ನೀರು ಪೂರೈಸುವಂತೆ ಆಗ್ರಹಿಸಿ ಖಾಲಿ ಕೊಡ ಹಿಡಿದು ಧರಣಿ
ಕಾರವಾರ, ಮೇ 11: ಕಳೆದ ಕೆಲವು ದಿನಗಳಿಂದ ತಾಲೂಕಿನ ಅಸ್ನೋಟಿ ಗ್ರಾಪಂ ವ್ಯಾಪ್ತಿಯಲ್ಲಿ ಜಲ ಕ್ಷಾಮದಿಂದ ಜನರು ಕಂಗಾಲಾಗಿದ್ದು ಸೂಕ್ತ ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂದು ಅಸ್ನೋಟಿ ಗ್ರಾಮಸ್ಥರು ಖಾಲಿ ಕೊಡ ಪ್ರದರ್ಶಿಸುವ ಮೂಲಕ ತಾಲೂಕು ಆಡಳಿತದ ವಿರುದ್ಧ ಧರಣಿ ನಡೆಸಿದರು.
ಕಾರವಾರದ ಅಸ್ನೋಟಿ ಗ್ರಾಪಂ ವ್ಯಾಪ್ತಿಯ ಅಂಬೇವಾಡಾ, ಪ್ಲೊಟ್, ಮಡ್ಡಿಮಕ್ಕಿ, ಮಧ್ಯವಾಡಾ, ಭಗತ್ವಾಡಾ, ಹೊಸಾಳಿ ಕ್ರಾಸ್ ಸೇರಿದಂತೆ ವಿವಿಧೆಡೆಯ ನೀರಿನ ಮೂಲಗಳೆಲ್ಲ ಬತ್ತಿ ಹೋಗಿವೆ. ಗ್ರಾಪಂನಿಂದ ನಾಲ್ಕೈದು ದಿನಕೊಮ್ಮೆ ನೀರು ಪೂರೈಸುತ್ತಿದ್ದರೂ ಸಾಲುತ್ತಿಲ್ಲ ಎನ್ನುವುದು ಧರಣಿಕಾರರ ಅಳಲಾಗಿದ್ದು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಶಾಸಕ ಸತೀಶ್ ಸೈಲ್, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ಅಸ್ನೋಟಿ ಗ್ರಾಪಂ ಪಿಡಿಒ ನೀರಿನ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ಈಗ ಕೇಳಿದರೆ ನೀರಿನ ಮೂಲಗಳಲ್ಲಿ ಸಾಕಷ್ಟು ನೀರಿಲ್ಲ ಎನ್ನುತ್ತಾರೆ. ನಾಲ್ಕು ದಿನಕ್ಕೊಮ್ಮೆ ನೀರು ನೀಡಿದರೆ ಹೇಗೆ ಸಾಕಾಗುತ್ತದೆ. ಪಿಡಿಒ ನಿರ್ಲಕ್ಷದಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ ಎಂದು ತಾಪಂ ಸದಸ್ಯ ಸುರೇಂದ್ರ ಗಾಂವ್ಕರ ದೂರಿದರು. ಗ್ರಾಪಂ ವ್ಯಾಪ್ತಿಯ ಬಹುತೇಕ ಮನೆಗಳಲ್ಲಿ ನಳ ಅಳವಡಿಸಲಾಗಿದೆ. ಆದರೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರಿಗೆ ತೊಂದರೆಯಾದರೆ ಟ್ಯಾಂಕರ್ ಮೂಲಕ ನೀರು ನೀಡಬೇಕೆಂದು ಸರಕಾರ ಆದೇಶಿಸಿದೆ. ಗ್ರಾಪಂ ಟ್ಯಾಂಕರ್ ನೀರು ನೀಡುತ್ತಿಲ್ಲ ಎಂದು ಸ್ಥಳೀಯ ಮಹಿಳೆ ನಿಖಿತಾ ಆರೋಪಿಸಿದರು. ಕೆರೆಗಳನ್ನು ಕಾಲಕಾಲಕ್ಕೆ ಹೂಳೆತ್ತಿ ಸುಸ್ಥಿತಿಯಲ್ಲಿ ಇಟ್ಟಿದ್ದರೆ ಪ್ರಸಕ್ತ ವರ್ಷ ಈ ರೀತಿ ನೀರಿನ ತೊಂದರೆಯಾಗುತ್ತಿರಲಿಲ್ಲ. ಅಧಿಕಾರಿಗಳ ಹಾಗೂ ಗ್ರಾಪಂನವರ ನಿರ್ಲಕ್ಷದಿಂದ ನಮ್ಮೂರಿಗೆ ನೀರಿನ ಅಭಾವ ಕಾಡುತ್ತಿದೆ. ನೀರು ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದ್ದು ಬೇರೆ ಸಬೂಬು ನಮಗೆ ಬೇಕಾಗಿಲ್ಲ. ನೀರು ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. ಅಲ್ಲದೆ ಸ್ಥಳಕ್ಕೆ ಗ್ರಾಪಂ ಅಧ್ಯಕ್ಷರು ಹಾಗೂ ಶಾಸಕರು ಬರುವಂತೆ ಧರಣಿಕಾರರು ಪಟ್ಟು ಹಿಡಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸತೀಶ ಸೈಲ್, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಗ್ರಾಮಸ್ಥರಿಗೆ ಯಾವುದೇ ತೊಂದರೆಯಾದರೂ ನೇರವಾಗಿ ನನ್ನನ್ನು ಭೇಟಿ ಮಾಡಿ. ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ನೀಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿದ್ದು ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ನೀರು ನೀಡಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಒಂದು ವಾರದೊಳಗೆ ನೀರಿನ ಸಮಸ್ಯೆ ಬಗೆಹರಿಯದ ಪಕ್ಷದಲ್ಲಿ ರಸ್ತೆ ತಡೆ ನಡೆಸುವುದಾಗಿ ಗ್ರಾಮಸ್ಥರು ಶಾಸಕರ ಸಮ್ಮುಖದಲ್ಲಿಯೇ ಅಧಿಕಾರಿಗಳಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ್ಕುಮಾರ್, ತಹಶೀಲ್ದಾರ್ ಜಿ.ಎನ್.ನಾಯ್ಕ, ಜಿಪಂ ಹಾಗೂ ತಾಪಂ ಸದಸ್ಯರು ಉಪಸ್ಥಿತರಿದ್ದರು.