ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ
Update: 2016-05-11 21:35 IST
ಮಡಿಕೇರಿ, ಮೇ 11: ದಕ್ಷಿಣ ಕೊಡಗಿನ ತೋಟಗಳಲ್ಲಿ ಬೀಡುಬಿಟ್ಟಿರುವ 11 ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿಗಳ ಮೂಲಕ ಕಾಡಿಗಟ್ಟುವ ಪ್ರಯತ್ನ ನಡೆಯಿತು.
ಚೆೆನ್ನಂಗೊಲ್ಲಿ ಹಾಗೂ ದೇವರಪುರ ಭಾಗಗಳ ತೋಟಗಳಲ್ಲಿ ತಿತಿಮತಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟುವ ಪ್ರಯತ್ನ ನಡೆಸಿದರು. ಚೆನ್ನಂಗೊಲ್ಲಿ ಮಾನಿಲ್ ಅಯ್ಯಪ್ಪ ದೇವರಕಾಡು ಹಾಗೂ ಒತ್ತಿನಲ್ಲಿ ಸುಮಾರು 6 ಆನೆಗಳನ್ನು ಸಿಬ್ಬಂದಿ ಪತ್ತೆ ಹಚ್ಚಿದರು. ಇದರೊಂದಿಗೆ ಸಮೀಪದ ದೇವರಪುರ ರಾಜೇಶ್ವರಿ ಶಾಲೆ ಸಮೀಪ 5 ಆನೆಗಳನ್ನು ಪತ್ತೆಹಚ್ಚಿ ಕಾಡಿಗಟ್ಟಲು ಪ್ರಯತ್ನ ನಡೆಸಿದರು.
ಕತ್ತಲು ಆವರಿಸಿದ ಕಾರಣ ಕಾರ್ಯಾಚರಣೆಗೆ ತೊಡಕುಂಟಾಯಿತು. ಆನೆಗಳು ಕಾಡಿಗೆ ಸೇರದಿದ್ದಲ್ಲಿ ಕಾರ್ಯಾಚರಣೆಯನ್ನು ಗುರುವಾರ ಕೂಡ ಮುಂದುವರಿಸುವ ಬಗ್ಗೆ ಅರಣ್ಯ ಅಧಿಕಾರಿಗಳು ನಿರ್ಧರಿಸಿದ್ದಾರೆ.