×
Ad

ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ನೌಕರರ ಸೇವೆ ಮುಂದುವರಿಸಲು ಮನವಿ

Update: 2016-05-07 22:03 IST

ಕಾರವಾರ, ಮೇ 7: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯು ಸೇವೆಯನ್ನು ಸ್ಥಗಿತಗೊಳಿಸಿರುವ 86 ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ (ಐಸಿಟಿಸಿ) ಕೇಂದ್ರಗಳ 172 ಉದ್ಯೋಗಿಗಳ ಸೇವೆಯನ್ನು ಯಥಾವತ್ತಾಗಿ ಮುಂದುವರಿಸುವಂತೆ ಆಗ್ರಹಿಸಿ ಆರೋಗ್ಯ ಇಲಾಖೆ ಅಡಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯ ಜಿಲ್ಲಾ ಘಟಕದ ಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನಾ ನಿರ್ದೇಶಕರಿಗೆ ಶನಿವಾರ ಮನವಿ ಸಲ್ಲಿಸಿದರು.

ಗುತ್ತಿಗೆ ನೌಕರರು ಕಳೆದ 15 ವರ್ಷಗಳಿಂದ ರಾಜ್ಯಾದ್ಯಂತ ಸಮುದಾಯ ಆರೋಗ್ಯ ಕೇಂದ್ರಗಳು, ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿಯಿಂದ ಸ್ಥಾಪಿಸಲಾದ ಐಸಿಟಿಸಿ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಮತ್ತು ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗಳಲ್ಲಿ ಎಚ್‌ಐವಿ/ಏಡ್ಸ್ ನಿಯಂತ್ರಣ, ಎಚ್‌ಐವಿ ಸೋಂಕಿತರು ಸಮಾಜದಲ್ಲಿ ಉತ್ತಮ ಜೀವನ ನಿರ್ವಹಣೆಗೆ ಪ್ರೇರಣೆಯಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಅಡಿಯಲ್ಲಿ ಸ್ಥಾಪಿಸಲಾದ ಎಲ್ಲ ಐಸಿಟಿಸಿಗಳಿಗೆ ನ್ಯಾಕೋ ಮಾರ್ಗದರ್ಶಿಯಂತೆ ಬೆಂಗಳೂರು ವಿಶ್ವ ವಿದ್ಯಾನಿಲಯದ, ಸೈಕಾಲಜಿ ವಿಭಾಗದ ಮೂಲಕ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಿ, ಆಯ್ಕೆಯಾದ ಮೇಲೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು 2010-11ರಲ್ಲಿ ಯಾವುದೇ ಮಾರ್ಗದರ್ಶಿ ಇಲ್ಲದೆ ಸಿಬ್ಬಂದಿಯ ಅಭಿಪ್ರಾಯಗಳನ್ನು ಕೇಳದೆ ಸೊಸೈಟಿಯ 86 ಐಸಿಟಿಸಿ ಕೇಂದ್ರಗಳನ್ನು ಎನ್‌ಆರ್‌ಎಚ್‌ಎಂಗೆ ವರ್ಗಾಯಿಸಲಾಯಿತು ಎಂದು ದೂರಲಾಗಿದೆ.

ವರ್ಗಾಯಿಸಿದ 86 ಕೇಂದ್ರಗಳನ್ನು ಮಾರ್ಚ್ 2012ಕ್ಕೆ ಸ್ಥಗಿತಗೊಳಿಸಿ ಕೆಲವು ಸಿಬ್ಬಂದಿಗೆ ಉದ್ಯೋಗ ಮುಂದುವರಿಸಲು ಅನುವು ಮಾಡಿಕೊಡಲಾಗಿದ್ದು ಉಳಿದವರನ್ನು ಕೆಲಸದಿಂದ ತೆಗೆಯಲಾಗಿತ್ತು. ಬಳಿಕ 86 ಕೇಂದ್ರಗಳು ಮುಚ್ಚಲಾದ ಕೆಲವೇ ದಿನಗಳಲ್ಲಿ ಸಿಬ್ಬಂದಿಯ ಅಭಿಪ್ರಾಯವನ್ನು ಕೇಳದೆ ಪುನಃ ಕೆಸಾಪ್ಸ್‌ನ 86 ಕೇಂದ್ರಗಳನ್ನು ಎನ್‌ಆರ್‌ಎಚ್‌ಎಂಗೆ ವರ್ಗಾಯಿಸಲಾಯಿತು. ಇದರಿಂದಾಗಿ, ರಾಜ್ಯದಲ್ಲಿ ಒಟ್ಟು 172 ಕೇಂದ್ರಗಳನ್ನು ಮುಚ್ಚಲ್ಪಟ್ಟವು. ಕರ್ನಾಟದ ಹೊರತಾಗಿ ದೇಶದ ಯಾವುದೇ ರಾಜ್ಯದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ (ನ್ಯಾಕೋ) ಕಾರ್ಯಕ್ರಮದಲ್ಲಿರುವ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಗಳ ಸಿಬ್ಬಂದಿಗಳನ್ನು ಎನ್‌ಆರ್‌ಎಚ್‌ಎಂಗೆ ವರ್ಗಾಯಿಸಿದ ಉದಾಹರಣೆಗಳಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹಿಂದೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯಲ್ಲಿದ್ದ ಹಿರಿಯ ಅಧಿಕಾರಿಗಳು ಮಾಡಿದ ಈ ರೀತಿಯ ನಿರ್ಣಯಗಳಿಂದ 344 ಸಿಬ್ಬಂದಿ ಕೆಲಸ ಕಳೆದುಕೊಳ್ಳುವಂತಾಯಿತು. ಈ ಉದ್ಯೋಗವನ್ನೇ ಜೀವನಾಧಾರವಾಗಿ ಬದುಕು ಕಟ್ಟುಕೊಂಡಿದ್ದ ನಮ್ಮವರ 172 ಕುಟುಂಬಗಳು ಇಂದು ಬೀದಿಗೆ ಬಂದಿವೆ. ಇದರಿಂದಾಗಿ ಆ ನೌಕರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಮನವಿಯಲ್ಲಿ ದೂರಿದ್ದಾರೆ.

 ಉತ್ತರ ಕನ್ನಡ ಜಿಲ್ಲೆಯಲ್ಲಿಯೂ 4 ಐಸಿಟಿಸಿ ಕೇಂದ್ರಗಳು ಎನ್.ಆರ್.ಎಚ್.ಎಂ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆಯಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 7 ಸಿಬ್ಬಂದಿ ಕೆಲಸ ಕಳೆದು ಕೊಳ್ಳುವಂತಾಗಿದೆ. ಹಿಂದೆ ಈ ಬಗ್ಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ವೇಳೆಯಲ್ಲಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈ ಬಗ್ಗೆ ಇನ್ನು ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ .

ಎನ್.ಆರ್‌ಎಚ್.ಎಂ ಗೆ ವರ್ಗಾಯಿಸಿದ್ದ 86 ಐಸಿಟಿಸಿಗಳ ಕೆಸಾಪ್ಸ್ ಅಡಿಯಲ್ಲಿ ತಂದು, 172 ಸಿಬ್ಬಂದಿಗಳ ಸೇವೆಯ ಒಪ್ಪಂದವನ್ನು ನವೀಕರಣ ಮಾಡಿ ಮುಂದುವರಿಸಬೇಕೆಂದು ಒತ್ತಾಯಿಸಿರುವ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಉದ್ಯೋಗ ಕಳೆದು ಕೊಂಡಿರುವ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಎಲ್ಲ ಎಆರ್‌ಟಿ, ಐಸಿಟಿಸಿ, ಡಿಎಸ್‌ಆರ್‌ಸಿ ಮತ್ತು ರಕ್ತನಿಧಿ ಕೇಂದ್ರಗಳ ಕಾರ್ಯವನ್ನು ಸ್ಥಗಿತಗೊಳಿಸಿ, ಅನಿರ್ದಿಷ್ಟ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯ ಮುಖಂಡರು ಹಾಗೂ ಜಿಲ್ಲಾ ಗುತ್ತಿಗೆ ನೌಕರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News