ಹಣ, ಅಧಿಕಾರದಿಂದ ಮನಸ್ಸಿಗೆ ಶಾಂತಿ ಸಿಗದು: ಶ್ರೀಪಾದ್ ಶೆಟ್ಟಿ

Update: 2016-05-04 17:41 GMT

ಭಟ್ಕಳ, ಮೇ 4: ನಾವು ಭಕ್ತಿಯಿಂದ ದೇವರನ್ನು ಸ್ಮರಿಸಿದಾಗ, ನಮ್ಮ ನಡೆ ನುಡಿ ಸತ್ಯದಿಂದ ಇದ್ದಾಗ ನಮಗೆ ದೇವರ ಅನುಗ್ರಹವಾಗುವುದು ಎಂದು ಹಿರಿಯ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಹೇಳಿದ್ದಾರೆ.

ಮುಂಡಳ್ಳಿಯ ಸತ್ಯನಾರಾಯಣ ಮತ್ತು ಶ್ರೀ ಮಹಾಗಣಪತಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಗುರು ಸರ್ವರಿಗೂ ದಾರಿ ತೋರುವವನು, ಅದರೆ ಇಂದು ನಾವು ನಮ್ಮ ಆಸೆಗಳಿಂದಾಗಿ ಗುರುಗಳ ದಾರಿಯನ್ನೇ ಮರೆತಿದ್ದೇವೆ. ಇಂದು ಕೇವಲ ಅಧಿಕಾರ, ಹಣ, ಭೂಮಿ, ಹೆಣ್ಣು, ಆಸ್ತಿಗಳಿಗೆ ಆಕರ್ಷಿತರಾಗಿದ್ದು ಲೌಕಿಕ ಸುಖವನ್ನಷ್ಟೇ ಬಯಸುತ್ತಿದ್ದೇವೆ. ಇದರಿಂದಲೇ ಇಂದು ಸಮಾಜದಲ್ಲಿ ಶಾಂತಿ ಇಲ್ಲದಾಗಿದೆ. ದೇವರ ಸಾನಿಧ್ಯದಲ್ಲಿ ನಾವು ಭಕ್ತಿಯಿಂದ ಬೇಡಿಕೊಂಡಾಗ, ಕ್ತಿಯಿಂದ ತಲೆ ಬಾಗಿದಾಗ ಮಾತ್ರ ನಮಗೆ ಉತ್ತಮ ಪ್ರಜೆಗಳಾಗಲು ಸಾಧ್ಯವಾಗುವುದು ಎಂದರು.

ಕೃಷಿಕ ಸಮಾಜದ ರಾಜ್ಯ ಪ್ರಮುಖ ಶ್ರೀಧರ ಹೆಬ್ಬಾರ್ ಹೇರೂರು ಮಾತನಾಡಿ, ಮುಂಡಳ್ಳಿ ರಾಜ ಮಹಾರಾಜರ ಕಾಲದಿಂದಲೂ ದೇವಾಲಯಗಳ ಬೀಡು. ನೂರಾರು ವರ್ಷಗಳ ಹಿಂದೆ ಬುಕಾನಿನ್ ಎನ್ನವ ಪ್ರವಾಸಿಗ ಕಾಲ್ನಡಿಗೆಯಲ್ಲಿ ಜಿಲ್ಲೆಗೆ ಬಂದಾಗ ಮುಂಡಳ್ಳಿಯನ್ನು ಉಲ್ಲೇಖಿಸುತ್ತಾ 300 ದೇವಸ್ಥಾನಗಳು, 3 ಮಸೀದಿಗಳು ಇಲ್ಲಿದ್ದವು ಎಂದು ಉಲ್ಲೇಖಿಸಿದ್ದಾನೆ. ಮುಂಡಳ್ಳಿಯೆಂದರೆ ಹಿಂದಿನಿಂದಲೂ ಮುಂದುವರಿದ ಊರು ಎಂದರ್ಥವಾಗುತ್ತದೆ. ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬಂತೆ ಇಂದಿಗೂ ಕೃಷಿಕರು ತಮ್ಮ ಶೈಲಿಯಲ್ಲಿ ಜೀವನ ನಡೆಸಿಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ಎಲ್.ಎಸ್.ನಾಯ್ಕ ಮಾತನಾಡಿ, ದೇವಸ್ಥಾನದ ಜೀಣೋದ್ಧಾರ ಕಾರ್ಯದಲ್ಲಿ ಊರಿನ ಯುವಕರ ಹಾಗೂ ಸರ್ವ ನಾಗರಿಕರ ಶ್ರಮ ಅತ್ಯಂತ ಮಹತ್ವದ್ದು. ನಾವು ದೇವರನ್ನು ಪೂಜಿಸಿದಷ್ಟು ನಾವು ಉತ್ತಮ ಪಲವನ್ನೇ ಪಡೆಯುತ್ತೇವೆ. ಪ್ರತಿಯೋರ್ವರೂ ದೇವರನ್ನು ಭಕ್ತಿಯಿಂದ ಪೂಜಿಸಿದಲ್ಲಿ ದೇವರು ಉತ್ತಮ ಫಲ ಕರುಣಿಸುತ್ತಾನೆ ಎಂದರು.

ಕಾರ್ಯಕ್ರಮವನ್ನು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಬಿ.ನಾಯ್ಕ ಉದ್ಘಾಟಿಸಿದರು.

ಸತ್ಯನಾರಾಯಣ ಸೇವಾ ಮಂಡಲದ ಅಧ್ಯಕ ದಾಮೋದರ ಗರ್ಡಿಕರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಗುತ್ತಿಗೆದಾರ ಈಶ್ವರ ನಾಯ್ಕ, ಮಾರಿಕಾಂಬಾ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಪರಮೇಶ್ವರ ನಾಯ್ಕ, ಊರಿನ ಪ್ರಮುಖ ಭಾಸ್ಕರ ಬೈದಿನಮನೆ, ಖಾರ್ವಿ ಸಮಾಜದ ಪ್ರಮುಖ ನಾರಾಯಣ ಖಾರ್ವಿ, ತಾಪಂ ಸದಸ್ಯೆ ರಾಧಾ ವೈದ್ಯ, ಗ್ರಾಪಂ ಉಪಾಧ್ಯಕ್ಷ ನಾಗಪ್ಪನಾಯ್ಕ ಉಪಸ್ಥಿತರಿದ್ದರು.

ಪ್ರಮುಖರಾದ ರಾಜೇಶ ನಾಯ್ಕ ಸ್ವಾಗತಿಸಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಭಾಸ್ಕರ ನಾಯ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News