ, ಎ.29: ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿ, ಕಲ್ಲೇಶ್ವರ, ಹೆಗ್ಗಾರ ಪುನರ್ವಸತಿ ಕೇಂದ್ರಗಳಲ್ಲಿ ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದ ಕಾರಣ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಜಿಲ್ಲಾಡಳಿತ ಗಂಗಾವಳಿ ಮೂಲಕ ನೀರು ಪೂರೈಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಗ್ರಾಮಸ್ಥರು ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್ ಅವರಿಗೆ ಮನವಿ ಸಲ್ಲಿಸಿದರು.
ಕೊಡಸಳ್ಳಿ ಸಂತ್ರಸ್ತರಿಗೆ ಗಂಗಾವಳಿ ನದಿ ತಟದಲ್ಲಿ ಪುನರ್ವಸತಿ ಕಲ್ಪಿಸಿದ್ದು, ಈ ನದಿಯಿಂದಲೇ ಸಂಪೂರ್ಣ ನೀರಿನ ವ್ಯವಸ್ಥೆ ಕೆಪಿಸಿಎಲ್ ಮಾಡಿಕೊಟ್ಟಿದೆ. ಆದರೆ ಜಿಲ್ಲಾಡಳಿತ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ನೀರಿನ ವ್ಯವಸ್ಥೆ ಸ್ಥಗಿತಗೊಳಿಸಿದೆ. ಇದರಿಂದಾಗಿ 400 ಕುಟುಂಬಗಳಿಗೆ ತೊಂದರೆಯಾಗಿದೆ. ಅಂದಾಜು 800ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಕಾಳುಮೆಣಸು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು, ಪ್ರಸಕ್ತ ನೀರಿಲ್ಲದೇ ಅವು ಸೊರಗುತ್ತಿವೆ ಎಂದು ದೂರಿದರು.
ಅಡಿಕೆ ಹಾಗೂ ತೆಂಗಿನ ಮರಗಳು ನೀರಿಲ್ಲದ ಕಾರಣ ಸೊರಗುತ್ತಿದೆ. ಇವುಗಳನ್ನು ಒಮ್ಮೆ ನಾಟಿ ಮಾಡಿದರೆ ಫಸಲು ಬರಲು ಕನಿಷ್ಠ 8 ರಿಂದ 10 ವರ್ಷಗಳಾಗುತ್ತವೆ. ದೀರ್ಘಾವಧಿಯ ಬೆಳೆಯಾದ್ದರಿಂದ ಪುನಃ ಪುನಃ ನಾಟಿಮಾಡುತ್ತಿರಲು ಸಾಧ್ಯವಿಲ್ಲ. ಬೆಳೆನಾಶವಾದರೆ ಸಂತ್ರಸ್ತರು ಬೀದಿಪಾಲಾಗುತ್ತಾರೆ. ಹೀಗಾದರೆ ನೇರವಾಗಿ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ದೂರಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕೇವಲ 3-4 ಗಂಟೆ ಮಾತ್ರ ವಿದ್ಯುತ್ ಕಲ್ಪಿಸುತ್ತಿದ್ದಾರೆ. ಇನ್ನೂ ಪಕ್ಕದ ಹಳ್ಳಿಗಳಲ್ಲಿ ದಿನ 12 ಕ್ಕೂ ಹೆಚ್ಚು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುತ್ತಾರೆ. ಆದ್ದರಿಂದ ಕೂಡಲೇ ಸಮಸ್ಯೆಗಳ ಬಗ್ಗೆ ಗಮನಹರಿಸಿ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವರಾಮ ಜಿ. ಗಾಂವ್ಕರ್, ಜಿ.ವಿ ಹೆಗಡೆ, ಗೋಪಾಲಕೃಷ್ಣ ವೈದ್ಯ, ರಾಘವೇಂದ್ರ ಗಾಂವ್ಕರ್, ಎಂ.ಪಿ ಭಾಗವತ್, ಪ್ರಸನ್ನ ಭಟ್ ಉಪಸ್ಥಿತರಿದ್ದರು.