ಲಿಂಗಾನುಪಾತ ಇಳಿಕೆ: ಮಹಿಳಾ ಆಯೋಗ ಕಳವಳ
ಕಾರವಾರ, ಮೇ 6: ಜಿಲ್ಲೆಯಲ್ಲಿ ಪುರುಷ ಮತ್ತು ಮಹಿಳೆಯರ ಲಿಂಗಾನುಪಾತ ವ್ಯತ್ಯಾಸ ಹೆಚ್ಚಾಗಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಅವರು ಮಹಿಳಾ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 2014-15ನೆ ಸಾಲಿನಲ್ಲಿ ಒಂದು ಸಾವಿರ ಪುರುಷರಿಗೆ 932ಮಹಿಳೆಯರಿದ್ದರು. ಮುಂಡಗೋಡು ತಾಲೂಕಿನಲ್ಲಿ ಇದರ ಪ್ರಮಾಣ 847 ಇದೆ. ಇದು ಗಂಭೀರ ವಿಷಯವಾಗಿದ್ದು, ಇದಕ್ಕೆ ಕಾರಣವನ್ನು ಕಂಡು ಹಿಡಿದು ಪರಿಹಾರ ಹುಡುಕಬೇಕಾಗಿದೆ. ಜಿಲ್ಲೆಯಲ್ಲಿ 72ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳಿದ್ದು, ಇವುಗಳ ಕಾರ್ಯ ಚಟುವಟಿಕೆ ಮೇಲೆ ನಿಗಾವಹಿಸಬೇಕು ಎಂದು ಹೇಳಿದರು.
ಜಾಗೃತ ದಳ ರಚನೆ:
ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಹಾಗೂ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲಿ ಜಾಗೃತ ದಳವನ್ನು ರಚಿಸಲು ಸೂಚನೆ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ 2016ರಲ್ಲಿ ಒಂದು ವರದಕ್ಷಿಣೆ ಹತ್ಯೆ ಪ್ರಕರಣ ದಾಖಲಾಗಿದೆ. ಗಂಡನ ಕಿರುಕುಳ ಪ್ರಕರಣದಲ್ಲಿ 2014ರಲ್ಲಿ 56, 2015ರಲ್ಲಿ 53 ಹಾಗೂ 2016ರಲ್ಲಿ 8ಪ್ರಕರಣಗಳು ದಾಖಲಾಗಿವೆ. ಅಲ್ಲದೇ 2014ರಲ್ಲಿ ಪ್ರಾಪ್ತ ವಯಸ್ಕರ 10 ಹಾಗೂ 2015ರಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ 7 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪೊಸ್ಕೊ ಕಾಯ್ದೆಯಡಿ 2014ರಲ್ಲಿ 16, 2015ರಲ್ಲಿ 11 ಹಾಗೂ 2016ರಲ್ಲಿ ಇದುವರೆಗೆ 5 ಪ್ರಕರಣಗಳು ದಾಖಲಾಗಿವೆ. ಈ ವರ್ಷ 39ಚುಡಾವಣೆ ಪ್ರಕರಣಗಳು ದಾಖಲಾಗಿವೆ. 18 ಪ್ರಕರಣಗಳು ನೇರವಾಗಿ ರಾಜ್ಯ ಮಹಿಳಾ ಆಯೋಗದಲ್ಲಿ ದಾಖಲಾಗಿವೆ ಎಂದರು.
ಘಟಕಕ್ಕೆ ಮೂಲಸೌಕರ್ಯ ಒದಗಿಸಿ: ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಮಹಿಳಾ ಚಿಕಿತ್ಸಾ ಘಟಕಕ್ಕೆ ಸೂಕ್ತ ಮೂಲಸೌಲಭ್ಯ ಒದಗಿಸಬೇಕು. ಪ್ರಸ್ತುತ ಘಟಕದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯಿದ್ದು, ಇದುವರೆಗೆ 39ಪ್ರಕರಣಗಳು ದಾಖಲಾಗಿವೆ. ಘಟಕಕ್ಕೆ ಪ್ರತ್ಯೇಕ ಕೊಠಡಿಯನ್ನು ಒದಗಿಸಬೇಕು ಎಂದು ಅವರು ಹೇಳಿದ್ದಾರೆ.
ಆಂತರಿಕ ಸಮಿತಿ ರಚನೆ: ಎಲ್ಲ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ/ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳ ತನಿಖೆಗೆ ದೂರು ನಿವಾರಣಾ ಸಮಿತಿಯನ್ನು ರಚಿಸಬೇಕು. ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸೂಕ್ತ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಇದುವರೆಗೆ 1,467 ದೂರುಗಳನ್ನು ಸ್ವೀಕರಿಸಲಾಗಿದ್ದು, 1,035 ಪ್ರಕರಣಗಳನ್ನು ಸಂಧಾನ/ಸಮಾಲೋಚನೆ ಮೂಲಕ ಬಗೆಹರಿಸಲಾಗಿದೆ. 85 ಪ್ರಕರಣಗಳಲ್ಲಿ ಮಾತ್ರ ಅಂತಿಮ ಆದೇಶ ಹೊರಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಜಿಪಂ ಸಿಇಒ ರಾಮಪ್ರಸಾದ್ ಮನೋಹರ್, ಅಡಿಷನಲ್ ಎಸ್ಪಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.