ವಿಳಂಬ ಧೋರಣೆ ಖಂಡಿಸಿ ಡಿಸಿಗೆ ಮನವಿ
ಹೊನ್ನಾವರ, ಎ.29: ನೆಮ್ಮದಿ ಕೇಂದ್ರಗಳಲ್ಲಿ ವಿಳಂಬ ಧೋರಣೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಜಿ.ನಾಯ್ಕ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಶುಕ್ರವಾರ ಹೊನ್ನಾವರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ನೆಮ್ಮದಿ ಕೇಂದ್ರಗಳಲ್ಲಿ ಪ್ರತಿದಿನ ಸಾವಿರಾರು ಜನರು ಪಹಣಿ ಪತ್ರಿಕೆ ಮತ್ತಿತರ ಕಾಗದಪತ್ರಗಳಿಗಾಗಿ ಬರುತ್ತಾರೆ. ಆದರೆ ನೆಮ್ಮದಿ ಕೇಂದ್ರಗಳಲ್ಲಿ ಕಂಪ್ಯೂಟರ್, ಪ್ರಿಂಟರ್ ಮತ್ತು ಸಿಬ್ಬಂದಿ ಕೊರತೆಯ ನೆಪವೊಡ್ಡಿ ವಿಳಂಬ ಮಾಡಲಾಗುತ್ತಿದೆ. ಕಂಪ್ಯೂಟರ್ ಸಂಖ್ಯೆಯನ್ನು ಹೆಚ್ಚಿಸಿ, ಹೆಚ್ಚಿನ ಸಿಬ್ಬಂದಿಯರನ್ನು ನೇಮಿಸಿಕೊಳ್ಳಬೇಕು. ರೈತರ ಸಮಯಕ್ಕೂ ಅಷ್ಟೇ ಮಹತ್ವ ಇದೆ ಎಂಬುದನ್ನು ಪರಿಗಣಿಸಿ ಪಹಣಿ ಪತ್ರಿಕೆ ತಕ್ಷಣ ದೊರೆಯುವಂತೆ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಜಿ.ನಾಯ್ಕ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವಿನೋದ ನಾಯ್ಕ ರಾಯಲಕೇರಿ, ಮುಖಂಡರಾದ ಉಮೇಶ್ ನಾಯ್ಕ, ಲೋಕೇಶ್ ಮೇಸ್ತ, ಸುರೇಶ್ ಖಾರ್ವಿ, ಶಂಕರ ನಾಯ್ಕ, ಎಂ.ಎನ್ . ಹೆಗಡೆ, ಸದಾನಂದ ಮೇಸ್ತ ಇತರರು ತಹಶೀಲ್ದಾರ್ ಜಿ.ಎಂ.ಬೋರ್ಕರ್ರವರಿಗೆ ಮನವಿ ಸಲ್ಲಿಸಿದರು.