×
Ad

ಪಿಯು ಪ್ರಶ್ನೆ ಪತ್ರಿಕೆ ಹಗರಣದ ಕಿಂಗ್‌ ಪಿನ್‌ ಶಿವಕುಮಾರಯ್ಯ ಸೆರೆ

Update: 2016-05-03 13:11 IST

ಬೆಂಗಳೂರು,ಮೇ.3: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ತಲೆಮರೆಸಿಕೊಂಡಿದ್ದ ಹಗರಣದ ರೂವಾರಿ, ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಪಿತಾಮಹ ಶಿವಕುಮಾರಯ್ಯ ಆಲಿಯಾಸ್ ಗುರೂಜಿಯನ್ನು ಸಿಐಡಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಈ ಮೂಲಕ ಸೋರಿಕೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಹಗರಣದ ಜಾಡು ಬೇಧಿಸಲು ಸಿಐಡಿ ಪೊಲೀಸರಿಗೆ ಹಾದಿ ಸುಗಮವಾಗಿದೆ.

ಪಿಯುಸಿ ಅಷ್ಟೇ ಅಲ್ಲದೇ ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದಲ್ಲೂ ಈತ ಭಾಗಿಯಾಗಿರುವ ಕುರುಹುಗಳು ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆಯನ್ನು ಚುರುಕುಗೊಳಿಸಲು ಈತನ ಬಂಧನ ಸಹಕಾರಿಯಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 12 ಮಂದಿ ಆರೋಪಿಗಳನ್ನು ಬಂಧಿಸಿರುವ ಸಿಐಡಿ 40 ಅಧಿಕಾರಿಗಳನ್ನೊಳಗೊಂಡ ತಂಡ ಸತತ 1 ತಿಂಗಳ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಶಿವಕುಮಾರ್(67)ನನ್ನು ಬೆಲೆಗೆ ಕೆಡವಿದೆ.

ಸಿಐಡಿಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಕಿಶೋರ್‌ಚಂದ್ರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಬಂಧಿನ ಮೇಲೆ ಬೆಂಗಳೂರಿನಲ್ಲಿ ನಾಲ್ಕು ಮತ್ತು ತುಮಕೂರಿನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಈತನ ಜತೆ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಹೇಳಿದರು.

ಈತನ ಮೇಲೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಸಂಘಟಿತ ಅಪರಾಧ (ಕೋಕಾ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯೇ ಈತನ ದಂಧೆಯಾಗಿದೆ. ಹೆಚ್ಚಿನ ವಿಚಾರಣೆ ನಂತರ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಸ್ಪೋಟಗೊಳ್ಳಲಿವೆ ಎಂದರು.

ಪ್ರಶ್ನೆ ಪತ್ರಿಕೆ ಸೋರಿಕೆ ಬಯಲಾಗುತ್ತಿದ್ದಂತೆ ಕೇರಳ ಇನ್ನಿತರ ಕಡೆಗಳಿಗೆ ಪರಾರಿಯಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಶಿವಕುಮಾರ್ ಕೊನೆಗೆ ನಗರಕ್ಕೆ ಬಂದಿರುವುದನ್ನು ಪತ್ತೆಹಚ್ಚಲಾಯಿತು ಗಾರೆಬಾವಿಪಾಳ್ಯದ ಬಳಿ ಆತ ತಲೆಮರೆಸಿಕೊಂಡಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿ 50 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಪಿಯುಸಿ ಪರೀಕ್ಷೆಯಲ್ಲದೇ ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುತ್ತಿದ್ದ ಕೆಪಿಎಸ್‌ಸಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸೋರಿಕೆಯಲ್ಲಿ ಶಿವಕುಮಾರ್‌ನ ಕೈವಾಡವಿರುವ ಬಗ್ಗೆ ವಿಚಾರಣೆ ನಡೆಸಲಾಗಿದೆ. ನಂದಿನಿಲೇಔಟ್‌ನ ಮನೆಯ ಬಳಿಯೇ ತರಬೇತಿ ನೀಡುತ್ತಿದ್ದ ನಿವೃತ್ತ ಉಪನ್ಯಾಸಕ ಶಿವಕುಮಾರ್ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳ ಪರಿಚಯ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯ ವೇಳೆ ಗೊತ್ತಿರುವ ಅಧಿಕಾರಿಗಳಖಿಗೆ ಹಣದ ಅಮಿಷವೊಡ್ಡಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ಹಣ ಗಳಿಸಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಆರೋಪಿ ಶಿವಕುಮಾರಸ್ವಾಮಿ, ನಂದಿನಿ ಲೇಔಟ್‌ನಲ್ಲಿ ವಾಸಿಸುತ್ತಿದ್ದು ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ ಮಗನೊಂದಿಗೆ ಟ್ಯುಟೋರಿಯಲ್ ನಡೆಸುತ್ತಾ ಪಿಯುಸಿ,ಎಸ್ ಎಸ್ ಎಲ್ ಸಿ,ಇಂಜಿನಿಯರಿಂಗ್ ಎಂಬಿಬಿಎಸ್‌ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುತ್ತಿದ್ದನು.

ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯನ್ನು ಕಳೆದ 10 ವರ್ಷಗಳಿಂದ ನಡೆಸುತ್ತಿದ್ದ ಆರೋಪಿಯು ದಂಧೆಗೆ ಸಹಕಾರಿಯಾಗಲು ಅಯಾ ಮಂಡಳಿಯ ಉನ್ನತ ಅಧಿಕಾರಿಗಳು ಹಾಗೂ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಎನ್ನುವ ಆರೋಪವಿದೆ ಎಂದು ಹೇಳಿದರು.

ಆರೋಪಿ ಶಿವಕುಮಾರನನ್ನು ಸಿಐಡಿ ಪೊಲೀಸರು ಕೋಕಾ ಕುರಿತ ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಆತನನ್ನು ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News